ಬೆಂಗಳೂರು ಹೊರವಲಯ ಆನೇಕಲ್ ತಾಲ್ಲೂಕಿನ ಹೆಬ್ಬಗೋಡಿಯಲ್ಲಿ ಈ ಘಟನೆ ನಡೆದಿದ್ದು, ಪತ್ನಿಯ ಶೀಲ ಶಂಕಿಸಿ ಆಕೆಯ ಮೇಲೆ ದಾಳಿ ಮಾಡಿದ್ದಾನೆ ಎನ್ನಲಾಗಿದೆ. ಮೃತ ಮಹಿಳೆಯನ್ನು ಶ್ರೀಗಂಗಾ(29) ಎಂದು ಗುರುತಿಸಲಾಗಿದೆ. ಆರೋಪಿ ಪತಿ ಮೋಹನ್ ರಾಜು(32) ಎಂಬುವವನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಮೋಹನ್ ರಾಜ್ ಸ್ನೇಹಿತನ ಜೊತೆಗೆ ಶ್ರೀಗಂಗಾಳಿಗೆ ಅಕ್ರಮ ಸಂಬಂಧ ಇರುವ ಶಂಕೆ ಇತ್ತಂತೆ. 2-3 ವರ್ಷದಿಂದ ಮೋಹನ್ ರಾಜ್ ಪತ್ನಿ ಶೀಲ ಶಂಕಿಸಿ ಗಲಾಟೆ ಮಾಡುತ್ತಿದ್ದ. ಕಳೆದ 8 ತಿಂಗಳಿನಿಂದ ಪತಿ, ಪತ್ನಿ ದೂರವಾಗಿದ್ರು. ನಿನ್ನೆ ರಾತ್ರಿ ಮೋಹನ್ ರಾಜ್ ತನ್ನ ಮಗುವನ್ನ ನೋಡಲು ಮನೆಗೆ ಬಂದಿದ್ದ.
ಮೋಹನ್ ರಾಜ್ ಹೆಂಡತಿ ಮನೆಗೆ ಬಂದಾಗ ಪತಿ, ಪತ್ನಿ ನಡುವೆ ಗಲಾಟೆ ನಡೆದಿತ್ತು. ಇಂದು ಬೆಳಗ್ಗೆ ಶ್ರೀಗಂಗಾ ಮಗುವನ್ನ ಶಾಲೆಗೆ ಬಿಡಲು ಬೈಕ್ನಲ್ಲಿ ಬಂದಿದ್ದಳು. ಈ ವೇಳೆ ಕಾದು ಕುಳಿತಿದ್ದ ಪತಿ ಮೋಹನ್ ರಾಜ್ ಪತ್ನಿ ಶ್ರೀಗಂಗಾ ಮೇಲೆ ಅಟ್ಯಾಕ್ ಮಾಡಿದ್ದಾನೆ.
ಮೋಹನ್ ರಾಜ್ ಪತ್ನಿ ಶ್ರೀಗಂಗಾ ಮೇಲೆ 7-8 ಬಾರಿ ಚಾಕುವಿನಿಂದ ಚುಚ್ಚಿದ್ದಾನೆ. ಗಂಭೀರವಾಗಿ ಗಾಯಗೊಂಡು ಕುಸಿದು ಬಿದ್ದಿದ್ದ ಮಹಿಳೆಯನ್ನು ನಾರಾಯಣ ಹೆಲ್ತ್ ಸಿಟಿ ಆಸ್ಪತ್ರೆಗೆ ರವಾನೆ ಮಾಡಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಶ್ರೀಗಂಗಾ ಸಾವನ್ನಪ್ಪಿದ್ದಾರೆ. ಹೆಬ್ಬಗೋಡಿ ಪೊಲೀಸರು ಆರೋಪಿ ಮೋಹನ್ ರಾಜ್ ಅವರನ್ನ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.