ಬೆಂಗಳೂರು : ರಾಜ್ಯದಲ್ಲಿ ಪರ ಭಾಷೆ ನಾಮಫಲಕ ರಾರಾಜಿಸುತ್ತಿದೆ..ಸಂಪೂರ್ಣ ಆಂಗ್ಲ ಮಯವಾಗಿರೋ ಕರ್ನಾಟಕವನ್ನ ಕನ್ನಡಮಯಗೊಳಿಸೋ ಧ್ಯೇಯ ವಾಕ್ಯದೊಂದಿಗೆ ಕರವೇ ಕಾರ್ಯಾಚರಣೆ ಪ್ರಾರಂಭ ಮಾಡಿದೆ. ಕರುನಾಡ ಮಣ್ಣಲ್ಲಿ ಕನ್ನಡಿಗರೇ ಸಾರ್ವಭೌಮ ಎಂಬ ಘೋಷಣೆಯೊಂದಿಗೆ ಪ್ರತಿ ಅಂಗಡಿಗಳ ಕನ್ನಡ ರಹಿತ ನಾಮಫಲಕದ ಆಂಗ್ಲ ಲಿಪಿಗಳನ್ನ ಛಿದ್ರ ಛಿದ್ರ ಮಾಡಿ ರಾಜ್ಯದಲ್ಲಿ ಅಬ್ಬರಿಸುತ್ತಿರೋ ಕರವೇ ಸಂಘಟನೆ ವಿರುದ್ಧ ಪರ ವಿರೋಧ ಚರ್ಚೆಗಳು ಶುರುವಾಗಿದೆ.
ಬೆಂಗಳೂರಿನ ಪ್ರತಿ ಗಲ್ಲಿ ಗಲ್ಲಿಗೂ ಕರವೇ ಕಾರ್ಯಕರ್ತರು ನುಗ್ಗಿ ಜನರನ್ನ ಭಾಷೆಯ ಸಂಬಂಧ ಎಚ್ಚರಿಸುತ್ತಿರೋದಲ್ಲದೆ ,ಅಂಗಡಿ ಮುಂಗಟ್ಟುಗಳ ಮುಂದೆ ರೋಷಾವೇಶದಿಂದ ಕನ್ನಡ ಫಲಕ್ಕಾಗಿ ಪಟ್ಟು ಹಿಡಿದಿದ್ದಾರೆ.

ಮೊನ್ನೆಯಷ್ಟೇ ಮಾಲ್ ಆಫ್ ಏಶಿಯಾ ಕಟ್ಟಡದ ಮುಂದೆ ಕರವೇ ಕಾರ್ಯಕರ್ತರ ಕನ್ನಡ ಪ್ರೇಮದ ಕಿಚ್ಚಿಗೆ ಬೆದರಿ ಮಾಲ್ ಸಿಬ್ಬಂಧಿ ತಕ್ಷಣ ಎಚ್ಚೆತ್ತು ಮಾಲ್ ಫಲಕವನ್ನ ಸಂಪೂರ್ಣವಾಗಿ ಕನ್ನಡಕ್ಕೆ ಬದಲಾಯಿಸಿದ್ದು ಕರವೇ ಕಾರ್ಯಕರ್ತರ ಉತ್ಸಾಹವನ್ನ ಹೆಚ್ಚಿಸಿತ್ತು
ಕೆಲವೆಡೆ ಕರವೇ ಕಾರ್ಯಕರ್ತರು ದಾಂಧಲೆ ನಡೆಸುತ್ತಿದ್ದಾರೆ ಅನ್ನೋ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಕರೆವೇ ರಾಜ್ಯಾಧ್ಯಕ್ಷ ನಾರಾಯಣ ಗೌಡನನ್ನ ಪೊಲೀಸರು ವಶಕ್ಕೆ ಪಡೆದುಕೊಂಡು ಹೋರಾಟದ ತೀವ್ರತೆಯನ್ನ ಹತ್ತಿಕ್ಕೋ ಪ್ರಯತ್ನ ಪಟ್ಟರಾದ್ರು ,ಅರೆಸ್ಟ್ ಆದ ಕೆಲವೇ ಕ್ಷಣದಲ್ಲಿ ಕರವೇ ಕಾರ್ಯಕರ್ತರ ಪ್ರತಿಭಟನೆಗಳು ಶುರುವಾದವು. ಕರವೇ ಆಕ್ರೋಶದ ಬೆನ್ನಲ್ಲೇ ,ಕೊನೆಗೂ ಮೌನ ಮುರಿದ ಸಿಎಂ ರಾಜ್ಯದಲ್ಲಿ ಕನ್ನಡ ನಾಮಫಲಕ ಕುರಿತ ಹೋರಾಟ ನಡೆಯುತ್ತಿದ್ದು, ಬೇರೆ ಭಾಷೆಯ ಬಗ್ಗೆ ವಿರೋಧವಿಲ್ಲವಾದರೂ, ಕನ್ನಡ ನಾಡಿನಲ್ಲಿ ನಾಮಫಲಕದಲ್ಲಿ ಕನ್ನಡವಿರಲೇಬೇಕು ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ.

ನ್ಯಾಯದ ಪರ ಧ್ವನಿ ಎತ್ತುವ ಯಾವುದೇ ಹೋರಾಟಕ್ಕೂ ಸರ್ಕಾರದ ವಿರೋಧವಿಲ್ಲ. ಸಂಘಟನೆಗಳು ಶಾಂತಿಯುತ ಪ್ರತಿಭಟನೆಗಳನ್ನು ಮಾಡಬೇಕು. ಆದರೆ ಕಾನೂನನ್ನು ಉಲ್ಲಂಘಿಸುವ ಕೆಲಸ ನಡೆದರೆ, ಅಂತಹವರ ವಿರುದ್ಧ ಕಾನೂನು ರೀತ್ಯ ಕ್ರಮ ತೆಗೆದುಕೊಳ್ಳಲಾಗುವುದು. ಇಂದು ಬಿಬಿಎಂಪಿ, ಪೊಲೀಸ್ ಇಲಾಖೆಗಳ ಜೊತೆ ಈ ವಿಷಯದ ಬಗ್ಗೆ ಸಭೆ ನಡೆಸಲಾಗುತ್ತದೆ. ಬೇರೆ ಭಾಷೆಯ ಬಗ್ಗೆ ವಿರೋಧವಿಲ್ಲವಾದರೂ, ಕನ್ನಡ ನಾಡಿನಲ್ಲಿ ನಾಮಫಲಕದಲ್ಲಿ ಕನ್ನಡವಿರಲೇಬೇಕು ಎಂಬುದು ಸರ್ಕಾರದ ತೀರ್ಮಾನ.
ಒಟ್ನಲ್ಲಿ ಕರುನಾಡಲ್ಲಿ ಕರವೇ ಕಿಚ್ಚು ಜೋರಾಗಿದೆ. ಕನ್ನಡ ನಾಮಫಲಕಗಳಿಗಾಗಿ ಹೋರಾಟ ಮಾಡುತ್ತಿರೋದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.