Top Newsಕ್ರೈಂ ಸ್ಟೋರಿಸುದ್ದಿ

ಚಿಕ್ಕಬಳ್ಳಾಪುರ: ಕಲ್ಯಾಣಿಯಲ್ಲಿ ಈಜಲು ಹೋದ ಐಟಿಐ ವಿದ್ಯಾರ್ಥಿ ಸಾವು

ಚಿಕ್ಕಬಳ್ಳಾಪುರ: ಕಲ್ಯಾಣಿಯಲ್ಲಿ ಈಜಲು ಹೋದ ಹಾಸ್ಟೆಲ್ ವಿದ್ಯಾರ್ಥಿ ಸಾವನ್ನಪ್ಪಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ಪಟ್ಟಣ ಹೊರವಲಯದ ಬಿಳಿಗಿರಿರಂಗನ ಕಲ್ಯಾಣಿಯಲ್ಲಿ ನಡೆದಿದೆ.

ಗುಡಿಬಂಟೆ ಪಟ್ಟಣದ ಐಟಿಐ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದು 17 ವರ್ಷದ ವೆಂಕಟಾಚಲಪತಿ ಮೃತ ವಿದ್ಯಾರ್ಥಿಯಾಗಿದ್ದಾನೆ. ಅಂದಹಾಗೆ ಮೂಲತಃ ಗೌರಿಬಿದನೂರು ತಾಲೂಕಿನ ಹೊಸೂರು ಹೋಬಳಿಯ ಭಕ್ತರಹಳ್ಳಿ ಗ್ರಾಮದವನಾಗಿದ್ದ ಮೃತ ವೆಂಕಟಾಚಲಪತಿ ಗುಡಿಬಂಡೆ ಪಟ್ಟಣದ ಸರ್ಕಾರಿ ಬಾಲಕರ ವಸತಿನಿಲಯದ ವಿದ್ಯಾರ್ಥಿಯಾಗಿದ್ದ.

ಕಾಲೇಜಿನಿಂದ ಹಾಸ್ಟೆಲ್‌ಗೆ ಬಂದಿದ್ದ ವೆಂಕಟಾಚಲಪತಿ ಊಟ ಮುಗಿಸಿ ಹಾಸ್ಟೆಲ್ ಸಮೀಪವೇ ಇರುವ ಕಲ್ಯಾಣಿಯಲ್ಲಿ ಈಜಲು ತೆರಳಿದ್ದು ಈ ವೇಳೆ ಕಲ್ಯಾಣಿಯ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾನೆ. ಘಟನೆ ಬಗ್ಗೆ ತಿಳಿದು ಜಿಲ್ಲಾಧಿಕಾರಿ ಪಿ.ಎನ್ ರವಿಂದ್ರ ಸಮೇತ ಅಧಿಕಾರಿಗಳು ದೌಡಾಯಿಸಿ ಪರಿಶೀಲನೆ ನಡೆಸಿದ್ದು, ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ ಧಾವಿಸಿ, ಅವಿರಥ ಶ್ರಮದಿಂದ ಮೃತದೇಹವನ್ನು ಹೊರಗೆ ತೆಗೆದಿದ್ದಾರೆ.

ಇಡೀ ರಾತ್ರಿ ಹುಡುಕಾಟ ನಡೆಸಿದ್ದು ಮುಂಜಾನೆ ಮೃತ ಯುವಕನ ಮೃತದೇಹ ಪತ್ತೆಯಾಗಿದೆ. ಈ ಸಂಬಂಧ ಗುಡಿಬಂಡೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Comments (0)

Your email address will not be published. Required fields are marked *

Back to top button