ಸರ್ಕಾರ ನಾಮಕರಣ ಮಾಡುವ ವೇಳೆ ಕಲೆ, ಸಾಹಿತ್ಯ, ಇತಿಹಾಸ, ಸಂಸ್ಕೃತಿ, ಕ್ರೀಡೆ, ಪತ್ರಿಕೋದ್ಯಮ, ವಿಜ್ಞಾನ, ಸಿನಿಮಾ ಸೇರಿದಂತೆ ಮತ್ತಿತರ ಕ್ಷೇತ್ರಗಳಲ್ಲಿ ಅದ್ವೀತಿಯ ಸಾಧನೆ ಮಾಡಿರುವವರನ್ನು ನಾಮಕರಣ ಮಾಡುವ ಸಂಪ್ರದಾಯವಿದೆ. ನಾಮಕರಣ ಮಾಡಿರುವವರು ಸಮಾಜ ಸೇವಕರಾಗಿರಬೇಕೆ ಹೊರತು ರಾಜಕೀಯ ಹಿನ್ನಲೆಯಿಂದ ಅಥವಾ ಯಾವುದೋ ಒಂದು ಸಿದ್ದಾಂತವನ್ನು ಪ್ರತಿಪಾದಿಸುವವರನ್ನೇ ಇಲ್ಲವೇ ಒಂದು ಪಕ್ಷದ ಮುಖವಾಣಿಯಂತೆ ಕೆಲಸ ಮಾಡುವವರನ್ನು ಮೇಲ್ಮನೆಗೆ ನಾಮಕರಣ ಮಾಡುವಂತಿಲ್ಲ ಎಂಬ ಸತ್ಸಂಪ್ರದಾಯವಿದೆ.
ಆದ್ರೆ, ಸರ್ಕಾರ ರಮೇಶ್ ಬಾಬು, ಆರತಿ ಕೃಷ್ಣ, ಡಿ.ಜಿ.ಸಾಗರ್ ಹಾಗೂ ಪತ್ರಕರ್ತ ದಿನೇಶ್ ಅಮಿನ್ ಮಟ್ಟು ಹೆಸರುಗಳನ್ನು ಕಳುಹಿಸಿಕೊಟ್ಟಿದೆ. ಇವರೆಲ್ಲಾ ರಾಜಕೀಯ ಹಿನ್ನಲೆ ಉಳ್ಳವರು ಹಾಗು ಕಾಂಗ್ರೆಸ್ ಪಕ್ಷದ ಜೊತೆ ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಗುರುತಿಸಿಕೊಂಡಿದ್ದಾರೆ. ಹೀಗಾಗಿ ಈ ಪಟ್ಟಿಗೆ ರಾಜ್ಯಪಾಲರ ಗೆಹ್ಲೋಟ್ ಅಪಸ್ವರ ತೆಗೆದಿದ್ದಾರೆ. ಕಾನೂನು ತಜ್ಞರ ಒಪ್ಪಿಗೆ ಇಲ್ಲದೆ ಈ ಶಿಫಾರಸ್ಸಿಗೆ ಸಹಿ ಹಾಕಲು ಸಾಧ್ಯವಿಲ್ಲ ಎಂಬ ಅಭಿಪ್ರಾಯಕ್ಕೆ ರಾಜ್ಯಪಾಲರು ಬಂದಿದ್ದಾರೆ.
ರಮೇಶ್ ಬಾಬು ಈ ಹಿಂದೆ ಒಂದು ಬಾರಿ ಪರಿಷತ್ ಚುನಾವಣೆಯಲ್ಲಿ ಗೆದ್ದಿದ್ದರು. ನಂತರ ಬದಲಾದ ಪರಿಸ್ಥಿತಿಯಲ್ಲಿ ಕಾಂಗ್ರೆಸ್ಗೆ ಸೇರ್ಪಡೆಗೊಂಡ ನಂತರ ಅವರನ್ನು ದೇವರಾಜ ಅರಸು ಟ್ರಕ್ ಟರ್ಮಿನಲ್ ನಿಗಮದ ಅಧ್ಯಕ್ಷರನ್ನಾಗಿ ನೇಮಿಸಲಾಗಿತ್ತು. ಆದರೆ ಈ ಹುದ್ದೆಯನ್ನು ಅವರು ಸ್ವೀಕಾರ ಮಾಡಿರಲಿಲ್ಲ. ಕೆಪಿಸಿಸಿ ಸಾಮಾಜಿಕ ವಿಭಾಗದ ಹುದ್ದೆಯಲ್ಲಿರು ರಮೇಶ್ ಬಾಬು ಕಾಂಗ್ರೆಸ್ ಪಕ್ಷದ ಜೊತೆ ಗುರುತಿಸಿಕೊಂಡವರು.
ಆರತಿ ಕೃಷ್ಣ , ಡಿ.ಜಿ.ಸಾಗರ್ ಕೂಡ ಕಾಂಗ್ರೆಸ್ನ ಸಕ್ರಿಯ ಕಾರ್ಯಕರ್ತರು. ಮಾಜಿ ಪತ್ರಕರ್ತ ದಿನೇಶ್ ಅಮಿನ್ಮಟ್ಟು ಈ ಹಿಂದೆ ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರರಾಗಿ ಕರ್ತವ್ಯ ನಿರ್ವಹಿಸಿದ್ದರು. ಹೀಗೆ ಎಲ್ಲರೂ ಒಂದಿಲ್ಲೊಂದು ರೀತಿ ಕಾಂಗ್ರೆಸ್ ಪಕ್ಷ ಹಾಗೂ ಮುಖ್ಯಮಂತ್ರಿಗಳ ಆಪ್ತ ವಲಯದಲ್ಲಿ ಗುರುತಿಸಿಕೊಂಡಿರುವವರೇ ಆಗಿದ್ದಾರೆ. ಹೀಗಾಗಿ ಇವರನ್ನು ಮೇಲ್ಮನೆಗೆ ನಾಮಕರಣ ಮಾಡಬೇಕೆ ಎಂಬ ಮೂಲ ಪ್ರಶ್ನೆಯನ್ನು ರಾಜ್ಯಪಾಲರು ಎತ್ತಿದ್ದಾರೆ.
ಇದೀಗ ಕಾನೂನು ತಜ್ಞರು ನೀಡುವ ಅಭಿಪ್ರಾಯದ ನಂತರವೇ ಸರ್ಕಾರದ ಶಿ-ರಸ್ಸಿಗೆ ಅಂಕಿತ ಬೀಳಬಹುದು ಇಲ್ಲವೇ ಬೀಳದೇ ಇರಬಹುದು. ನಾಮಕರಣಗೊಂಡಿರುವವ ಬಗ್ಗೆ ವಿಪಕ್ಷಗಳು ಯಾವುದೇ ಅಭಿಪ್ರಾಯವನ್ನು ವ್ಯಕ್ತಪಡಿಸಿಲ್ಲ. ಖುದ್ದು ರಾಜ್ಯಪಾಲರೇ ಶಿ-ರಸ್ಸಿಗೆ ಅಸಮ್ಮತಿ, ವಿರೋಧವನ್ನು ವ್ಯಕ್ತಪಡಿಸಿರುವುದರಿಂದ ನಾಮಕರಣಗೊಂಡಿರುವವರ ಭವಿಷ್ಯ ತೂಗುಯ್ಯಾಲೆಯಲ್ಲಿದೆ
ಸಾಮಾನ್ಯವಾಗಿ ಮೇಲ್ಮನೆಗೆ ಸರ್ಕಾರ ಹಲವು ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದವರನ್ನು ನಾಮಕರಣ ಮಾಡುತ್ತದೆ. ಅಂದರೆ ಇವರು ಯಾವುದೇ ಪಕ್ಷದ ಜೊತೆ ಗುರುತಿಸಿಕೊಳ್ಳದೆ ಕೇವಲ ಸಮಾಜಸೇವೆ ಆಧಾರದ ಮೇಲೆ ನಾಮಕರಣ ಮಾಡಲಾಗುತ್ತದೆ. ಈ ಹಿಂದೆ 2008ರಲ್ಲಿ ಮಾಜಿ ಸಚಿವ ಬಂಡೆಪ್ಪ ಕಾಶ್ಯಂಪುರ್ ಅವರನ್ನು ಮೇಲ್ಮನೆಗೆ ನಾಮಕರಣ ಮಾಡಲಾಗಿತ್ತು. ಜೆಡಿಎಸ್ನಿಂದ ಗೆದ್ದಿದ್ದ ಇವರ ವಿಧಾನಸಭೆ ಚುನಾವಣೆಯಲ್ಲಿ ಪರಾಭವಗೊಂಡಿದ್ದರು. ಸರ್ಕಾರ ಮಾಡಿದ್ದ ಶಿಫಾರಸ್ಸಿಗೆ ಅಂದಿನ ರಾಜ್ಯಪಾಲ ಟಿಎನ್ ಚರ್ತುವೇದಿ ಸಹಿ ಹಾಕದೇ ಸರ್ಕಾರಕ್ಕೆ ವಾಪಸ್ ಕಳುಹಿಸಿದ್ದರು. ನಂತರ ಬಂಡೆಪ್ಪ ಕಾಶ್ಯಂಪುರ್ ಬದಲಿಗೆ ಸರ್ಕಾರ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಚಂದ್ರಶೇಖರ್ ಕಂಬಾರ್ ಅವರನ್ನು ನಾಮಕರಣ ಮಾಡಿತ್ತು.
ರಾಜ್ಯದಲ್ಲಿ ಬಿಜೆಪಿ ಮೊದಲ ಬಾರಿಗೆ ಅಧಿಕಾರಕ್ಕೆ ಬಂದ ವೇಳೆ ಆಪರೇಷನ್ ಕಮಲದ ಮೂಲಕ ಕಾಂಗ್ರೆಸ್ಗೆ ರಾಜೀನಾಮೆ ನೀಡಿ ಉಪಚುನಾವಣೆಯಲ್ಲಿ ಪರಾಭವಗೊಂಡಿದ್ದ ಹಾಲಿ ಕೇಂದ್ರ ಸಚಿವ ವಿ.ಸೋಮಣ್ಣ ಅವರನ್ನು ಮೇಲ್ಮನೆಗೆ ನಾಮಕರಣ ಮಾಡುವ ಸರ್ಕಾರದ ಪ್ರಸ್ತಾವನೆಗೆ ಅಂದಿನ ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ತಗಾದೆ ತೆಗೆದಿದ್ದರು. ಕೊನೆಗೆ ಶಿಕ್ಷಣ ಕ್ಷೇತ್ರದಲ್ಲಿ ಸೋಮಣ್ಣ ಅವರು ಸಲ್ಲಿಸಿರುವ ಸೇವೆಯನ್ನು ಪರಿಗಣಿಸುವಂತೆ ರಾಜ್ಯಪಾಲರಿಗೆ ಮನವರಿಕೆ ಮಾಡಿಕೊಟ್ಟ ನಂತರ ವಿವಾದ ಸುಖಾಂತ್ಯ ಕಂಡಿತ್ತು.
ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರ ಅಧಿಕಾರಾವಧಿಯಲ್ಲಿ ಮೇಲ್ಮನೆಗೆ ಎಚ್.ವಿಶ್ವನಾಥ್ ಮತ್ತು ಸಿ.ಪಿ.ಯೋಗೇಶ್ವರ್ ಅವರನ್ನು ನಾಮಕರಣ ಮಾಡಲು ಕಳುಹಿಸಿಕೊಟ್ಟಿದ್ದ ಸರ್ಕಾರದ ಶಿಫಾರಸ್ಸಿಗೆ ಅಂದಿನ ರಾಜ್ಯಪಾಲರಾಗಿದ್ದ ವಜುಬಾಯಿವಾಲ ವಿರೋಧ ವ್ಯಕ್ತಪಡಿಸಿ ತಡೆ ಹಿಡಿದಿದ್ದರು. ಕೊನೆಗೆ ಸಾಹಿತ್ಯ ಕ್ಷೇತ್ರದಲ್ಲಿ ವಿಶ್ವನಾಥ್ ಮತ್ತು ಸಿನಿಮಾ ಕ್ಷೇತ್ರದಿಂದ ಯೋಗೀಶ್ವರ್ ಅವರನ್ನು ನಾಮಕರಣ ಮಾಡಲಾಗಿತ್ತು.
ಇತ್ತೀಚೆಗೆ ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಪತ್ರ ಬರೆದು, ಚಿಂತಕರ ಛಾವಡಿ ಎಂದು ಕರೆಯುವ ಕರ್ನಾಟಕ ವಿಧಾನಪರಿಷತ್ಗೆ ರಾಜಕಾರಣಿಗಳನ್ನು ನಾಮಕರಣ ಮಾಡುವ ಸಂಪ್ರದಾಯವನ್ನು ಕೈಬಿಡಬೇಕೆಂದು ಪತ್ರ ಬರೆದಿದ್ದರು. ವಿಧಾನಪರಿಷತ್ನಲ್ಲಿ ಕೇವಲ ರಾಜಕಾರಣಿಗಳಿಗೆ, ಚುನಾವಣೆಯಲ್ಲಿ ಸೋತವರಿಗೆ, ಪಕ್ಷದ ಹಿಂಬಾಲಕರಿಗೆ ಸ್ಥಾನ ಕಲ್ಪಿಸಿದರೆ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದವರಿಗೆ ಅನ್ಯಾಯವಾಗುತ್ತದೆ ಎಂದು ಅಸಮಾಧಾನ ಹೊರಹಾಕಿದ್ದರು.