ಕನ್ನಡ ಚಿತ್ರರಂಗದಲ್ಲಿರುವ ಈ ನಟರಿಗೆ ಏನಾಗಿದೆ. ಹಿರಿಯ ನಟರು ಎನಿಸಿಕೊಂಡಿರೋ ದರ್ಶನ್ ಹಾಗು ಜಗ್ಗೇಶ್ ಯಾವ ಕಡೆ ಸಾಗ್ತಾ ಇದಾರೆ.. ಅಭಿಮಾನಿಗಳಿಗೆ, ಕಿರಿಯ ಕಲಾವಿದರಿಗೆ ಮಾದರಿಯಾಗಬೇಕಾದ ಈ ನಟರ ಬಾಯಲ್ಲಿ ಇಂಥಾ ಮಾತುಗಳು ಯಾಕೆ.. ? ಒಬ್ಬರು ತಗಡು ಅಂತಾರೆ, ಇನ್ನೊಬ್ಬರು ಕಿತ್ತೋದ್ ನನ್ನ ಮಗ ಅಂತಾರೆ. ಇವರ ಬಾಯಲ್ಲೆ ಇಂಥ ಮಾತುಗಳು ಬಂದ್ರೆ ಇನ್ನು ಇವರನ್ನ ಫಾಲೋ ಮಾಡೋ ಜನ ಯಾವ ರೀತಿ ಅರ್ಥ ಮಾಡಿಕೊಳ್ಳಬೇಕು.

ಒಂದು ಕಾಲದಲ್ಲಿ ನಟಸಾರ್ವಭೌಮ ಡಾ ರಾಜಕುಮಾರ್, ಅಭಿಮಾನಿಗಳನ್ನ ಅಭಿಮಾನಿ ದೇವರು ಅಂತಲೇ ಸಂಬೋಧಿಸ್ತಾ ಇದ್ರು. ಸಹ ನಟರನ್ನು, ಕುಟುಂಬದವರು ಎಂದು ಕರೀತಿದ್ರು. ಇನ್ನು ನಿರ್ಮಾಪಕರನ್ನಂತೂ ಅನ್ನದಾತರು ಅಂತಿದ್ರು. ಆದ್ರೀಗ ಜಗ್ಗೇಶ್, ದರ್ಶನ್ ಅಂತ ನಟರು ಲಂಗು -ಲಗಾಮು ಇಲ್ಲದಂತೆ ಮಾತನಾಡುತ್ತಿದ್ದಾರೆ.. ಅನ್ನದಾತರಿಗೆ ದರ್ಶನ್ ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ. ಸಹ ನಟರಿಗೆ ಗೌರವ ಇಲ್ಲದಂತೆ ಮಾತನಾಡುತ್ತಿದ್ದಾರೆ. ತಗಡು.. ಗುಮ್ಮಿಸ್ಕೊತಿಯಾ ಅಂತೆಲ್ಲಾ ಸಾರ್ವಜನಿಕ ವೇದಿಕೆಯಲ್ಲಿ ಮಾತನಾಡ್ತಾರೆ. ಅಷ್ಟೇ ಅಲ್ಲ ಮಹಿಳೆಯರ ಬಗ್ಗೆಯೂ ಬಾಯಿಗೆ ಬಂದಂತೆ ಮಾತನಾಡಿದ್ದಾರೆ ಎಂದು ಸ್ತ್ರೀಯರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ದರ್ಶನ್ ಅವರಿಗೆ ಅದೇನು ಆಗಿದ್ಯೋ ಗೊತ್ತಿಲ್ಲ. ಒಂದಿಲ್ಲೊಂದು ವಿವಾದಗಳನ್ನು ಮೈ ಮೇಲೆ ಎಳೆದುಕೊಳ್ಳುತ್ತಿದ್ದಾರೆ. ಇನ್ನು ಜಗ್ಗೇಶ್ ಅವರು ಕೂಡಾ ಅಷ್ಟೇ. ಸದಾ ತಮಾಷೆಯಾಗಿ, ಕೂಲ್ ಆಗಿರೋ ಅವರು ಕೆಲವೊಮ್ಮೆ ಉರಿದುಬಿಳ್ತಾರೆ. ಏನೇನೋ ಭಾಷೆ ಬಳಸಿಬಿಡ್ತಾರೆ ಅವರೊಬ್ಬ ರಾಜ್ಯಸಭಾ ಸದಸ್ಯ ಅನ್ನೋದನ್ನು ಮರೆತುಬಿಡ್ತಾರೆ.

ಆದರೆ ಕನ್ನಡ ಚಿತ್ರರಂಗ ಡಾ. ರಾಜ್ ಕುಮಾರ್, ಡಾ. ವಿಷ್ಣುವರ್ಧನ್ ರಂತಹ ಮಹನೀಯರನ್ನು ಕೊಟ್ಟಿದೆ. ಉತ್ತಮ ಭಾಷೆ, ಸಜ್ಜನಿಕೆಯನ್ನು ತೋರಿರುವ ನಟರು ನಮಗೆ ಮಾದರಿ. ಇದೀಗ ನಟ, ನಿರ್ಮಾಪಕ ನಡುವಿನ ಕಲಹ, ಕೀಳು ಮಟ್ಟದ ಭಾಷೆ ಬಳಕೆ ಅವರ ವ್ಯಕ್ತಿತ್ವಕ್ಕೆ ಮಾತ್ರವಲ್ಲ ಚಿತ್ರರಂಗಕ್ಕೂ ಕಳಂಕ ತರೋದ್ರಲ್ಲಿ ಎರಡು ಮಾತಿಲ್ಲ. ಗಾಂಧಿನಗರದಲ್ಲಿ ಕೆಲವರಿಗೆ ದುಡ್ಡಿನ ಮದ ಏರಿದ್ಯೋ ಅಥವಾ ನೇಮು.. ಫೇಮು ತಲೆಗೆ ಹತ್ತಿದ್ಯೋ ಗೊತ್ತಿಲ್ಲ.

ಇದೇ ರೀತಿ ಮುಂದುವರೆದ್ರೆ ಹೇಗೆ? ಚಿತ್ರರಂಗ ಯಾವ ಕಡೆ ಸಾಗ್ತಾ ಇದೆ. ಇವರಿಗೆ ಹೇಳೋರು, ಕೇಳೋರು ಯಾರು ಇಲ್ವಾ.? ಮಾದರಿಯಾಗಬೇಕಾಗಿದ್ದ ನಟರು ಬೀದಿ ರಂಪ, ಹಾದಿ ರಂಪ ಮಾಡಿಕೊಂಡ್ರೆ ಹೇಗೆ.. ಇಂತಹ ಬೆಳವಣೆಗೆಗಳು ಖಂಡಿತಾ ಚಿತ್ರರಂಗಕ್ಕೆ ಮಾರಕ. ಇಂತ ಮಾತುಗಳಿಗೆ ಈಗಲೇ ಫುಲ್ ಸ್ಟಾಪ್ ಇಡಬೇಕಾಗಿದೆ. ಇದು ಹೀಗೆ ಮುಂದುವರೆದ್ರೆ ರಾಜಕುಮಾರ್ ಅಂತ ಹಿರಿಯ ನಟರು ಕಟ್ಟಿದ್ದ ಈ ಚಿತ್ರರಂಗಕ್ಕೆ ಕೆಟ್ಟ ಹೆಸರು ಬರೋದು ಗ್ಯಾರಂ.ಟಿ.. ದಯವಿಟ್ಟು ಇದಕ್ಕೆಲ್ಲಾ ಅವಕಾಶ ಮಾಡಿಕೊಡಬೇಡಿ ಅಂತಿದ್ದಾರೆ ಕನ್ನಡಿಗರು.


