ತುಮಕೂರು: ಜಿಲ್ಲೆ ಹಾಗೂ ರಾಜ್ಯದ ಸಮಸ್ಯೆಗಳ ಬಗ್ಗೆ ಸಂಸದ ಜಿ.ಎಸ್ ಬಸವರಾಜ್ ಲೋಕಸಭೆಯಲ್ಲಿ ಒಂದು ನಿಮಿಷ ಮಾತನಾಡಿರುವ ದಾಖಲೆ ಇದ್ದರೆ ಅವರು ತೋರಿಸಲಿ ಎಂದು ಲೋಕಸಭಾ ಚುನಾವಣೆಯ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಎಸ್.ಪಿ ಮುದ್ದಹನುಮೇಗೌಡ ಸವಾಲ್ ಹಾಕಿದರು.
ಮಧುಗಿರಿ ತಾಲ್ಲೂಕಿನ ಮಿಡಿಗೇಶಿ, ಐ.ಡಿ ಹಳ್ಳಿ ಹಾಗೂ ಕೊಡಿಗೇನಹಳ್ಳಿ ಹೋಬಳಿ ವ್ಯಾಪ್ತಿಯಲ್ಲಿ ರೋಡ್ ಶೋ ಮೂಲಕ ತೆರಳಿ ಕಾರ್ಯಕರ್ತರನ್ನು ಉದ್ದೇಶಿ ಮಾತನಾಡಿದ ಅವರು ಬಸವರಾಜು ಸೋಮಣ್ಣನವರ ನಿಮ್ಮ ಸಾಧನೆ ಏನು ಅಭಿವೃದ್ಧಿ ಕಾರ್ಯಗಳು ಏನೆಂದು ತೋರಿಸಿ ಈ ಜಿಲ್ಲೆಗೆ ಈ ತಾಲೂಕಿಗೆ ನಿಮ್ಮ ಕೊಡುಗೆ ಏನು ದಾಖಲೆ ಇದ್ದರೆ ತೋರಿಸಿ ಎಂದು ಪ್ರಶ್ನಿಸಿದರು.
ಹಾಲಿ ಸಂಸದ ಬಸವರಾಜ್ ಅವರಿಗೆ ಕೊಡಿಗೇನಹಳ್ಳಿ ಹೋಬಳಿಯ ಗುಟ್ಟೆ ಎಲ್ಲಿದೆ ಎಂದು ಗೊತ್ತಿಲ್ಲ ಇದೀಗ ಬೆಂಗಳೂರಿನವರನ್ನು ಹಿಡಿದುಕೊಂಡು ಬಂದಿದ್ದಾರೆ. ಸೋಮಣ್ಣನವರಿಗೂ ತುಮಕೂರು ಜಿಲ್ಲೆಗೆ ಏನು ಸಂಬಧವಿದೆ ಎಂದರು. ಸಿದ್ದರಾಮಯ್ಯ ಹಾಗೂ ಒಬ್ಬ ಉಪ್ಪಾರ ಸಮಾಜದ ಪುಟ್ಟರಂಗಶೆಟ್ಟಿ ಮೇಲೆ ಒಟ್ಟೂಟ್ಟಿಗೆ ಸ್ಪರ್ಧೆ ಮಾಡಿ ಎರಡು ಕಡೆ ಸೋತಿದ್ದೀರಿ ಇದೀಗ ಮೂರನೇ ಚುನಾವಣೆ ಮಾಡಲು ಬಂದಿದ್ದೀರಿ. ಈಗಾಗಲೇ ಜಿಎಸ್ ಬಸವರಾಜ್ ಅವರನ್ನು ಚಿಕ್ಕದಾಳವಟದಲ್ಲಿ ಗೋ ಬ್ಯಾಕ್ ಘೋಣೆ ಕೂಗಿ ಬಿಜೆಪಿ ಕಾರ್ಯಕರ್ತರೇ ವಾಪಸ್ ಕಳುಹಿಸಿದ್ದಾರೆ ಎಂದರು.
ಬಿಜೆಪಿ ಆಡಳಿತಕ್ಕೆ ಬಂದರೆ ಎರಡು ಕೋಟಿ ಉದ್ಯೋಗ, ಪ್ರತಿ ಭಾರತೀಯನ ಖಾತೆಗೆ 15 ಲಕ್ಷ ಹಣ ಜಮೆ ಮಾಡುತ್ತೇವೆ ಎಂದು ಅಧಿಕಾರಕ್ಕೆ ಬಂದವರು ಇದೀಗ ಗ್ಯಾಸ್, ಪೆಟ್ರೋಲ್ ಹಾಗೂ ದಿನಸಿ ಬೆಲೆ ಗಗನಕ್ಕೇರಿಸಿದ್ದಾರೆ. ಬಿಜೆಪಿಯವರು ಸಂವಿಧಾನ ಬದಲಾವಣೆ ಮಾಡುತ್ತೇವೆ ಎನ್ನುತಿದ್ದಾರೆ. ಕಾಂಗ್ರೆಸ್ ಪಕ್ಷ ಸಂವಿಧಾನ ಬದ್ಧವಾಗಿ ನುಡಿದಂತೆ ನಡೆಯುತ್ತಿದೆ. ಬಿಜೆಪಿ ಸುಳ್ಳಿನ ಪಕ್ಷ ಸಂವಿಧಾನ ಬದಲಾವಣೆ ಮಾಡುವವರಿಗೆ ವೋಟ್ ಹಾಕಿದರೆ ಅದಕ್ಕಿಂತ ಪರಮ ಪಾಪಿಗಳು ಯಾರು ಇಲ್ಲ ಎಂದರು.
ಬಿಜೆಪಿಯವರು ಹಿಂದುತ್ವ ರಾಮ ಮಂದಿರದ ಹೆಸರು ಬಳಸಿಕೊಂಡು ಎಂದು ವೋಟ್ ಕೇಳಲು ಬರುತ್ತಾರೆ. ಬಿಜೆಪಿಯವರು ದಲಿತರಿಗೆ ರಾಮಮಂದಿರದ ಒಳಗಡೆ ಬಿಡಲಿ ರಾಮ ಮಂದಿರದ ವಿಗ್ರಹಕ್ಕೆ ಕೆತ್ತನೆ ಮಾಡಿದ ಶಿಲ್ಪಿಯನ್ನು ಗರ್ಭಗುಡಿಗೆ ಬಿಡಲ್ಲ. ದೇವಸ್ಥಾನ ಕಟ್ಟಲು ಶೂದ್ರ, ದಲಿತರು ಬೇಕು ದೇವಸ್ಥಾನ ಕಟ್ಟಿದ ಮೇಲೆ ಇವರ ಜಹಾಗರಿ ನಡೆಸುತ್ತಾರೆ ಇದಕ್ಕೆಲ್ಲ ಸೊಪ್ಪು ಹಾಕಬೇಡಿ ಎಂದರು.
ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಆದಿ ನಾರಾಯಣ ರೆಡ್ಡಿ. ಕೆಎಂಎಫ್ ನಿರ್ದೇಶಕ ಕಾಂತರಾಜು. ಕೆಪಿಸಿಸಿ ಸದಸ್ಯ ಡಾ ರಂಗಶಾಮಣ್ಣ, ಮಾಜಿ ತಾ.ಪಂ ಸದಸ್ಯ ತಿಮ್ಮರಾಜು, ಜೆ.ಡಿ ವೆಂಕಟೇಶ್ ಮುಖಂಡರಾದ ಶಾಮಿರ್ ಅಹಮದ್, ಬಾಲಾಜಿ, ತಿಮ್ಮಾರೆಡ್ಡಿ, ಕೆ.ವಿ ವೆಂಕಟೇಶ್, ಮಕ್ತಿಯಾರ್, ಸೇಠು ಗಂಗಾಧರ್, ಪಿ. ಕೃಷ್ಣಪ್ಪ, ರಾಜೇಶ್ ಸೇರಿದಂತೆ ಗ್ರಾ.ಪಂ ಸದಸ್ಯರು ಹಾಗೂ ಮುಖಂಡರು ಹಾಜರಿದ್ದರು.