Saturday, June 21, 2025
22.9 C
Bengaluru
Google search engine
LIVE
ಮನೆFREEDOM TALKವಿಜಯ್‌ ಮಲ್ಯ ಸಂದರ್ಶನ: ಉದ್ಯಮ ಮಾತ್ರವಲ್ಲ, ಮಾಧ್ಯಮಲೋಕಕ್ಕೂ ಪಾಠ

ವಿಜಯ್‌ ಮಲ್ಯ ಸಂದರ್ಶನ: ಉದ್ಯಮ ಮಾತ್ರವಲ್ಲ, ಮಾಧ್ಯಮಲೋಕಕ್ಕೂ ಪಾಠ

ಕಳೆದ ನಾಲ್ಕೈದು ದಿನಗಳಿಂದ ಇಂಟರ್‌ನೆಟ್‌ನಲ್ಲಿ ಅತಿ ಹೆಚ್ಚು ಸುದ್ದಿ ಮಾಡಿದ್ದು, ಬೆಂಗಳೂರಿನ ಪೋಸ್ಟರ್‌ ಬಾಯ್‌, ಉದ್ಯಮಿ ವಿಜಯ್‌ ಮಲ್ಯ. ಸದ್ಯ ಭಾರತ ಬಿಟ್ಟು ದೂರದ ಲಂಡನ್‌ನಲ್ಲಿ ನೆಲೆಸಿರುವ ಈ ರಂಗುರಂಗಿನ ಉದ್ಯಮಿಯ ಸಂದರ್ಶನ ಮಾಡಿದ್ದು, ಭಾರತದ ನಂಬರ್‌ ವನ್‌ ಪಾಡ್‌ ಕಾಸ್ಟ್‌ ಹೀರೋ ರಾಜ್‌ ಶಮಾನಿ (https://youtu.be/MdeQMVBuGgY?si=bsLlkYh0COGaU6oV). ಜಗತ್ತಿನ ಅತಿ ಬಲಾಢ್ಯ ವ್ಯಕ್ತಿಗಳನ್ನು ತನ್ನ ನೇರ-ದಿಟ್ಟ ಮತ್ತು ಚಾಟಿಯಂತಹ ಪ್ರಶ್ನೆಗಳಿಂದ ಬೆವರಿಳಿಸಿರುವ ಖ್ಯಾತಿ ಈತನದ್ದು. ಬರೋಬ್ಬರಿ 9 ವರ್ಷಗಳಿಂದ ವಿದೇಶದಲ್ಲಿರುವ ವಿಜಯ್‌ ಮಲ್ಯ ಜೀವನದ ಏಳು-ಬೀಳುಗಳ ಸುದೀರ್ಘ ಸಂದರ್ಶನ ದೇಶದ ಉದ್ಯಮ ಲೋಕ ಮಾತ್ರವಲ್ಲ, ಮಾಧ್ಯಮಲೋಕವನ್ನೂ ಬೆಚ್ಚಿಬೀಳಿಸಿದೆ.

ಲಂಡನ್ನಿನಲ್ಲಿರುವ ವಿಜಯ್‌ ಮಲ್ಯ ಮನೆಯಲ್ಲಿ ನಡೆದಿರುವ ಈ ಸಂದರ್ಶನವನ್ನು ರಾಜ್‌ ಶಮಾನಿ, ಯೂಟ್ಯೂಬ್‌ ನಲ್ಲಿ ಪೋಸ್ಟ್‌ ಮಾಡುತ್ತಿದ್ದಂತೆಯೇ ಒಂದೇ ದಿನದಲ್ಲಿ ಒಂದು ಕೋಟಿಗೂ ಹೆಚ್ಚು ಜನರು ವೀಕ್ಷಿಸುವ ಮೂಲಕ ಅಂತರ್ಜಾಲ ಲೋಕದಲ್ಲಿ ಹೊಸ ದಾಖಲೆಯನ್ನೇ ಬರೆಯಿತು. ಇದೀಗ ಸುಮಾರು 2 ಕೋಟಿಗೂ ಅಧಿಕ ಜನರು ಈ ಪಾಡ್‌ಕಾಸ್ಟ್‌ ವೀಕ್ಷಣೆ ಮಾಡಿದ್ದು, ಇದನ್ನು ನೋಡುವವರ ಸಂಖ್ಯೆ ನಿಮಿಷ ನಿಮಿಷಕ್ಕೂ ಏರುತ್ತಲೇ ಇದೆ.

ದೇಶದ್ರೋಹಿ, ಕಳ್ಳ, ಪಲಾಯನಕೋರ ಎಂದೆಲ್ಲ ಹೀಯಾಳಿಸಿಕೊಂಡಿರುವ ವಿಜಯ್‌ ಮಲ್ಯ ತನ್ನ ಇಡೀ ಜೀವನಚಿತ್ರವನ್ನು ಇಲ್ಲಿ ಕಟ್ಟಿಕೊಟ್ಟಿದ್ದಾರೆ. ಬಾಲ್ಯ, ಯೌವನ, ಉದ್ಯಮಕ್ಕೆ ಪ್ರವೇಶಿಸಿದ ಬಗೆ, ಉದ್ಯಮಗಳನ್ನು ಕಟ್ಟಿದ ರೀತಿ, ಕಿಂಗ್‌ ಫಿಷರ್‌ ಏರ್‌ಲೈನ್ಸ್‌ ಆರಂಭಿಸಿ ದಿವಾಳಿಯಾಗಿದ್ದು, ಸರ್ಕಾರಗಳು ಮತ್ತು ಬ್ಯಾಂಕುಗಳು ತನ್ನನ್ನು ನಡೆಸಿಕೊಂಡ ರೀತಿ ಎಲ್ಲವನ್ನೂ ವಿಜಯ್‌ ಮಲ್ಯ ಅದ್ಭುತವಾಗಿ ಹಾಗೂ ಎಳೆಎಳೆಯಾಗಿ ವಿವರಿಸಿದ್ದಾರೆ. ಮಲ್ಯ ನೀಡಿರುವ ಮಾಹಿತಿ, ತನ್ನನ್ನು ತಾನು ಸಮರ್ಥಿಸಿಕೊಂಡಿರುವ ರೀತಿಯೂ ಚೆನ್ನಾಗಿಯೇ ಇದೆ. ಉದ್ಯಮ ಬೆಳೆಸುವ ರೀತಿಯಿಂದ ಹಿಡಿದು, ಮಾರ್ಕೆಟಿಂಗ್‌, ಹಣಕಾಸು ನಿರ್ವಹಣೆ ಜತೆಗೆ ಉದ್ಯಮಿ ಯಾವ ತಪ್ಪುಗಳನ್ನು ಮಾಡಬಾರದು ಎನ್ನುವುದನ್ನೂ ಇಲ್ಲಿ ವಿಜಯ್‌ ಮಲ್ಯ ಮಾರ್ಮಿಕವಾಗಿ ವಿವರಿಸಿದ್ದಾರೆ. ತನ್ನ ಮೇಲಿನ ಎಲ್ಲ ಆರೋಪಗಳಿಗೂ ತನ್ನದೇ ಆದ ರೀತಿಯಲ್ಲಿ ಈ ಸಂದರ್ಶನದಲ್ಲಿ ಸಮಜಾಯಿಷಿ ನೀಡಿದ್ದಾರೆ. ಮಲ್ಯ ನೀಡಿರುವ ಯಾವ ಮಾಹಿತಿ ಸರಿ ಎನ್ನುವ ಪ್ರಶ್ನೆಗಳಿಗೆ ಮುಂದಿನ ದಿನಗಳಲ್ಲಿ ಕೋರ್ಟ್‌ ನೀಡುವ ತೀರ್ಪಿನಲ್ಲಿ ಉತ್ತರ ಸಿಗಲಿದೆ.

ಆದರೆ, ಇಲ್ಲಿ ಗಮನಿಸಬೇಕಾದ ವಿಶೇಷ ಅಂಶವೇನೆಂದರೆ, ಈ ಪಾಡ್‌ ಕಾಸ್ಟಿಂಗ್‌ ಗೆ ಸಿಕ್ಕ ಅಭೂತಪೂರ್ವ ಪ್ರತಿಕ್ರಿಯೆ ಮಾಧ್ಯಮಲೋಕವನ್ನು ಅಲ್ಲಾಡಿಸಿಬಿಟ್ಟಿದೆ. ರಾಜ್‌ ಶಮಾನಿ ತಣ್ಣಗೆ ಕುಳಿತು ಪ್ರಶ್ನೆ ಕೇಳುವ ರೀತಿ, ಪ್ರತಿ ಸಂದರ್ಶನಕ್ಕೆ ಆತ ಮಾಡಿಕೊಳ್ಳುವ ತಯಾರಿ, ಎದುರಿಗೆ ಇರುವ ವ್ಯಕ್ತಿಯನ್ನು ತನ್ನ ವಾಕ್‌ ಚಾತುರ್ಯದಿಂದ ಇಕ್ಕಟ್ಟಿಗೆ ಸಿಲುಕಿಸುವ ರೀತಿ ಅಮೋಘ. ಪ್ರತಿ ಪ್ರಶ್ನೆಗೂ ಪೂರ್ಣ ಉತ್ತರ ಸಿಕ್ಕ ನಂತರವೇ ಮುಂದಿನ ಪ್ರಶ್ನೆ ಕೇಳುವುದು ಈತನ ವೈಶಿಷ್ಟ್ಯ.

ಸದಾ ಚೀರಾಡುವ ಆಂಕರ್‌ಗಳು, ಉತ್ತರ ನೀಡಲು ಅವಕಾಶವನ್ನೇ ನೀಡದೇ ತಮ್ಮ ವೈಯಕ್ತಿಕ ಅಭಿಪ್ರಾಯಗಳನ್ನೇ ಹೇರಲು ಹೋಗುವ ಸಂದರ್ಶಕರಿಗಿಂತ ರಾಜ್‌ ಶಮಾನಿ ಬಹಳ ಭಿನ್ನವಾಗಿ ಕಾಣಿಸುತ್ತಾರೆ. ಪ್ರತಿ ಪ್ರಶ್ನೆಗೂ ಕೌಂಟರ್‌ ಪ್ರಶ್ನೆ ರೆಡಿಯಾಗಿಯೇ ಇರುತ್ತದೆ. ಕಿಚಾಯಿಸುವ ಅವಕಾಶ ಸಿಕ್ಕಾಗ ಅದನ್ನೂ ಬಿಡದೇ, ಬಂದ ಉತ್ತರ, ಹೇಳಿದ್ದು, ಸತ್ಯ ಎನಿಸಿದಾಗ ಅದನ್ನೂ ಮೆಚ್ಚಿಕೊಳ್ಳುತ್ತಲೇ ತಮ್ಮ ಎದುರಿನ ವ್ಯಕ್ತಿಯನ್ನು ಮಾತಿನ ಮಾಯಾಜಾಲದಲ್ಲಿ ಸಿಲುಕಿಸಿ ರಹಸ್ಯಗಳನ್ನು ಹೊರತೆಗೆಯುವ ಚಾತುರ್ಯ ನೋಡುಗರನ್ನೂ, ಕೇಳುಗರನ್ನೂ ಮೋಡಿ ಮಾಡುತ್ತದೆ.

ದೇಶದ ಉದ್ದಗಲ ಮಾತ್ರವಲ್ಲ, ಯಾವುದೇ ಅಂತಾರಾಷ್ಟ್ರೀಯ ಮಾಧ್ಯಮಕ್ಕೆ ಬೇಕಾದರೂ ಸಂದರ್ಶನ ನೀಡಿ ತನ್ನ ಅಭಿಪ್ರಾಯವನ್ನು ವಿಜಯ್‌ ಮಲ್ಯ ಹಂಚಿಕೊಳ್ಳಬಹುದಾಗಿತ್ತು. ಆದರೆ, ಆತ ಆರಿಸಿಕೊಂಡಿದ್ದು, ಒಂದು ಪಾಡ್‌ಕಾಸ್ಟ್‌ ಚಾನಲ್‌ ಅನ್ನು. ಇದು ಇದೀಗ ಬಹಳ ಚರ್ಚೆಯಾಗುತ್ತಿದೆ. ಅಂದರೆ, ನಮ್ಮ ಮುಖ್ಯವಾಹಿನಿಯ ಮಾಧ್ಯಮಗಳಲ್ಲಿ ವೃತ್ತಿಪರತೆ ಕಡಿಮೆಯಾಗಿದೆ ಎನ್ನುವ ಆತಂಕ ಮೂಡಲಾರಂಭಿಸಿದೆ. ಕೋಟಿಗಟ್ಟಲೇ ಬಂಡವಾಳ ಸುರಿದು, ನೂರಾರು ಸಿಬ್ಬಂದಿಗಳನ್ನು ನೇಮಕ ಮಾಡಿಕೊಂಡು ಬೃಹತ್‌ ಕಾರ್ಪೋರೇಟ್‌ ಕಂಪನಿಗಳಂತೆ ಕಂಗೊಳಿಸುತ್ತಿರುವ ಮುಖ್ಯವಾಹಿನಿಯ ಮಾಧ್ಯಮಗಳಿಗಿಂತಲೂ ಏಕವ್ಯಕ್ತಿಯ ಪಾಡ್‌ ಕಾಸ್ಟಿಂಗ್‌ ಚಾನೆಲ್‌ ಮೇಲೆ ಜನರಿಗೆ ಹೆಚ್ಚು ವಿಶ್ವಾಸ ಮೂಡಲಾರಂಭಿಸಿದೆ ಎಂದರೆ, ಮಾಧ್ಯಮಕ್ಕೆ ಗಂಡಾಂತರ ಕಾದಿದೆಯೇ..? ಮಾಧ್ಯಮಗಳು ಕಾರ್ಯಶೈಲಿಯನ್ನು ಬದಲಿಸಿಕೊಳ್ಳಬೇಕೇ..? ಹೀಗೆ ನೂರಾರು ಪ್ರಶ್ನೆಗಳು ಏಳಲಾರಂಭಿಸಿವೆ.

ವೀಕ್ಷಕರಿಗೆ ನ್ಯೂಸ್‌ ಚಾನೆಲ್‌ಗಳ ಸಂದರ್ಶನಗಳು ಕಿರಿಕಿರಿ ಎನಿಸುತ್ತಿವೆಯೇ..? ಸುದ್ದಿ ವಾಹಿನಿಗಳ ಸಂದರ್ಶನಗಳಿಗಿಂತ ಹೀಗೆ ಪಾಡ್‌ ಕಾಸ್ಟರ್‌ಗಳು ನಡೆಸುವ ಸಂದರ್ಶನಗಳು ಬಹಳ ವೃತ್ತಿಪರತೆಯಿಂದ ಕೂಡಿವೆ ಎಂದು ಎನಿಸಲಾರಂಭಿಸಿವೆ. ಎಲ್ಲಕ್ಕಿಂತ ಹೆಚ್ಚಾಗಿ ಇವು ಹೆಚ್ಚು ಮಾಹಿತಿಪೂರ್ಣವಾಗಿರುತ್ತವೆ ಎನ್ನುವ ಕಾರಣಕ್ಕೆ ಜನರಿಗೆ ದಿನೇ ದಿನೇ ಹತ್ತಿರವಾಗಲಾರಂಭಿಸಿವೆ. ಸಾಮಾಜಿಕ ಮಾಧ್ಯಮಗಳು, ಅಂತರ್ಜಾಲ ತಾಣಗಳು ನವಮಾಧ್ಯಮಗಳಾಗಿ ಈಗಾಗಲೇ ರೂಪುಗೊಂಡಿವೆ. ಪಾಡ್‌ ಕಾಸ್ಟ್‌ ಈಗ ಮಾಹಿತಿಕೋರರಿಗೆ ಬೃಹತ್‌ ತಾಣವಾಗಿ ಹೊರಹೊಮ್ಮಿದೆ. ಕೆಲ ಮುಖ್ಯವಾಹಿನಿಯ ಮಾಧ್ಯಮಗಳೂ ಸಹ ತಮ್ಮದೇ ಆದ ಪಾಡ್‌ ಕಾಸ್ಟ್‌ ಚಾನೆಲ್‌ ಆರಂಭಿಸಿರುವುದನ್ನು ನೋಡಿದರೆ, ಅದಕ್ಕೆಷ್ಟು ಬಲ ಬಂದಿದೆ ಎನ್ನುವುದನ್ನು ಅರ್ಥ ಮಾಡಿಕೊಳ್ಳಬಹುದು. ಅದರ ವಿಸ್ತಾರವೇ, ಅದರ ಶಕ್ತಿಯಾಗಿ ನಮ್ಮೆದರು ನಿಂತಿದೆ..
– ವಿನೋದಕುಮಾರ್‌ ಬಿ ನಾಯ್ಕ್‌

Website |  + posts
RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments