
ಬೆಂಗಳೂರು : ಕೇಂದ್ರದ ಗೃಹ ಸಚಿವ ಅಮಿತ್ ಶಾ ಬರಿಗೈಯಲ್ಲಿ ರಾಜ್ಯಕ್ಕೆ ಬಂದಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು. ಅಮಿತ್ ಶಾ ರಾಜ್ಯ ಪ್ರವಾಸ ವಿಚಾರವಬಾಗಿ ಮಾತನಾಡಿದ ಅವರು, ಇವತ್ತಿನವರೆಗೂ ಬರ ಬಗ್ಗೆ ಒಂದು ಸಭೆ ಮಾಡಿಲ್ಲ. ರೈತರ ಬಗ್ಗೆ, ದೇಶದ ಬಗ್ಗೆ, ಬಡವರ ಬಗ್ಗೆ ಅವರಿಗೆ ಮಾತಾಡುವ ನೈತಿಕತೆ ಇಲ್ಲ. ರೈತರು ಕಷ್ಟ ಪಡ್ತಿದ್ದಾರೆ, ನೀರಿಗೆ ಸಮಸ್ಯೆ ಇದೆ, ಕೆಲಸಕ್ಕೆ ಕಷ್ಟ ಇದೆ. ನರೇಗಾದಡಿ ಬರಗಾಲ ಇದ್ದಾಗ ಕೆಲಸದ ದಿನಗಳನ್ನು 150ಕ್ಕೆ ಏರಿಸಬೇಕು. ಇದರ ಬಗ್ಗೆ ಪತ್ರ ಕೊಟ್ಟಿದೀವಿ, ಇವತ್ತಿನವರೆಗೆ ಇದಕ್ಕೂ ಅನುಮತಿ ಕೊಟ್ಟಿಲ್ಲ ಎಂದು ಹೇಳಿದರು.

ಸಿಎಂ ತವರು ಜಿಲ್ಲೆಯಿಂದ ಅಮಿತ್ ಶಾ ಚುನಾವಣಾ ರಣಕಹಳೆ ವಿಚಾರವಾಗಿ ಮಾತನಾಡಿದ ಅವರು, ರಣ ಕಹಳೆ ಅಂದರೇನು? ನೀವು ಬಳಸುವ ಪದ ಇದೆಯಲ್ಲ ಕಹಳೆ, ಏನದು? ನಾವು ಈ ಸಲ ಮೈಸೂರು, ಚಾಮರಾಜನಗರ ಎರಡೂ ಕಡೆಯೂ ಗೆಲ್ತೇವೆ ಎಂದು ಸ್ಪಷ್ಟ ಪಡಿಸಿದ್ರು.
ತೆರಿಗೆ ಹಂಚಿಕೆ ಬಗ್ಗೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿಕೆಗೆ ಜೆಡಿಎಸ್ ವರಿಷ್ಠ ಹೆಚ್ಡಿ ದೇವೇಗೌಡ ಬೆಂಬಲ ನೀಡಿರುವುದಕ್ಕೆ ಸಿಎಂ ಸಿದ್ದರಾಮಯ್ಯ ಅಸಮಾಧಾನ ವ್ಯಕ್ತಪಡಿಸಿದರು. ದೇವೇಗೌಡರು ಈಗ ಬಿಜೆಪಿಯವರ ಜತೆ ಸೇರಿಕೊಂಡಿದ್ದಾರೆ. ಅದಕ್ಕೆ ನಿರ್ಮಲಾ ಸೀತಾರಾಮನ್ ಹೇಳಿಕೆ ಸರಿ ಅಂದಿದ್ದಾರೆ. ದೇವೇಗೌಡರು, ನಾನು ಮುಂದಿನ ಜನ್ಮ ಅಂತ ಇದ್ರೆ ಮುಸ್ಲಿಮನಾಗಿ ಹುಟ್ತೀನಿ ಅಂದಿದ್ರು. ಈಗ ಏನ್ ಹೇಳ್ತಾರೆ ದೇವೇಗೌಡರು? ನಾವು ಇದನ್ನೆಲ್ಲ ಹೇಳೋಕ್ಕೆ ಹೋಗಬಾರದು. ದೇವೇಗೌಡರು ಯಜಮಾನರು, ಮಾಜಿ ಪ್ರಧಾನಿಗಳು ಹೀಗೆಲ್ಲ ಹೇಳಬಾರದು. ಬಿಜೆಪಿ ಜತೆ ಮೈತ್ರಿ ಇದೆ ಅಂತ ಅವರು ಮಾಡಿರುವ ಅನ್ಯಾಯವೆಲ್ಲ ಸರಿ ಅಂತ ಹೇಳಬಾರದು ಎಂದು ಸಿದ್ದರಾಮಯ್ಯ ಹೇಳಿದರು.




