ಸ್ಯಾಂಡಲ್ವುಡ್ನ ಹಿರಿಯ ನಿರ್ಮಾಪಕ ಕನಕಪುರ ಶ್ರೀನಿವಾಸ್ ಸುದ್ದಿಗೋಷ್ಠಿಯೊಂದರಲ್ಲಿ ನೀಡಿದ ವಿವಾದಾತ್ಮಕ ಹೇಳಿಕೆಗಳು ಈಗ ಕಾನೂನು ಸಮರದ ರೂಪ ಪಡೆದಿವೆ. ನಿರ್ದೇಶಕ ಜೋಗಿ ಪ್ರೇಮ್, ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್, ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ವಿರುದ್ಧ ಶ್ರೀನಿವಾಸ್ ಅವರು ಏಕವಚನದಲ್ಲಿ ಬಳಸಿದ ಅವಾಚ್ಯ ಶಬ್ದಗಳು ಚಿತ್ರರಂಗದಲ್ಲಿ ತಲ್ಲಣ ಸೃಷ್ಟಿಸಿವೆ.
ತಮ್ಮ ಹಾಗೂ ತಮ್ಮ ತಾಯಿಯ ಬಗ್ಗೆ ಕೀಳುಮಟ್ಟದ ಪದಬಳಕೆ ಮಾಡಿದ್ದರಿಂದ ನೊಂದಿರುವ ನಿರ್ದೇಶಕ ಪ್ರೇಮ್, ನಿರ್ಮಾಪಕರ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಈಗಾಗಲೇ ಎನ್ಸಿಆರ್ ದಾಖಲಾಗಿದ್ದು, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೂ ದೂರು ನೀಡಲಾಗಿದೆ. ಇದರೊಂದಿಗೆ ಶ್ರೀನಿವಾಸ್ ವಿರುದ್ಧ ಮಾನಹಾನಿ ಮೊಕದ್ದಮೆ ಹೂಡುವುದಾಗಿ ಪ್ರೇಮ್ ಎಚ್ಚರಿಸಿದ್ದಾರೆ.
ಹಣಕಾಸಿನ ವಿಚಾರಕ್ಕೆ ಬರುವುದಾದರೆ, 2004ರಲ್ಲಿ ಸಿನಿಮಾ ಮಾಡಲು ಪಡೆದಿದ್ದ ಮುಂಗಡ ಹಣದ ಬಗ್ಗೆ ಪ್ರೇಮ್ ಸ್ಪಷ್ಟನೆ ನೀಡಿದ್ದಾರೆ. ಅಂದು ಪಡೆದಿದ್ದ 9 ಲಕ್ಷ ರೂಪಾಯಿಗಳಲ್ಲಿ, ಸಾ.ರ. ಗೋವಿಂದ್ ಅವರ ಸಮ್ಮುಖದಲ್ಲಿ ಈಗಾಗಲೇ 5 ಲಕ್ಷ ರೂಪಾಯಿಗಳನ್ನು ಹಿಂದಿರುಗಿಸಲಾಗಿದೆ . ಶ್ರೀನಿವಾಸ್ ಅವರ ಪ್ರತಿಕ್ರಿಯೆ ಇಲ್ಲದ ಕಾರಣ ಒಂದು ವರ್ಷ ಕಾಲ ತಂಡವನ್ನು ಸಾಕಿ ತಮಗೆ ಕೋಟ್ಯಂತರ ರೂಪಾಯಿ ನಷ್ಟವಾಗಿದೆ ಎಂದು ಪ್ರೇಮ್ ಆರೋಪಿಸಿದ್ದಾರೆ.
ಶ್ರೀನಿವಾಸ್ ಅವರು “ಪ್ರೇಮ್ ಊರಿನಲ್ಲಿ ಎಮ್ಮೆ ಮೇಯಿಸುತ್ತಿದ್ದವನು, ಇಂದು ನಿರ್ಮಾಪಕರ ತಲೆ ಹೊಡೆದು ನೂರಾರು ಕೋಟಿ ಆಸ್ತಿ ಮಾಡಿದ್ದಾನೆ” ಎಂಬ ಗಂಭೀರ ಆರೋಪ ಮಾಡಿದ್ದರು. ಇದಕ್ಕೆ ತಿರುಗೇಟು ನೀಡಿರುವ ಪ್ರೇಮ್, “ನನ್ನ ಯೋಗ್ಯತೆ ಬಗ್ಗೆ ಮಾತನಾಡುವ ಮುನ್ನ ತಮ್ಮ ಯೋಗ್ಯತೆ ಏನೆಂದು ಅವರು ನೋಡಿಕೊಳ್ಳಲಿ. ಅಪ್ಪು ಹಾಗೂ ದರ್ಶನ್ ಅವರಂತಹ ಗಣ್ಯರ ಬಗ್ಗೆ ಮಾತನಾಡಿರುವುದು ಸರಿಯಲ್ಲ” ಎಂದು ಆಕ್ರೋಶ ಹೊರಹಾಕಿದ್ದಾರೆ.


