ರಾಜಕೀಯರಾಜ್ಯಸುದ್ದಿ

ನಾಳೆ, ನಾಡಿದ್ದು ಉಳಿದ ಅಭ್ಯರ್ಥಿಗಳ ಟಿಕೆಟ್ ಘೋಷಣೆ: ಬಸವರಾಜ ಬೊಮ್ಮಾಯಿ

ಚಿತ್ರದುರ್ಗ: ಬಿಜೆಪಿ ಎಲ್ಲ ನಿಷ್ಠಾವಂತರಿಗೇ ಟಿಕೆಟ್ ಕೊಟ್ಟಿದೆ. ಉಳಿದ ಕ್ಷೇತ್ರಗಳ ಟಿಕೆಟ್ ನಾಳೆ ಅಥವಾ ನಾಡಿದ್ದು ಹೆಸರು ಪ್ರಕಟ ಆಗುತ್ತದೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಚಿತ್ರದುರ್ಗದಲ್ಲಿ ಮಾದಾರ ಚೆನ್ನಯ್ಯ ಸ್ವಾಮೀಜಿಯವರನ್ನು ಭೇಟಿ ಮಾಡಿ ಆಶಿರ್ವಾದ ಪಡೆದು ನಂತರ ಮಾತನಾಡಿದ ಅವರು, ಚುನಾವಣೆಗೂ ಮುನ್ನ ಶ್ರೀಗಳ ದರ್ಶನಕ್ಕೆ ಬಂದಿದ್ದೇವೆ. ಒಳ್ಳೆಯ ಕಾರ್ಯ ಮಾಡುವಂತೆ ಶ್ರೀಗಳು ತಿಳಿಸಿದ್ದಾರೆ. ನಾನು ಅದೇ ರೀತಿ ಕೆಲಸ‌ ಮಾಡಿಕೊಂಡು ಬಂದಿದ್ದೇನೆ ಎಂದರು‌.

ಚಿತ್ರದುರ್ಗ ಲೋಕಸಭಾ ಟಿಕೆಟ್  ಘೋಷಣೆ ಕುರಿತು ಪಾರ್ಲಿಮೆಂಟ್ರಿ ಬೋರ್ಡ್ ಕಮಿಟಿಯಲ್ಲಿ ಚರ್ಚೆ ಆಗಿದೆ. ಮಾದಾರ ಚೆನ್ನಯ್ಯ ಶ್ರೀಗಳ ಹೆಸರು ಕೇಳಿ ಬಂದ ವಿಚಾರ ನಾನು ಎಲ್ಲೂ ಚರ್ಚೆ ಮಾಡಿಲ್ಲ. ಹಾಲಿ ಎಂಪಿಗೆ ಟಿಕೆಟ್ ತಪ್ಪುತ್ತದೆ ಅನ್ನುವುದು ಊಹಾಪೋಹಾ ಎಂದು ಹೇಳಿದರು.

 ಶಿವಮೊಗ್ಗದಲ್ಲಿ ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಸಭೆ ಕರೆದ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಈಶ್ವರಪ್ಪ ಅವರೊಂದಿಗೆ ನಾನು, ನಮ್ಮ ವರಿಷ್ಠರು ಮಾತನಾಡಿದ್ದೇವೆ. ಎಲ್ಲಾ ಸರಿಹೋಗತ್ತದೆ‌ ಏನು ಆಗುವುದಿಲ್ಲ. ಹಾವೇರಿ ಸಂಸದ ಶಿವಕುಮಾರ ಉದಾಸಿ ಕೂಡ ನಮ್ಮ‌ ಜೊತೆಗೆ ಬರುತ್ತಾರೆ ಎಂದರು. ನಾನು ಕಳೆದ 34 ವರ್ಷಗಳಿಂದ ರಾಜಕಾರಣದಲ್ಲಿದ್ದೇನೆ. ನನಗೆ ದೊಡ್ಡ ಪ್ರಮಾಣದ ಬೆಂಬಲಿಗರಿದ್ದಾರೆ. ನಾನು ಎರಡು ಬಾರಿ ಸ್ಥಳೀಯ ಸಂಸ್ಥೆಗಳಿಂದ ಪರಿಷತ್ ಸದಸ್ಯರಾಗಿ ಆಯ್ಕೆ ಜನರ ಜೊತೆಗಿದ್ದು ಕೆಲಸ ಮಾಡಿರುವುದರಿಂದ ಸಾಕಷ್ಟು ಜನ ಬೆಂಬಲಿಗರಿದ್ದಾರೆ ಎಂದರು.

ಇದೇ ವೇಳೆ ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ  ವಿರುದ್ಧ ಕೇಳಿ ಬಂದಿರುವ ಪೋಕ್ಸೊ ಪ್ರಕರಣದ ಕುರಿತು ಪ್ರತಿಕ್ರಿಯಿಸಿದ ಅವರು, ಈಗಾಗಲೇ ಗೃಹ ಸಚಿವರು ಹೇಳಿಕೆ ಕೊಟ್ಟಿದ್ದಾರೆ. ಅದನ್ನು ಜವಾಬ್ದಾರಿಯಿಂದ ತನಿಖೆ ಮಾಡಬೇಕು ಎಂದು ಹೇಳಿದ್ದಾರೆ. ದೂರು ಕೊಟ್ಟವರು ಈ ಹಿಂದೆ ಬೇರೆಯವರ ಮೇಲೆ‌ ದೂರು ಕೊಟ್ಟಿದ್ದು, ಮಾನಸಿಕ ಅಸ್ವಸ್ಥತೆ ಕುರಿತು ವಿಚಾರಣೆ ಮಾಡುವುದಾಗಿ ಹೇಳಿದ್ದಾರೆ. ರಾಜಕಾರಣದಲ್ಲಿ ಯಡಿಯೂರಪ್ಪ ಅವರ ಹೆಸರಿಗೆ ಕಳಂಕ ತರುವಪ್ರಯತ್ನ ಮಾಡುತ್ತಾರೆ. ಇದರಲ್ಲಿ ಯಾವುದೇ ಸದುದ್ದೇಶ ಇಲ್ಲ. ತನಿಖೆಯಲ್ಲಿ ಸತ್ಯ ಹೊರಬರುತ್ತದೆ ಎನ್ನುವ ನಂಬಿಕೆ ಇದೆ. ಚುನಾವಣೆ ಸಂದರ್ಭದಲ್ಲಿ ಇಂಥ ಘಟನೆಗಳು ನಡೆಯುತ್ತವೆ.  ಸತ್ಯಕ್ಕೆ ಯಾವತ್ತೂ ಜಯವಾಗುತ್ತದೆ ಎಂದು ಹೇಳಿದರು.

 

Comments (0)

Your email address will not be published. Required fields are marked *

Back to top button