ಕೋಲಾರ: ನಾನು ಜೀವನದಲ್ಲಿ ಸೋತಿದ್ದೇನೆ. ಮತ್ತೆ ಇನ್ನೊಂದು ಚುನಾವಣೆಗೆ ನಿಲ್ಲುವ ಆಸೆ ನನಗೆ ಇಲ್ಲ ಎನ್ನುವ ಮೂಲಕ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಅವರು ರಾಜಕೀಯ ನಿವೃತ್ತಿಯ ಇಂಗಿತವನ್ನು ವ್ಯಕ್ತಪಡಿಸಿದ್ದಾರೆ. ನಗರದಲ್ಲಿ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ಜೀವನದಲ್ಲಿ ಸೋತಿದ್ದೇನೆ. ಬದುಕಿನಲ್ಲಿ ಸೋತಾಗಿದೆ. ಬಿಳಿ ಶರ್ಟ್ ಹಾಕಿಕೊಂಡು ಕಾರ್ಯಕ್ರಮಗಳಲ್ಲಿ ಕಾಣಿಸಿಕೊಳ್ಳಬಹುದಿತ್ತು. ಆದರೆ, ಮತ್ತೆ ಇನ್ನೊಂದು ಚುನಾವಣೆಗೆ ನಿಲ್ಲುವ ಆಸೆ ನನಗಿಲ್ಲ. ಯಾಕೆ ಸೋತೆ ಎಂದರೆ ನಂಬಿಕೆ ದ್ರೋಹ ಎಂದು ಬೇಸರ ವ್ಯಕ್ತಪಡಿಸಿದರು. ಚುನಾವಣೆಯಲ್ಲಿ ಸೋಲು ಎಂದರೆ ಕಡಿಮೆ ಓಟ್ ತೆಗೆದುಕೊಳ್ಳುವುದು.
ನನ್ನ ಜೊತೆಯಲ್ಲಿ ಇದ್ದು ಕಾಲಿಗೆ ಅಡ್ಡ ಇಟ್ಟು ಬೀಳಿಸಿದವರು, ದೇವರಿಗೆ ನಮಸ್ಕಾರ ಮಾಡುವುದಕ್ಕೆ ಮಲಗಿದ್ದಾಗ ಕತ್ತಿಗೆ ಕತ್ತಿ ಇಟ್ಟವರು, ಇವರೆಲ್ಲರಿಗೂ ಕೃತಜ್ಞತೆ ಅರ್ಪಿಸಿ, ಭಗವಂತ ಇವರನ್ನು ಕಾಪಾಡಪ್ಪ, ನಮ್ಮಂತ ದುಷ್ಟರನ್ನು ಅವರು ಮಂಥನ ಮಾಡ್ತಾ ಇರಲಿ, ಈ ದೇಶ ಚೆನ್ನಾಗಿರಲಿ ಎಂದು ಯಾರೋಬ್ಬರ ಹೆಸರನ್ನು ಹೇಳದೆ ತಮ್ಮ ಸೋಲಿಗೆ ಕಾರಣರಾದವರನ್ನು ಪರೋಕ್ಷವಾಗಿ ತಿವಿದರು. ಕಡೆ ಪಕ್ಷ ನನ್ನ ಮುಖ ನೋಡಲಿ ಎಂದು ಇಲ್ಲಿಗೆ ಬಂದಿದ್ದೇನೆ. ಮುಂದೆ ಇರ್ತೀನೊ, ಇಲ್ಲೋ ಎನ್ನುವ ಕಾರಣಕ್ಕೆ ಈ ಕಾರ್ಯಕ್ರಮಕ್ಕೆ ಬಂದೆ…ಹೀಗೆ ನಿವೃತ್ತಿ ಅಂಚಿನಲ್ಲಿರುವ ರಮೇಶ್ ಕುಮಾರ್ ಬೇಸರದ ಭಾಷಣ ಮಾಡಿದರು.