
ಗದಗ ಜಿಲ್ಲೆಯ ಐತಿಹಾಸಿಕ ತಾಣವಾದ ಲಕ್ಕುಂಡಿಯಲ್ಲಿ ಜೀರ್ಣೋದ್ಧಾರ ಮತ್ತು ಉತ್ಖನನ ಕಾರ್ಯಗಳು ಹೊಸ ವೇಗ ಪಡೆದುಕೊಂಡಿವೆ. ಕಳೆದ 15 ದಿನಗಳಿಂದ ನಡೆಯುತ್ತಿರುವ ಉತ್ಖನನದ ಬೆನ್ನಲ್ಲೇ, ಲಕ್ಕುಂಡಿಯನ್ನು ಅಂತರಾಷ್ಟ್ರೀಯ ಮಟ್ಟದ ಪ್ರವಾಸಿ ತಾಣವನ್ನಾಗಿ ರೂಪಿಸಲು ಜಿಲ್ಲಾಡಳಿತ ಮತ್ತು ವಿದೇಶಿ ಸಂಸ್ಥೆಗಳು ಕೈಜೋಡಿಸಿವೆ.
ಅಂತರಾಷ್ಟ್ರೀಯ ಸಂಸ್ಥೆಯ ಆಸಕ್ತಿ ಇಟಲಿ ಮತ್ತು ಗ್ರೀಸ್ ದೇಶಗಳ ತಜ್ಞರನ್ನು ಒಳಗೊಂಡ ‘ಡೆಕ್ಕನ್ ಹೆರಿಟೇಜ್ ಫೌಂಡೇಶನ್’ ತಂಡವು ಲಕ್ಕುಂಡಿಗೆ ಭೇಟಿ ನೀಡಿ ಇಲ್ಲಿನ ವಾಸ್ತುಶಿಲ್ಪವನ್ನು ಪರಿಶೀಲಿಸಿದೆ. ಸುಮಾರು 3 ಎಕರೆ ಜಾಗದಲ್ಲಿರುವ ಬಯಲು ವಸ್ತು ಸಂಗ್ರಹಾಲಯವನ್ನು ಅಭಿವೃದ್ಧಿಪಡಿಸಲು ಈ ಸಂಸ್ಥೆ ಆಸಕ್ತಿ ತೋರಿದ್ದು, ಶೀಘ್ರದಲ್ಲೇ ಪ್ರಾಜೆಕ್ಟ್ ರಿಪೋರ್ಟ್ ಸಿದ್ಧಪಡಿಸಲಿದೆ. ಪ್ರವಾಸಿಗರಿಗೆ ಅನುಕೂಲವಾಗುವಂತೆ ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ‘ಲಕ್ಕುಂಡಿ ಗೈಡ್ ಬುಕ್’ ಪ್ರಕಟಿಸಲು ನಿರ್ಧರಿಸಲಾಗಿದೆ.
ಜೀರ್ಣೋದ್ಧಾರಕ್ಕೆ ₹10 ಕೋಟಿ ಅನುದಾನ ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್ ಅವರು ಮಾಹಿತಿ ನೀಡಿರುವಂತೆ, 2025-26ನೇ ಸಾಲಿನಲ್ಲಿ ಲಕ್ಕುಂಡಿ ಅಭಿವೃದ್ಧಿಗೆ ₹10 ಕೋಟಿ ಮೀಸಲಿಡಲಾಗಿದೆ. ಈ ಅನುದಾನದಲ್ಲಿ ಐತಿಹಾಸಿಕ 5 ದೇವಸ್ಥಾನಗಳು ಮತ್ತು 5 ಬಾವಿಗಳನ್ನು ಜೀರ್ಣೋದ್ಧಾರ ಮಾಡಲಾಗುವುದು. ಪ್ರಮುಖವಾಗಿ ಚಬ್ಬೇರ ಬಾವಿ, ನಾಗನಾಥ ದೇವಾಲಯ, ಕುಂಬಾರೇಶ್ವರ ದೇವಸ್ಥಾನ ಹಾಗೂ ಮಾಳಿಬಾವಿ ಈಶ್ವರ ದೇವಾಲಯಗಳನ್ನು ಹೊಸ ರೂಪ ನೀಡಲು ಚಿಂತನೆ ನಡೆಸಲಾಗಿದೆ.
ಕುಟುಂಬಗಳ ಸ್ಥಳಾಂತರ ಮತ್ತು ಪರಿಹಾರ ಕುಂಬಾರೇಶ್ವರ ದೇವಸ್ಥಾನದ ಉತ್ಖನನ ಮತ್ತು ಅಭಿವೃದ್ಧಿ ದೃಷ್ಟಿಯಿಂದ ಅದರ ಸುತ್ತಮುತ್ತಲಿರುವ 26 ಕುಟುಂಬಗಳನ್ನು ಸ್ಥಳಾಂತರಿಸಲು ಜಿಲ್ಲಾಧಿಕಾರಿಗಳು ಸೂಚಿಸಿದ್ದಾರೆ. ಈ ಕುಟುಂಬಗಳಿಗೆ ಈಗಾಗಲೇ ನಿವೇಶನ ಮಂಜೂರು ಮಾಡಲಾಗಿದ್ದು, ಸೂಕ್ತ ಪರಿಹಾರ ನೀಡಲು ಸರ್ಕಾರ ಕ್ರಮ ಕೈಗೊಳ್ಳುತ್ತಿದೆ. ಗ್ರಾಮಸ್ಥರೊಂದಿಗೆ ಮಾತುಕತೆ ನಡೆಸಿ ಶೀಘ್ರದಲ್ಲೇ ಸ್ಥಳಾಂತರ ಪ್ರಕ್ರಿಯೆ ಪೂರ್ಣಗೊಳಿಸುವಂತೆ ಗದಗ ತಹಶಿಲ್ದಾರ್ ಅವರಿಗೆ ಡಿಸಿ ಸೂಚನೆ ನೀಡಿದ್ದಾರೆ.




