Top Newsರಾಜಕೀಯಸುದ್ದಿ

ರಾಜ್ಯಪಾಲರಿಂದ ಸಚಿವರೊಬ್ಬರಿಗೆ ಶಾಕ್, ಕ್ರಮ ಕೈಗೊಳ್ಳುವಂತೆ ಅಡ್ವೋಕೇಟ್ ಜನರಲ್​​​​ಗೆ ಪತ್ರ!

ಬೆಂಗಳೂರು: ಸಚಿವ ಜಮೀರ್ ಅಹ್ಮದ್ ಖಾನ್ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕ್ರಿಯೆ ಆರಂಭಿಸಲು ಅಡ್ವೊಕೇಟ್ ಜನರಲ್ ಅವರ ಮನವಿಯನ್ನು ಪರಿಗಣಿಸುವಂತೆ ಕರ್ನಾಟಕ ರಾಜ್ಯಪಾಲ ತಾವರಚಂದ್ ಗೆಹ್ಲೋಟ್ ಅವರಿಗೆ ಸಾಮಾಜಿಕ ಕಾರ್ಯಕರ್ತ ಟಿ.ಜೆ ಅಬ್ರಹಾಂ ಮನವಿ  ಮಾಡಿದ್ದರು. ಈ ಹಿನ್ನೆಲೆಯಲ್ಲಿ ಇದೀಗ ರಾಜ್ಯಪಾಲರು ಸಚಿವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ಅಡ್ವೋಕೇಟ್ ಜನರಲ್​​​​ಗೆ ಪತ್ರ ಬರೆದಿದ್ದಾರೆ.

ರಾಜಕೀಯ ತೀರ್ಪು ಎಂದಿದ್ದ ಜಮೀರ್

ಮುಡಾ ನಿವೇಶನ ಹಂಚಿಕೆ ಪ್ರಕರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಕೋರಿದ್ದ ಮೂವರು ಅರ್ಜಿದಾರರಲ್ಲಿ ಟಿ.ಜೆ ಅಬ್ರಾಹಮ್ ಸಹ ಒಬ್ಬರಾಗಿದ್ದಾರೆ. ಸಿದ್ದರಾಮಯ್ಯ ವಿರುದ್ಧ ತನಿಖೆಗೆ ಅನುಮತಿ ನೀಡಿದ ಹೈಕೋರ್ಟ್ ಆದೇಶವನ್ನು ಜಮೀರ್ ಅಹ್ಮದ್ ಖಾನ್ ರಾಜಕೀಯ ತೀರ್ಪು ಎಂದು ಕರೆದಿದ್ದಾರೆ ಎಂದು ಅಬ್ರಹಾಂ ಆರೋಪಿಸಿದ್ದರು.

“ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಂಬಂಧಿಸಿದ ಹೈಕೋರ್ಟ್ ಆದೇಶದ ನಂತರ, ಕರ್ನಾಟಕ ವಸತಿ ಮತ್ತು ವಕ್ಫ್ ಸಚಿವ ಜಮೀರ್ ಅಹಮದ್ ಖಾನ್ ಇದು ನಿಮ್ಮೆಲ್ಲರ ಮುಂದೆ ರಾಜಕೀಯ ತೀರ್ಪು ಎಂದು ಬಹಿರಂಗವಾಗಿ ಕರೆದಿದ್ದಾರೆ” ಎಂದು ರಾಜಭವನದಲ್ಲಿ ಗೆಹ್ಲೋಟ್ ಅವರನ್ನು ಭೇಟಿಯಾದ ನಂತರ ಸುದ್ದಿಗಾರರಿಗೆ ತಿಳಿಸಿದ್ದರು. ಅಬ್ರಾಹಂ ನೀಡಿದ ದೂರಿನ ಹಿನ್ನಲೆಯಲ್ಲಿ ರಾಜ್ಯಪಾಲರು ಅಡ್ವೋಕೇಟ್ ಜನರಲ್​​​ಗೆ ಪತ್ರ ಬರೆದು, ಮುಂದಿನ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದ್ದಾರೆ.

ಇದರ ಹಿನ್ನೆಲೆ ಏನು?

ಮುಡಾ ಕೇಸ್ ನಲ್ಲಿ ತಮ್ಮ ವಿರುದ್ಧ ತನಿಖೆ ನಡೆಸಲು ರಾಜ್ಯಪಾಲರು ಕೊಟ್ಟಿದ್ದ ಅನುಮತಿಯನ್ನು ಪ್ರಶ್ನಿಸಿ, ಸಿಎಂ ಸಿದ್ದರಾಮಯ್ಯನವರು ಹೈಕೋರ್ಟ್ ಮೊರೆ ಹೋಗಿದ್ದರು. ಸಿದ್ದರಾಮಯ್ಯನವರ ಅರ್ಜಿಯನ್ನು ತಳ್ಳಿಹಾಕಿದ ಹೈಕೋರ್ಟ್, ರಾಜ್ಯಪಾಲರ ನಡೆ ಸರಿಯಾಗಿದೆ ಎಂದು ಹೇಳಿತ್ತು. ಆ ಮೂಲಕ, ಜನಪ್ರತಿನಿಧಿ ನ್ಯಾಯಾಲಯದಲ್ಲಿ ವಿಚಾರಣೆಗೆ ನೀಡಲಾಗಿದ್ದ ಈ ಪ್ರಕರಣದ ವಿಚಾರಣೆಯ ತಡೆಯೂ ತೆರವುಗೊಂಡಿತು.

ಸೆ. 25ರಂದು, ತೀರ್ಪು ನೀಡಿದ ಜನಪ್ರತಿನಿಧಿ ನ್ಯಾಯಾಲಯ ಸಿದ್ದರಾಮಯ್ಯನವರ ವಿರುದ್ಧ ತನಿಖೆ ನಡೆಸುವಂತೆ ಹಾಗೂ ಎಫ್ಐಆರ್ ದಾಖಲಿಸುವಂತೆ ಮೈಸೂರು ಲೋಕಾಯುಕ್ತ ಎಸ್ಪಿಗೆ ಸೂಚನೆ ನೀಡಿತು. ಈ ತೀರ್ಪಿನ ವಿರುದ್ಧ ಟೀಕೆ ಮಾಡಿದ್ದ ಜಮೀರ್ ಅಹ್ಮದ್, ನ್ಯಾಯಾಲಯದ ತೀರ್ಪು ರಾಜಕೀಯ ಪ್ರೇರಿತವಾಗಿದ್ದು, ಅದೊಂದು ರಾಜಕೀಯ ತೀರ್ಪು ಎಂದು ಹೇಳಿದ್ದರು. ಆ ಹಿನ್ನೆಲೆಯಲ್ಲಿ ಮುಡಾ ದೂರುದಾರರಲ್ಲೊಬ್ಬರಾದ ಟಿ.ಜೆ. ಅಬ್ರಹಾಂ ಅವರು ಜಮೀರ್ ಅವರ ವಿರುದ್ಧ ನ್ಯಾಯಾಂಗ ನಿಂದನೆ ಕೇಸ್ ದಾಖಲಿಸಿ ಪಾಠ ಕಲಿಸುವುದಾಗಿ ಹೇಳಿದ್ದರು.

Comments (0)

Your email address will not be published. Required fields are marked *

Back to top button