ಕೊಪ್ಪಳ: ನಗರದ ಶ್ರೀ ಗವಿಸಿದ್ದೇಶ್ವರ ಪ್ರೌಢ ಶಾಲೆ ಸಭಾಂಗಣದಲ್ಲಿ, 1988-89ನೇ ಸಾಲಿನ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳ ತಂಡದಿಂದ, ಗುರುವಂದನೆ ಹಾಗೂ ಸ್ನೇಹ ಸಮ್ಮಿಲನ ಸಮಾರಂಭ ಆಯೋಜಿಸಲಾಗಿತ್ತು.
ಈ ವೇಳೆ ನಿವೃತ್ತ ಶಿಕ್ಷಕರಿಗೆ ಸನ್ಮಾನಿಸಲಾಯಿತು. ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಬಳಿಕ ಮಾತನಾಡಿದ ನಿವೃತ್ತ ಮುಖ್ಯೋಪಧ್ಯಾಯ ವಿ.ಕೆ.ಜಾಗಟಗೇರಿ, ಇಂದಿನ ಕಲುಷಿತ ಸಮಾಜದಲ್ಲಿ ನೈತಿಕ ಶಿಕ್ಷಣದ ಕೊರತೆ, ಮಾಧ್ಯಮಗಳು-ಮೊಬೈಲ್ ಹಾವಳಿಯಿಂದ, ಮಕ್ಕಳ ಸರ್ವತೋಮುಖ ಅಭಿವೃದ್ದಿ ಕಷ್ಟಕರವಾಗಿದೆ. ಪಾಲಕರು ಹೆಚ್ಚು ಸಮಯವನ್ನು ಮಕ್ಕಳಿಗೆ ನೀಡುವ ಮೂಲಕ ಉತ್ತಮ ನಾಗರಿಕರನ್ನು ಸಮಾಜಕ್ಕೆ ನೀಡಲು ಮುಂದಾಗಬೇಕಿದೆ. ಮಾನವೀಯ ಮೌಲ್ಯವುಳ್ಳ, ಸಚ್ಚಾರಿತ್ರ್ಯವಂತ ಮಕ್ಕಳನ್ನು ಬೆಳೆಸುವ ಮಹತ್ವದ ಜವಾಬ್ದಾರಿ ಪಾಲಕರ ಪಾಲಿಗೆ ಬಂದಿದೆ. ಇದನ್ನು ಸರಿಯಾಗಿ ನಿರ್ವಹಿಸಿ. ಇಂದು ವಿದ್ಯಾರ್ಥಿಗಳನ್ನು ದಂಡಿಸುವಂತಿಲ್ಲ. ಶಿಕ್ಷಕರು ಸಂದಿಗ್ದದಲ್ಲಿದ್ದಾರೆ. ನೈತಿಕ ಶಿಕ್ಷಣ ನೀಡಲಾಗುತ್ತಿಲ್ಲ. ಶಿಸ್ತು, ಸಮಯಪಾಲನೆಯಿಂದ ಮಾತ್ರ ಯಶಸ್ಸು ಸಾಧ್ಯವಿದೆ. ಇಂದಿನ ದಿನಗಳಲ್ಲಿ ಕೇವಲ ಅಂಕ ಆಧಾರಿತ ಶಿಕ್ಷಣ ಸಿಗುತ್ತಿದೆ. ಪಾಲಕರು ಕೇವಲ ಹಣ ಗಳಿಕೆಯಲ್ಲಿ ತೊಡಗಿದ್ದಾರೆ. ಇದರಿಂದಾಗಿ ಸಮಾಜದಲ್ಲಿ ಹಿರಿಯರನ್ನು ವೃದ್ಧಾಶ್ರಮಗಳಿಗೆ ಕಳುಹಿಸುವ ಪರಿಸ್ಥಿತಿ ನಿರ್ಮಾಣವಾಗಿದೆ.ಇದನ್ನು ತಪ್ಪಿಸಲು ಅಂಕ ಆಧಾರಿತ ಶಿಕ್ಷಣಕ್ಕೆ ಆದ್ಯತೆ ನೀಡದೆ ಮಾನವೀಯತೆಯುಳ್ಳ, ಉತ್ತಮ ಮಕ್ಕಳನ್ನು ಬೆಳಸುವ ಮೂಲಕ ಒಳ್ಳೆಯ ಸಮಾಜ ನಿರ್ಮಿಸಲು ಮನವಿ ಮಾಡಿದ್ರು.