ಬೆಂಗಳೂರು: ನಾನು ಯಾವಾಗಲೂ ಸಿಎಂ ರೇಸ್ನಲ್ಲಿ ಇರುತ್ತೇನೆ. ನನಗೂ ಮೊದಲಿನಿಂದಲೂ ಸಿಎಂ ಆಗಬೇಕು ಅನ್ನೋ ಆಸೆ ಇದೆ ಎಂದು ಸಚಿವ ಜಿ. ಪರಮೇಶ್ವರ್ ಅವರು ಪರೋಕ್ಷವಾಗಿ ಸಿಎಂ ಆಸೆಯ ಬಗ್ಗೆ ಹೇಳಿದ್ದಾರೆ..
ಬೆಂಗಳೂರಿನಲ್ಲಿ ಮಾತನಾಡಿದ ಅವರು, ನಾನು ಯಾವಾಗಲೂ ರೇಸ್ನಲ್ಲಿರ್ತೀನಿ ಕಣ್ರೀ, ಅದೇನ್ ದೊಡ್ಡ ವಿಚಾರ ಅಲ್ಲ. 2013 ರಲ್ಲಿ ನಾನು ಕೆಪಿಸಿಸಿ ಅಧ್ಯಕ್ಷ ಆಗಿದ್ದೆ. ಸರ್ಕಾರ ಅಧಿಕಾರಕ್ಕೆ ತಂದ್ವಿ, ನಾನೇ ಮಾಡಿದೆ, ನಾನೇ ಸರ್ಕಾರ ತಂದೆ ಅಂತ ಎಲ್ಲೂ ನಾನು ಹೇಳಿಕೊಳ್ಳಿಲ್ಲಪ್ಪ. ಎಲ್ರೂ ಸೇರಿ ಕೆಲಸ ಮಾಡಿದ್ವಿ, ಜನ ಕೈ ಹಿಡಿದ್ರು. ಆ ಸಂದರ್ಭದಲ್ಲಿ ನಾನು ಪರಾಭವ ಆದೆ. ಒಂದು ವೇಳೆ ನಾನು ಗೆದ್ದಿದ್ರೆ ಏನಾಗ್ತಿತ್ತೋ ಗೊತ್ತಿಲ್ಲ. ಆ ಸಂದರ್ಭದಲ್ಲೂ ಸಿಎಂ ರೇಸ್ನಲ್ಲಿ ನನ್ನ ಹೆಸರು ಇತ್ತು. ಸಾಮಾನ್ಯವಾಗಿ ಕೆಪಿಸಿಸಿ ಅಧ್ಯಕ್ಷರಿಗೆ ಸಿಎಂ ಆಗೋದಿಕ್ಕೆ ಒಂದು ಅವಕಾಶ ಕೊಡ್ತಾರೆ ಎಂದರು.
ಸತೀಶ್ ಜಾರಕಿಹೊಳಿ ಮನೆಯಲ್ಲಿ ಊಟಕ್ಕೆ ಸೇರಿದ ವಿಚಾರದ ಬಗ್ಗೆ ಮಾತನಾಡಿದ ಅವರು. ನಮಲ್ಲಿ ಯಾವುದೇ ಸಮಸ್ಯೆಯೇ ಇಲ್ಲ. ಯಾರೋ ಯಾರದ್ದೋ ಮನೆಗೆ ಊಟಕ್ಕೆ ಹೋದ್ರೂ ತಪ್ಪಾ. ಸತೀಶ್ ಜಾರಕಿಹೊಳಿ ಮನೆಯಲ್ಲಿ ಊಟಕ್ಕೆ ಸೇರಿ ಇಲಾಖಾವಾರು ಚರ್ಚೆ ಮಾಡ್ತೀವಿ, ಏನೂ ಮಾತಾಡೋದೇ ಬೇಡವಾ. ನಮ್ಮಲ್ಲಿ ಹೈಕಮಾಂಡ್ ಸ್ಟ್ರಾಂಗ್ ಇದೆ. ಇಲ್ಲೀವರೆಗೂ ಲೀಡರ್ ಶಿಪ್ ಬದಲಾವಣೆ ಬಗ್ಗೆ ಹೈಕಮಾಂಡ್ ಹೇಳಿಲ್ಲ. ಬೇರೆಯವರು ಮಾತಾಡೋದಕ್ಕೆ ಬೆಲೆ ಇಲ್ಲ.
ಸಿಎಂ ಅವರೇ 5 ವರ್ಷ ಸಿಎಂ ಆಗ್ತೀನಿ ಅಂತ ಹೇಳಿದ್ದಾರಲ್ಲ. ಎರಡೂವರೆ ವರ್ಷದ ಹಿಂದೆ ಸಿಎಲ್ಪಿ ಸಭೆಯಲ್ಲಿ ಸಿದ್ದರಾಮಯ್ಯ ಆಯ್ಕೆ ಆಗಿದ್ರು. ಮಧ್ಯದಲ್ಲಿ ಬದಲಾವಣೆ ಮಾಡೋದು ಹೈಕಮಾಂಡ್ಗೆ ಬಿಟ್ಟ ನಿರ್ಧಾರ. ಈಗ ಬದಲಾವಣೆ ಮಾಡ್ತಾರೆ ಅಂತ ನನಗೇನೋ ಅನಿಸ್ತಿಲ್ಲ ಎಂದು ಹೇಳಿದರು. ರಾಹುಲ್ ಗಾಂಧಿ ವಿದೇಶ ಪ್ರವಾಸದಲ್ಲಿದ್ದಾರೆ. ಅವರು ಬಂದ ಮೇಲೆ ಏನಾದ್ರೂ ಅಂಥ ಬೆಳವಣಿಗೆ ಇದ್ರೆ ಚರ್ಚೆ ಮಾಡಿ ತೀರ್ಮಾನ ಮಾಡ್ತಾರೆ. ಎಐಸಿಸಿ ಅಧ್ಯಕ್ಷರು ನಮ್ಮವರೇ ಇದ್ದಾರೆ.
ಅವರಿಗೆ ರಾಜ್ಯದ ರಾಜಕಾರಣ ಗೊತ್ತಿದೆ. ಏನಾದರೂ ಇದ್ದರೆ ಅವರು ರಾಹುಲ್ ಗಾಂಧಿಯವರ ಜೊತೆ ಚರ್ಚಿಸಿ ತೀರ್ಮಾನ ಮಾಡ್ತಾರೆ. ದಲಿತರು ಸಿಎಂ ಆಗಬೇಕು ಅಂತ ಬಹಳ ದಿನಗಳಿಂದ ಕೇಳ್ತಿದ್ದಾರೆ. ನಾವೆಲ್ಲ ಸಮಾನ ಮನಸ್ಕರು ಸೇರಿ ಚರ್ಚಿಸಿದ್ವಿ ಅಂದ್ರೆ ಆಗಿಬಿಡುತ್ತಾ ಅಂತ ಪ್ರಶ್ನೆ ಮಾಡಿದರು.


