ಲೋಕಸಭೆ ಚುನಾವಣೆ ಸಂದರ್ಭದಲ್ಲಿ ರಾಜ್ಯ ರಾಜಕಾರಣದಲ್ಲಿ ಸುಂಟರಗಾಳಿಯನ್ನೇ ಎಬ್ಬಿಸುವಂತಹ ಅನೂಹ್ಯ ಪ್ರಕರಣವೊಂದು ವರದಿ ಆಗಿದೆ. ಮಧ್ಯರಾತ್ರಿ ಮಾಜಿ ಮುಖ್ಯಮಂತ್ರಿ, ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿಎಸ್ ಯಡಿಯೂರಪ್ಪ ವಿರುದ್ಧ ಅಪ್ರಾಪ್ತೆಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಡಿ(ಪೋಕ್ಸೋ ಕೇಸ್)ಎಫ್ಐಆರ್ ದಾಖಲಾಗಿದೆ
17 ವರ್ಷದ ಅಪ್ರಾಪ್ತೆಗೆ ಫೆಬ್ರವರಿ 02ರಂದು ಬೆಳಗ್ಗೆ 11 ಗಂಟೆಯಿಂದ 11.30ರ ಅವಧಿಯಲ್ಲಿ ಯಡಿಯೂರಪ್ಪ ನಿವಾಸ,6ನೇ ಕ್ರಾಸ್, ಆರ್ಎಂವಿ 2ನೇ ಹಂತ, ಬೆಂಗಳೂರು.. ಇಲ್ಲಿ 81 ವರ್ಷದ ಯಡಿಯೂರಪ್ಪ ಲೈಂಗಿಕ ಕಿರುಕುಳ ನೀಡಿದ್ದಾರೆ ನೀಡಿದ್ದಾರೆ ಎಂದು ಸದಾಶಿವನಗರ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ಮಧ್ಯರಾತ್ರಿ ಸದಾಶಿವನಗರ ಠಾಣೆಗೆ ಬಂದ ಲಿಂಗಾಯತ ಸಮುದಾಯದ ಸಂತ್ರಸ್ತೆ ಮತ್ತು ತಾಯಿ ನೀಡಿದ ದೂರಿನ ಮೇರೆಗೆ ರಾಜ್ಯ ಬಿಜೆಪಿಯ ಅತ್ಯುನ್ನತ ನಾಯಕ ಯಡಿಯೂರಪ್ಪ ವಿರುದ್ಧ ಪೊಲೀಸರು ಕೇಸ್ ನಮೂದಿಸಿದ್ದಾರೆ. ಭಯದಿಂದ ಇಷ್ಟು ದಿನ ದೂರು ನೀಡಿರಲಿಲ್ಲ ಎಂದು ವಿಳಂಬಕ್ಕೆ ಕಾರಣವನ್ನು ನೀಡಿದ್ದಾರೆ.
ರೂಮ್ಗೆ ಕರೆದುಕೊಂಡು ಹೋಗಿ ಎದೆಗೆ ಕೈ ಹಾಕಿದರು!
ಸಂತ್ರಸ್ತೆ ತಾಯಿ ಮಾಡಿರುವ ಆರೋಪ ಏನು?
ಫೆಬ್ರವರಿ 2ರಂದು ನಾನು ಮತ್ತು ನನ್ನ ಪುತ್ರಿ ಯಡಿಯೂರಪ್ಪ ಮನೆಗೆ ಹೋಗಿದ್ದೆವು. ಈ ಹಿಂದಿನ ಅತ್ಯಾಚಾರ ಪ್ರಕರಣದಲ್ಲಿ ನನ್ನ ಮಗಳಿಗೆ ನ್ಯಾಯ ಸಿಕ್ಕಿಲ್ಲ.. ನಮ್ಮ ಪ್ರಕರಣವನ್ನು ಎಸ್ಐಟಿಗೆ ವಹಿಸುವಂತೆ ಮಾಡಿ, ನ್ಯಾಯ ಕೊಡಿಸಿ ಎಂದು ಕೇಳಿಕೊಂಡೆವು. ಸುಮಾರು 9 ನಿಮಿಷ ನಮ್ಮೊಂದಿಗೆ ಯಡಿಯೂರಪ್ಪ ಮಾತನಾಡಿದರು. ನಮಗೆ ಟೀ ಕುಡಿಸಿದರು. ನನ್ನ ಮಗಳ ಕೈ ಹಿಡಿದುಕೊಂಡು ಯಡಿಯೂರಪ್ಪ ಮಾತನಾಡಿದರು.
ನನ್ನ ಮಗಳು ಅವರನ್ನು ತಾತ ಎಂದು ಕರೆಯುತ್ತಿದ್ದರು. ನಾನು ಯಡಿಯೂರಪ್ಪರನ್ನು ಅಪ್ಪಾಜಿ ಎಂದು ಕರೆಯುತ್ತಿದ್ದೆ. ಸ್ವಲ್ಪ ಹೊತ್ತಿನ ನಂತರ ನನ್ನ ಮಗಳನ್ನು ಅವರು ರೂಮ್ಗೆ ಕರೆದುಕೊಂಡು ಹೋಗಿ ಬಾಗಿಲು ಹಾಕಿಕೊಂಡರು. ಐದು ನಿಮಿಷಗಳ ಕಾಲ ರೂಮ್ನಲ್ಲಿ ಇದ್ದರು. ಈ ಅವಧಿಯಲ್ಲಿ ಯಡಿಯೂರಪ್ಪ, ನನ್ನ ಮಗಳ ಶರ್ಟ್ ಒಳಗೆ ಕೈ ಹಾಕಿ ಬಲಭಾಗದ ಎದೆಗೆ ಕೈ ಹಾಕಿ ಲೈಂಗಿಕ ಕಿರುಕುಳ ನೀಡಿದ್ದಾರೆ.
ನನ್ನ ಮಗಳು ಅವರಿಂದ ತಪ್ಪಿಸಿಕೊಂಡು ಹೊರಗೆ ಓಡಿಬರಲು ಪ್ರಯತ್ನಿಸಿದರೂ ಯಡಿಯೂರಪ್ಪ ಬಿಟ್ಟಿಲ್ಲ. ನಂತರ ಯಡಿಯೂರಪ್ಪ ಅವರೇ ಏನು ಆಗಿಯೇ ಇಲ್ಲ ಎನ್ನುವಂತೆ ಬಾಗಿಲು ಓಪನ್ ಮಾಡಿದರು.ನನ್ನ ಮಗಳು ರೂಂನಿಂದ ಆಚೆ ಓಡಿಬಂದು ಅಲ್ಲಿ ನಡೆದ ಎಲ್ಲಾ ವಿಚಾರವನ್ನು ನನಗೆ ತಿಳಿಸಿದರು.
ಆಗ ಯಡಿಯೂರಪ್ಪರನ್ನು ಏಕೆ ಹೀಗೆ ಮಾಡಿದಿರಿ ಎಂದು ಪ್ರಶ್ನಿಸಿದೆ. ಅದಕ್ಕೆ, ಯಡಿಯೂರಪ್ಪ ಅವರು, ರೇಪ್ ಆಗಿದೆಯೋ ಇಲ್ಲವೋ ಎಂಬುದನ್ನು ಚೆಕ್ ಮಾಡಲು ಹಾಗೆ ಮಾಡಿದೆ ಎಂದರು. ಕೊನೆಗೆ ನಮ್ಮ ಕ್ಷಮೆಯಾಚನೆ ಮಾಡಿದರು.
ನಮಗೆ ಆಗಿರುವ ಮೋಸದ ಬಗ್ಗೆ ನ್ಯಾಯ ಸಿಗುವಂತೆ ಮಾಡುತ್ತೇನೆ ಎಂದು ಹೇಳಿದರು. ಇದಕ್ಕೆ ನಾನು ಒಪ್ಪಲಿಲ್ಲ. ಯಡಿಯೂರಪ್ಪ ಕೃತ್ಯವನ್ನು ಬಹಿರಂಗಪಡಿಸುತ್ತೇನೆ ಎಂದಾಗ ತಡೆಯಲು ಬಹಳ ಪ್ರಯತ್ನ ಮಾಡಿದ್ದಾರೆ.
ನನ್ನ ಮಗಳಿಗೆ ಆದ ಅನ್ಯಾಯದ ಬಗ್ಗೆ ನ್ಯಾಯ ಕೇಳಲು ಹೋದಾಗ್ ನನ್ನ ಮಗಳಿಗೆ ಲೈಂಗಿಕ ಕಿರುಕುಳ ನೀಡಿರುವ ಯಡಿಯೂರಪ್ಪ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು.
ಈ ಪ್ರಕರಣವೀಗ ರಾಜ್ಯ ರಾಜಕೀಯದಲ್ಲಿ ಸಂಚಲನಕ್ಕೆ ಕಾರಣವಾಗಿದ್ದು, ಪೊಲೀಸರು ತನಿಖೆ ನಡೆಸಿದ್ದಾರೆ. ಯಾವುದೇ ಕ್ಷಣದಲ್ಲಿ ಯಡಿಯೂರಪ್ಪರನ್ನು ಬಂಧಿಸಬಹುದು ಎಂದು ಹೇಳಲಾಗುತ್ತಿದೆ.