ರಾಜಕೀಯರಾಜ್ಯಸುದ್ದಿ

ಬೆಂಗಳೂರು ಶಿಕ್ಷಕರ ಕ್ಷೇತ್ರದಲ್ಲಿ ಮತ್ತೆ ಪುಟ್ಟಣ್ಣನದ್ದೇ ಹವಾ.. ​BJP-JDS ಮೈತ್ರಿ ಅಭ್ಯರ್ಥಿಗೆ ಸೋಲು

ಬೆಂಗಳೂರು: ಬೆಂಗಳೂರು ಶಿಕ್ಷಕರ ಕ್ಷೇತ್ರದ ಉಪಚುನಾವಣೆಯಲ್ಲಿ 1,507 ಮತಗಳ ಅಂತರದಿಂದ ಕಾಂಗ್ರೆಸ್​ ಅಭ್ಯರ್ಥಿ ಪುಟ್ಟಣ್ಣ ಗೆಲುವು ಸಾಧಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಸರ್ಕಾರಿ ಕಲಾ ಕಾಲೇಜಿನ ಮುಂದೆ ಕಾಂಗ್ರೆಸ್ ಕಾರ್ಯಕರ್ತರೆಲ್ಲ ಪುಟ್ಟಣ್ಣ ಪರ ಜೈಕಾರ ಹಾಕಿ ಸಂಭ್ರಮಾಚರಣೆಯಲ್ಲಿ ತೊಡಗಿಕೊಂಡಿದ್ದಾರೆ.

ಚುನಾವಣಾ ಮತ ಎಣಿಕೆಯಲ್ಲಿ ಕಾಂಗ್ರೆಸ್​ ಅಭ್ಯರ್ಥಿ ಪುಟ್ಟಣ್ಣ ಒಟ್ಟು 8,260 ವೋಟ್​ಗಳನ್ನು ಪಡೆದು ಅಭೂತಪೂರ್ವ ಗೆಲುವನ್ನು ಪಡೆದರು. ಆದರೆ ಜೆಡಿಎಸ್-​ಬಿಜೆಪಿ ಮೈತ್ರಿ ಅಭ್ಯರ್ಥಿ ಎಪಿ ರಂಗನಾಥ್ ಅವರು 6,753 ಮತಗಳನ್ನು ಗಳಿಸುವ ಮೂಲಕ 1,507 ಮತಗಳ ಅಂತರದಿಂದ ಸೋಲೋಪ್ಪಿಕೊಂಡರು. ಇನ್ನು ಈ ಎಲೆಕ್ಷನ್​​ನಲ್ಲಿ ಒಟ್ಟು 1,239 ಮತಗಳು ತಿರಸ್ಕೃತಗೊಂಡಿವೆ.

ಬೆಂಗಳೂರು ಶಿಕ್ಷಕರ ಕ್ಷೇತ್ರದ ಉಪಚುನಾವಣೆಗೆ ಎಪಿ ರಂಗನಾಥ್ ಜೆಡಿಎಸ್-​ಬಿಜೆಪಿ ಮೈತ್ರಿ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿದ್ರೆ, ಕಾಂಗ್ರೆಸ್ ಅಭ್ಯರ್ಥಿಯಾಗಿ ಪುಟ್ಟಣ್ಣ ಸ್ಪರ್ಧೆ ಮಾಡಿದ್ದರು. ಇಂದು ನಡೆದ ಮತ ಎಣಿಕೆಯ 2ನೇ ಸುತ್ತಿನಲ್ಲಿ ಮುನ್ನಡೆ ಕಾಯ್ದುಕೊಂಡಿದ್ದ ಪುಟ್ಟಣ್ಣ ಅವರು 7,069 ಮತಗಳನ್ನು ಪಡೆದಿದ್ರೆ, ಎಪಿ ರಂಗನಾಥ್ 5,574 ವೋಟ್ ಪಡೆದಿದ್ದರು. ಈ ವೇಳೆ 1,505 ಮತಗಳ ಮುನ್ನಡೆಯನ್ನು ಪುಟ್ಟಣ್ಣ ಪಡೆದುಕೊಂಡಿದ್ದರು.

ಹಾಗೇ 3ನೇ ಸುತ್ತಿನಲ್ಲೂ ಮುನ್ನಡೆ ಕಾಯ್ದುಕೊಂಡ ಪುಟ್ಟಣ್ಣ ಗೆಲುವು ಪಡೆದುಕೊಂಡರು. ಇನ್ನೇನಿದ್ದರೂ ಕಾಂಗ್ರೆಸ್ ಅಭ್ಯರ್ಥಿ ಪುಟ್ಟಣ್ಣ ಗೆದ್ದಿದ್ದಾರೆ ಎಂದು ಅಧಿಕೃತವಾದ ಘೋಷಣೆ ಮಾತ್ರ ಬಾಕಿಯಿದೆ. ಪುಟ್ಟಣ್ಣನವರು ಗೆದ್ದಿದ್ದಾರೆ ಎಂದು ಸುದ್ದಿ ತಿಳಿಯುತ್ತಿದ್ದಂತೆ ಸಾಕಷ್ಟು ಕಾಂಗ್ರೆಸ್​ ಕಾರ್ಯಕರ್ತರು ಸರ್ಕಾರಿ ಕಲಾ ಕಾಲೇಜಿನ ಮುಂದೆ ಸಂಭ್ರಮಾಚರಣೆ ಮಾಡಿದ್ದಾರೆ.

ಬೈಎಲೆಕ್ಷನ್​​ನಲ್ಲಿ ಗೆಲುವು ಸಾಧಿಸುತ್ತಿದ್ದಂತೆ ಮಾತನಾಡಿದ ಪುಟ್ಟಣ್ಣ ಅವರು, ಕಳೆದ 3 ಬಾರಿಯಿಂದ ಮೊದಲ ಸುತ್ತಿನಲ್ಲೇ ಗೆಲುವು ಪಡೆಯುತ್ತಿದ್ದೇನೆ. ಈ ಗೆಲುವನ್ನು ಶಿಕ್ಷಕ ಸಮುದಾಯಕ್ಕೆ ಅರ್ಪಿಸುತ್ತೇನೆ. ಶಿಕ್ಷಕ ಸಮುದಾಯದ ಹಿತ ಕಾಯುವಂತ ಕೆಲಸ ಮಾಡುತ್ತಿದ್ದೇನೆ. ಮೊದಲಿಂದಲೂ ನಂಬಿಕೆ ಉಳಿಸಿಕೊಂಡು ಕೆಲಸ ಮಾಡುತ್ತಿದ್ದೇನೆ. ಕಾರ್ಯಕರ್ತರ ವೋಟ್​ ಅಲ್ಲ, ಶಿಕ್ಷಕರ ವೋಟ್​ ಇದು. ಸೋತಿರುವವರು ಪಾಪ ಆರೋಪ ಮಾಡಲೇಬೇಕು. ಅವರ ಮನಸ್ಸಿಗೆ ಸಾಂತ್ವನ ಹೇಳಿಕೊಳ್ಳಬೇಕು ಅದಕ್ಕೆ ಹೇಳಿದ್ದಾರೆ. ಚುನಾವಣೆಯಲ್ಲಿ ಸೋತು, ಸೋತೂ ಕೊನೆಗೆ ಅವರು ಒಮ್ಮೆ ಲಾಯರ್ ಚುನಾವಣೆ ಗೆದ್ದಿದ್ದರು. ನನ್ನನ್ನು ಸೋಲಿಸಲೇಬೇಕು ಅಂತ ಬಿಜೆಪಿ-ಜೆಡಿಎಸ್ ಮೈತ್ರಿ ಮಾಡಿಕೊಂಡಿದ್ದರು. ಆದರೂ ಶಿಕ್ಷಕರು ನನ್ನ ಮೇಲೆ ನಂಬಿಕೆ ಇಟ್ಟು ಈ ಗೆಲುವು ಕೊಟ್ಟಿದ್ದಾರೆ ಎಂದು ಹೇಳಿದ್ದಾರೆ.

Comments (0)

Your email address will not be published. Required fields are marked *

Back to top button