ಮಂಡ್ಯ: ನನ್ನ ರಾಜಕೀಯ ಜೀವನ ಇನ್ನು ಮುಂದೆಯೂ ಮಂಡ್ಯದಲ್ಲಿಯೇ ಎಂದು ಮಂಡ್ಯದ ಮಾಜಿ ಸಂಸದೆ ಸುಮಲತಾ ಅಂಬರೀಷ್ ಪುನರುಚ್ಛರಿಸಿದ್ದಾರೆ.
ಮಂಡ್ಯದಲ್ಲಿ ನಿನ್ನೆ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಜನವರಿಯಿಂದ ಪಕ್ಷ ಸಂಘಟನೆಯಲ್ಲಿ ತೊಡಗಿಕೊಳ್ಳುತ್ತೇನೆ. ನಾಯಕರು ಮಂಡ್ಯದಲ್ಲಿ ಪಕ್ಷ ಸಂಘಟನೆ ಬಗ್ಗೆ ಗಮನ ಕೊಟ್ಟಿಲ್ಲ, ಕೆಳಹಂತದಲ್ಲಿ ಸಂಘಟನೆ ಮಾಡಿದರೆ ಚುನಾವಣೆಯನ್ನು ಸಮರ್ಥವಾಗಿ ಎದುರಿಸಬಹುದು. ನಾನು ರಾಜಕಾರಣ ಮಾಡುವುದಿದ್ದರೆ ಅದು ಮಂಡ್ಯದಲ್ಲಿಯೇ ಎಂದರು.
ಜನವರಿಯಿಂದ ನಾನು ಇನ್ನಷ್ಟು ಸಕ್ರಿಯವಾಗಿ ಮಂಡ್ಯದಲ್ಲಿ ತೊಡಗಿಕೊಳ್ಳುತ್ತೇನೆ. ಅಗತ್ಯವಿರುವಲ್ಲಿ ನನ್ನನ್ನು ಪ್ರಚಾರಕ್ಕೆ ಕರೆಯುತ್ತಾರೆ, ಚನ್ನಪಟ್ಟಣ ಉಪ ಚುನಾವಣೆ ಪ್ರಚಾರಕ್ಕೆ ನನ್ನ ಅಗತ್ಯವಿಲ್ಲ ಎನಿಸಿರಬಹುದು, ಲೋಕಸಭೆ ಚುನಾವಣೆಯಲ್ಲಿ ಅಗತ್ಯವಿರುವಲ್ಲಿ ನಾಯಕರು ನನ್ನನ್ನು ಪ್ರಚಾರಕ್ಕೆ ಕರೆದಿದ್ದರು, ಆಗ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದೆ ಎಂದು ನಿಖಿಲ್ ಪರ ಪ್ರಚಾರಕ್ಕೆ ಹೋಗುತ್ತೀರಾ ಎಂದು ಕೇಳಿದ್ದಕ್ಕೆ ಉತ್ತರಿಸಿದರು.
ಮೋದಿಯವರ ಮಾತಿಗೆ ಬೆಲೆ: ಕಳೆದ 5 ವರ್ಷಗಳು ಕ್ಷೇತ್ರದಲ್ಲೆಲ್ಲಾ ಸುತ್ತಾಡಿ ಕೆಲಸ ಮಾಡಿ ಸಾಕಷ್ಟು ದಣಿದು ಹೋಗಿದ್ದೆ, ನನಗೂ ಸ್ವಲ್ಪ ವಿಶ್ರಾಂತಿ ಬೇಕಾಗಿತ್ತು, ಮೈತ್ರಿ ಕಾರಣಕ್ಕೆ ಕ್ಷೇತ್ರ ಬಿಟ್ಟುಕೊಡಿ ಎಂದು ಸ್ವತಃ ಪ್ರಧಾನಿ ನರೇಂದ್ರ ಮೋದಿಯವರೇ ನನಗೆ ವೈಯಕ್ತಿಕವಾಗಿ ನನಗೆ ಮನವಿ ಮಾಡಿಕೊಂಡಿದ್ದರಿಂದ ಅವರ ಮಾತಿಗೆ ಬೆಲೆ ಕೊಟ್ಟು ಮಂಡ್ಯ ಕ್ಷೇತ್ರ ಬಿಟ್ಟುಕೊಟ್ಟೆ. ಕಾಲುನೋವು ಕೂಡ ಇತ್ತು, ಅದಕ್ಕೆ ಚಿಕಿತ್ಸೆ ಪಡೆದುಕೊಂಡು ಜನವರಿ ತಿಂಗಳಿನಿಂದ ಮಂಡ್ಯದಲ್ಲಿ ಸಕ್ರಿಯವಾಗಿ ಓಡಾಡುತ್ತೇನೆ ಎಂದರು.