ಜಿಲ್ಲೆ

ರೇಷ್ಮೆ ನಗರದಲ್ಲಿ ಅಮಾನವೀಯ ಕೃತ್ಯಸರಪಳಿ ಕಟ್ಟಿ ಕಾರ್ಮಿಕನಿಂದ ಕೆಲಸ..!

ರಾಮನಗರ: ಆತ ಮುಂಗಡವಾಗಿ ಸಾಲ ಪಡೆದಿದ್ದೇ ತಪ್ಪಾಗಿತ್ತು. ಅದೊಂದು ತಪ್ಪಿಗೆ ಆತ ಅನುಭವಿಸಿದ್ದು ಅಕ್ಷರಶಃ ನರಕ ಯಾತನೆ. ಇಂತಹದ್ದೊಂದು ಅಮಾನವೀಯ ಕೃತ್ಯ ರೇಷ್ಮೆ ನಗರದಲ್ಲಿ ನಡೆದಿದೆ.

ಹೌದು ರೇಷ್ಮೆ ನಗರಿ ರಾಮನಗರದಲ್ಲಿ ನಡೆದಿರುವ ಈ ಕೃತ್ಯ ಇದೀಗ ಭಾರಿ ಚರ್ಚೆಗೆ ಕಾರಣವಾಗಿದೆ. ಅಂದಾಗೆ ಅದೊಂದು ಸಿಲ್ಕ್ ಫ್ಯಾಕ್ಟರಿ. ಆ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿಯೊಬ್ಬನಿಗೆ ಮಾಲೀಕ ಮುಂಗಡ ಹಣ ನೀಡಿದ್ದ. ಪಡೆದುಕೊಂಡಿದ್ದ ಸಾಲ ತೀರಿಸಲಾಗದೆ ವಾಸೀಂ ಎಂಬ ಕಾರ್ಮಿಕ ಪರದಾಡುತ್ತಿದ್ದ. ಅಲ್ಲದೇ ಸರಿಯಾಗಿ ಕೆಲಸಕ್ಕೂ ಬರುತ್ತಿರಲಿಲ್ಲ. ಇದರಿಂದ ರೊಚ್ಚಿಗೆದ್ದ ಫ್ಯಾಕ್ಟರಿ ಮಾಲೀಕ ಮಾಡಿದ್ದು ಮಾತ್ರ ಅಕ್ಷರಶಃ ಅಮಾನವೀಯ ಕೃತ್ಯ.

ಕೆಲಸಕ್ಕೆ ಬರದೇ ಇದ್ದ ಐಜೂರಿನ ನಿವಾಸಿ ವಾಸೀಂನನ್ನ ಫ್ಯಾಕ್ಟರಿಗೆ ಕರೆದುಕೊಂಡು ಬಂದ ಮಾಲೀಕ ಆತನ ಕಾಲಿಗೆ ಸರಪಳಿ ಬಿಗಿದ್ದಿದ್ದ. ಸುಮಾರು 9 ದಿನಗಳಿಂದ ಆತ ಕಾಲಿಗೆ ಸರಪಳಿ ಹಾಕಿಕೊಂಡೇ ಕೆಲಸ ಮಾಡುತ್ತಿದ್ದ.. ಇದನ್ನ ಗಮನಿಸಿದ ಕೆಲವರು ಪೊಲೀಸರಿಗೆ ವಿಚಾರ ಮುಟ್ಟಿಸಿದ್ರು. ಸುದ್ದಿ ತಿಳಿಯುತ್ತಲೇ ಸ್ಥಳಕ್ಕೆ ಆಗಮಿಸಿದ ರಾಮನಗರ ಟೌನ್ ಪೊಲೀಸರು ಜೀತದಾಳುವಿನಂತೆ ಕಾಲಿಗೆ ಸರಪಳಿ ಕಟ್ಟಿಕೊಂಡು ದುಡಿಯುತ್ತಿದ್ದ ವಸೀಂನನ್ನ ರಕ್ಷಣೆ ಮಾಡಿದ್ದಾರೆ.

ಹೌದು..ರಾಮನಗರದ ಮೆಹಬೂಬ್ ನಗರದಲ್ಲಿರುವ ಎಸ್ಐಯು ಸಿಲ್ಕ್ ಕಾರ್ಖನೆಯಲ್ಲಿ ಇಂತಹದ್ದೊಂದು ಘಟನೆ ನಡೆದಿರೋದು ಬೆಳಕಿಗೆ ಬಂದಿದೆ. ವಸೀಂ ಐದು ತಿಂಗಳ ಹಿಂದಷ್ಟೆ ಕೆಲಸಕ್ಕೆ ಸೇರಿಕೊಂಡು ಮಾಲೀಕರ ಬಳಿ ಸುಮಾರು 1.50 ಲಕ್ಷ ರೂಪಾಯಿ ಮುಂಗಡ ಹಣ ಪಡೆದುಕೊಂಡಿದ್ದ. ಸ್ಥಳಕ್ಕೆ ಆಗಮಿಸಿದ ಪೊಲೀಸ್ರು ವಸೀಂನನ್ನ ರಕ್ಷಣೆ ಮಾಡಿ ಕಾರ್ಖನೆ ಮಾಲೀಕ ಸೈಯದ್ ಇಸ್ಲಾಮ್ ಹಾಗೂ ಮೇಲ್ವಿಚಾರ ಸಯ್ಯದ್ ಅಮ್ಜದ್ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ನಡೆಸುತ್ತಿದ್ದಾರೆ.

Comments (0)

Your email address will not be published. Required fields are marked *

Back to top button