ಹುಬ್ಬಳ್ಳಿ: ನರೇಂದ್ರ ಮೋದಿ ಅವರು ಮೂರನೇ ಬಾರಿ ಪ್ರಧಾನಿ ಆದರೆ ತಮ್ಮ ಕೈಗೆ ಚೊಂಬೇ ಗತಿ ಎಂಬ ಭಯ ಕಾಂಗ್ರೆಸ್ ಅವರನ್ನು ಕಾಡುತ್ತಿದೆ ಎಂದು ಮಾಜಿ ಸಚಿವ ಬಸನಗೌಡ ಪಾಟೀಲ್ ಯತ್ನಾಳ್ ಲೇವಡಿ ಮಾಡಿದರು.
ಧಾರವಾಡದ ಲೋಕಸಭಾ ಕ್ಷೇತ್ರದ ಮೊರಬದಲ್ಲಿ ಬಿಜೆಪಿ ಅಭ್ಯರ್ಥಿ ಪ್ರಲ್ಹಾದ ಜೋಶಿ ಪರ ಮತಯಾಚಿಸಿ ಮಾತನಾಡಿ, ಸಿಎಂ ಸಿದ್ದರಾಮಯ್ಯ ಮತ್ತು ಕಾಂಗ್ರೆಸ್ರವರು ಮೋದಿ ಅಂದ್ರೆ ಸಾಕು ರಾತ್ರಿ ಗಾಢ ನಿದ್ರೆಯಲ್ಲೂ ಬೆಚ್ಚಿ ಬೀಳುತ್ತಾರೆ. ಅದೇ ಚೊಂಬಿನ ಕನಸು ಬೀಳುತ್ತಿದೆ ಅವರಿಗೆ ಎಂದು ಲೇವಡಿ ಮಾಡಿದರು.
ರಾಜ್ಯ ಕಾಂಗ್ರೆಸ್ ಉಸ್ತುವಾರಿ ಸುರ್ಜೇವಾಲ ಒಬ್ಬ ಕಲೆಕ್ಟ್ ಮಾಸ್ಟರ್. ಹಾಗಾಗಿ ಚೊಂಬು ಹಿಡಿದೇ ಪ್ರೆಸ್ ಮೀಟ್ ಮಾಡಿದ್ದಾರೆ. ಮೋದಿ ಅವರು ಮೂರನೇ ಬಾರಿ ಪ್ರಧಾನಿಯಾಗುತ್ತಾರೆ ಎಂಬುದು ಗ್ಯಾರೆಂಟಿ ಆಗಿದ್ದರಿಂದ ಹೀಗೆ ಹತಾಶರಾಗಿ ಏನೇನೋ ಮಾಡುತ್ತಿದ್ದಾರೆ ಎಂದರು.
ಮೋದಿ ಕಾಂಗ್ರೆಸ್ರವರ ಕೈಗೆ ಚೊಂಬು ಕೊಡುತ್ತಾರೆಂಬ ಭಯ. ಆದರೆ, ಕಾಂಗ್ರೆಸ್ಸಿಗರು ಚೊಂಬು ಹಿಡಿದೂ ಹೋಗಲಾಗದು. ಮೋದಿ ಅವರು ಇದನ್ನು ತಪ್ಪಿಸಬೇಕೆಂದು ಎಲ್ಲಾ ಕಡೆ ಶೌಚಾಲಯ ಕಟ್ಟಿ ಬಿಟ್ಟಿದ್ದಾರೆ. ಅಲ್ಲೂ ಅಡ್ಡಿಯಾಗಿದೆ ಇವರಿಗೆ ಎಂದು ಯತ್ನಾಳ್ ಟೀಕಿಸಿದರು.