ಲೋಸಭೆಗೆ ಕರ್ನಾಟಕ ಕಾಂಗ್ರೆಸ್ನಿಂದ ಗೆದ್ದ ಹಿರಿಯರ ಪೈಕಿ ಜಾಫರ್ ಶರೀಫ್, ಶಂಕರಾನಂದ ಅವರನ್ನು ಬಿಟ್ಟರೆ ನಾನೇ ಅತೀ ಹೆಚ್ಚು ಬಾರಿ ಗೆದ್ದವನು. ನನಗೆ ಹಿರಿತನ ಇದ್ದೇ ಇದೆ. ರಾಜ್ಯದ ಒಟ್ಟಾರೆ ಜನಸಂಖ್ಯೆಯ ಶೇ.25ರಷ್ಟು ಎಸ್ಸಿ ,ಎಸ್ಟಿಗಳಿದ್ದರೂ ಹಿರಿಯರಾದ ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಯಾರಿಗೂ ಈವರೆಗೆ “ದಲಿತ ಸಿಎಂ’ ಆಗುವ ಅವಕಾಶ ಸಿಕ್ಕಿಲ್ಲ. ಸುಮಾರು 25 ವರ್ಷಗಳಿಂದ ಈ ಕೂಗು ಇದೆ. ಇದಿಷ್ಟೂ ರಾಜ್ಯ ಕಾಂಗ್ರೆಸ್ನ ಹಿರಿಯ ಮುಖಂಡ, ಎಡಗೈ ಸಮುದಾಯದ ಪ್ರಭಾವಿ ನಾಯಕರೂ ಹಾಗೂ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವರೂ ಆಗಿರುವ ಕೆ.ಎಚ್. ಮುನಿಯಪ್ಪ ಅವರ ಮಾತುಗಳು.
ರಾಜ್ಯದಲ್ಲಿ ಮುಡಾ ಹಗರಣದ ಅನಂತರ “ದಲಿತ ಮುಖ್ಯಮಂತ್ರಿ’ ಕೂಗು ಮತ್ತೆ ಭುಗಿಲೆದ್ದಿದ್ದು, ಸಚಿವರಾದ ಡಾ.ಎಚ್.ಸಿ. ಮಹದೇವಪ್ಪ, ಡಾ| ಜಿ. ಪರಮೇಶ್ವರ್, ಸತೀಶ್ ಜಾರಕಿಹೊಳಿ ಅವರು ಸರಣಿ ಸಭೆಗಳನ್ನು ನಡೆಸಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನೂ ಭೇಟಿ ಮಾಡುತ್ತಿದ್ದಾರೆ.
ಸುಮಾರು 25 ವರ್ಷದಿಂದ ದಲಿತ ಸಿಎಂ ಕೂಗು ಇದ್ದೇ ಇದೆ. ರಾಜ್ಯದ ಒಟ್ಟಾರೆ ಜನಸಂಖ್ಯೆಯಲ್ಲಿ ಎಸ್ಸಿ, ಎಸ್ಟಿಗಳು ಶೇ.25 ರಷ್ಟು ಇದ್ದೇವೆ. ಆದರೂ ಯಾರೊಬ್ಬರೂ ಇದುವರೆಗೂ ಅವಕಾಶ ಪಡೆದು ಕೊಳ್ಳಲಾಗಿಲ್ಲ. ಇಷ್ಟೆಲ್ಲ ಇದ್ದರೂ ಇದು ಸಂದರ್ಭ ಅಲ್ಲ ಕೆ.ಎಚ್.ಮುನಿಯಪ್ಪ ಅಭಿಪ್ರಾಯ ವ್ಯಕ್ತಪಡಿಸಿದರು. ಬಿಜೆಪಿ ಪಕ್ಷದವರು ನಮ್ಮ ಮೇಲೆ ಆರೋಪ ಹೊರಿಸಿ, ಸರಕಾರವನ್ನು ಬಿಳಿಸಬೇಕೆಂದಿದ್ದರೆ. ಅವರ ವಿರುದ್ಧ ಹೋರಾಡುವ ಈ ಸಂದರ್ಭದಲ್ಲಿ ಸಿಎಂ ವಿಷಯವೇ ಅಪ್ರಸ್ತುತ. ಬಿಜೆಪಿಯವರು ಬಹಳ ತೊಂದರೆ ಕೊಡುತ್ತಿದ್ದಾರೆ. ನಾವೀಗ ಒಗ್ಗಟ್ಟಾಗಿ ಇರಬೇಕು. ಈಗಿರುವ ಕಷ್ಟದಿಂದ ಮೊದಲು ಪಾರಾಗಬೇಕು. ಇದಿಷ್ಟೇ ನಮ್ಮ ಮುಂದಿರುವ ವಿಚಾರ.