Tuesday, June 24, 2025
26.6 C
Bengaluru
Google search engine
LIVE
ಮನೆರಾಜಕೀಯಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರಕ್ಕೆ ಶಾಶ್ವತ ನೀರಾವರಿ ಯೋಜನೆ, ಜಿಲ್ಲೆಗೆ ಪ್ರತ್ಯೇಕ ಹಾಲು ಒಕ್ಕೂಟ : ಡಾ.ಕೆ.ಸುಧಾಕರ್‌

ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರಕ್ಕೆ ಶಾಶ್ವತ ನೀರಾವರಿ ಯೋಜನೆ, ಜಿಲ್ಲೆಗೆ ಪ್ರತ್ಯೇಕ ಹಾಲು ಒಕ್ಕೂಟ : ಡಾ.ಕೆ.ಸುಧಾಕರ್‌

ಗೌರಿಬಿದನೂರು : ನಾನು ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಸಂಸದನಾದ ಬಳಿಕ ಬಯಲುಸೀಮೆಗೆ ಶಾಶ್ವತ ನೀರಾವರಿ ಯೋಜನೆ ನೀಡುತ್ತೇನೆ. ಹಾಗೆಯೇ ಚಿಕ್ಕಬಳ್ಳಾಪುರ ಜಿಲ್ಲೆಗೆ ಪ್ರತ್ಯೇಕ ಹಾಲು ಒಕ್ಕೂಟ ತರುತ್ತೇನೆ ಎಂದು ಬಿಜೆಪಿ ಅಭ್ಯರ್ಥಿ ಡಾ.ಕೆ.ಸುಧಾಕರ್‌ ಮಹತ್ವದ ಭರವಸೆ ನೀಡಿದ್ದಾರೆ.

ಗೌರಿಬಿದನೂರಿನಲ್ಲಿ ಬಿಜೆಪಿ ಶಕ್ತಿಕೇಂದ್ರ ಪ್ರಮುಖರು, ಸಹ-ಪ್ರಮುಖರು ಹಾಗೂ ಕಾರ್ಯಕರ್ತರ ಸಭೆಯಲ್ಲಿ, ಚುನಾವಣಾ ಉಸ್ತುವಾರಿ ರಾಧಾಮೋಹನ್‌ ಅಗರ್ವಾಲ್‌ ಅವರೊಂದಿಗೆ ಭಾಗವಹಿಸಿ ಅವರು ಮಾತನಾಡಿದರು. ನಾನು ಕೊಟ್ಟ ಮಾತು, ಇಟ್ಟ ಹೆಜ್ಜೆ ಎಂದಿಗೂ ಸುಳ್ಳಾಗುವುದಿಲ್ಲ. ನನ್ನ ಕರ್ಮಭೂಮಿ ಇದೇ ಆಗಿರುವುದರಿಂದ ಇಲ್ಲಿನ ಅಭಿವೃದ್ಧಿಗಾಗಿ ಶ್ರಮಿಸುತ್ತೇನೆ. ಸಂಸದನಾದ ಬಳಿಕ ಬಯಲುಸೀಮೆ ಭಾಗಕ್ಕೆ ಶಾಶ್ವತ ನೀರಾವರಿ ಯೋಜನೆ ತರುತ್ತೇನೆ ಎಂದರು.

ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಬಡವರಿಗೆ ಕೊಡುವ ಸರ್ಕಾರವಾಗಿದ್ದರೆ, ರಾಜ್ಯದಲ್ಲಿರುವ ಕಾಂಗ್ರೆಸ್‌ ಸರ್ಕಾರ ಕಿತ್ತುಕೊಳ್ಳುವ ಸರ್ಕಾರವಾಗಿದೆ. ಕಿಸಾನ್‌ ಸಮ್ಮಾನ್‌ನಡಿ ಬಿಜೆಪಿ ಸರ್ಕಾರ ರೈತರಿಗೆ 4,000 ರೂ. ನೀಡುತ್ತಿದ್ದರೆ, ಅದನ್ನು ಕಾಂಗ್ರೆಸ್‌ ಕಿತ್ತುಕೊಂಡಿದೆ. ಬಿಜೆಪಿ ನೀಡುತ್ತಿದ್ದ ವಿದ್ಯಾರ್ಥಿವೇತನವನ್ನು ಕೂಡ ರಾಜ್ಯ ಕಾಂಗ್ರೆಸ್‌ ಕಿತ್ತುಕೊಂಡಿದೆ ಎಂದು ದೂರಿದರು.

ಚಿಕ್ಕಬಳ್ಳಾಪುರ ಹಾಲು ಒಕ್ಕೂಟ 5 ಲಕ್ಷ ಲೀಟರ್‌ ಹಾಲು ಉತ್ಪಾದಿಸುತ್ತಿದ್ದು, ಅದಕ್ಕಾಗಿಯೇ ಪ್ರತ್ಯೇಕ ಒಕ್ಕೂಟ ತರಲಾಯಿತು. ಆದರೆ ಅದನ್ನು ರದ್ದು ಮಾಡಿದ ಕಾಂಗ್ರೆಸ್‌ ಸರ್ಕಾರ ಮತ್ತೆ ಕೋಲಾರಕ್ಕೆ ಒಕ್ಕೂಟವನ್ನು ನೀಡಿ ರೈತರ ಸ್ವಾಭಿಮಾನವನ್ನೇ ಕಿತ್ತುಕೊಂಡಿದೆ. ನಾನು ವೈದ್ಯಕೀಯ ಕಾಲೇಜಿಗಾಗಿ ರಾಜೀನಾಮೆ ನೀಡಿ ಬಿಜೆಪಿಗೆ ಸೇರಿದೆ. ಇದೇ ರೀತಿ ಹಾಲು ಒಕ್ಕೂಟವನ್ನು ಕೂಡ ಮರಳಿ ತರುತ್ತೇನೆ. ಇದನ್ನು ಕಿತ್ತುಕೊಳ್ಳಲು ಈಗಿನ ಚಿಕ್ಕಬಳ್ಳಾಪುರದ ಶಾಸಕರಿಂದಲೂ ಸಾಧ್ಯವಿಲ್ಲ. ಸೂರ್ಯ ಚಂದ್ರರು ಇರುವುದು ಎಷ್ಟು ಸತ್ಯವೋ ಅದೇ ರೀತಿ ಹಾಲು ಒಕ್ಕೂಟವನ್ನು ಮರಳಿ ತರುವುದು ಕೂಡ ಸತ್ಯ ಎಂದರು.

ಹಿಂದಿನ ಸರ್ಕಾರದಿಂದ ರೈತರಿಗೆ 5 ರೂ. ಹಾಲು ಪ್ರೋತ್ಸಾಹಧನ ನೀಡಲಾಗುತ್ತಿತ್ತು. ಎಂಟು ತಿಂಗಳಿಂದ ಈ ಪ್ರೋತ್ಸಾಹಧನ ಸಿಗುತ್ತಿಲ್ಲ. ಅಲ್ಲದೆ ಅದರಲ್ಲಿ ಒಂದು ರೂಪಾಯಿ ಇಳಿಸಿದ್ದಾರೆ. ಬೇಸಿಗೆಯಲ್ಲಿ ಹಾಲು ಉತ್ಪಾದಿಸುವುದು ಕಷ್ಟದ ಕೆಲಸ. ನಾನು ಶಾಸಕನಾಗಿದ್ದಾಗ ಕೆರೆಗಳಿಗೆ ನೀರು ತುಂಬಿಸಿದ್ದೆ, ತಾಲೂಕು ಆಸ್ಪತ್ರೆ ನೀಡಿದ್ದೆ. ಆಯುಷ್ಮಾನ್‌ ಭಾರತ್‌ ಮೂಲಕ ಜನರಿಗೆ ತಲಾ 5 ಲಕ್ಷ ರೂ. ಆರೋಗ್ಯ ವಿಮೆಯನ್ನು ಪ್ರಧಾನಿ ಮೋದಿ ನೀಡಿದ್ದಾರೆ.

ಕೋವಿಡ್‌ ಸಮಯದಲ್ಲಿ 10 ಕೆಜಿ, ಬಳಿಕ 5 ಕೆಜಿ ಅಕ್ಕಿ ನೀಡಲಾಯಿತು. ಆದರೆ ಕಾಂಗ್ರೆಸ್‌ ಸರ್ಕಾರ ಅಕ್ಕಿ ನೀಡದೆ ವಂಚಿಸಿದೆ. ಬಳಿಕ 3 ಕೆಜಿ ಅಕ್ಕಿ ನೀಡಿ ಮೂರು ನಾಮ ಹಾಕಿದೆ ಎಂದರು. ಪ್ರಧಾನಿ ಮೋದಿ ಉಜ್ವಲ ಯೋಜನೆ ಮೂಲಕ 10 ಕೋಟಿ ಮಹಿಳೆಯರ ಆರೋಗ್ಯ ರಕ್ಷಣೆ ಮಾಡಿ ಅನಿಲ ಸಿಲಿಂಡರ್‌ ನೀಡಿದ್ದಾರೆ. ಅವರ ಗೌರವ ಉಳಿಸಲು ಶೌಚಾಲಯ ನೀಡಿದ್ದಾರೆ. ಕಟ್ಟಕಡೆಯ ವ್ಯಕ್ತಿಗೆ ಏನು ಬೇಕೆಂದು ಅರಿತು ಯೋಜನೆಗಳನ್ನು ನೀಡಿದ್ದಾರೆ ಎಂದರು.

ಮೋದಿ ಗ್ಯಾರಂಟಿ

ದೇಶದ ಭವಿಷ್ಯ ರೂಪಿಸುವ, ಮಕ್ಕಳ ಬದುಕನ್ನು ಬಂಗಾರ ಮಾಡುವ, ಮಹಿಳಾ ಸಬಲೀಕರಣ ಮಾಡುವ ಗ್ಯಾರಂಟಿಯೇ ಮೋದಿ ಗ್ಯಾರಂಟಿ. ತಾತ್ಕಾಲಿಕ ಅನುಕೂಲಕ್ಕಾಗಿ ಭವಿಷ್ಯವನ್ನು ಹಾಳು ಮಾಡಿಕೊಳ್ಳಬೇಡಿ. ಕಾಂಗ್ರೆಸ್‌ ಸರ್ಕಾರ ಒಂದೂವರೆ ಲಕ್ಷ ಕೋಟಿ ರೂ. ಸಾಲ ಮಾಡಿದೆ. ಇಂತಹ ಪಕ್ಷ ರಾಜ್ಯಕ್ಕೆ ಬೇಡ ಎಂದರು.

ಭಾರತೀಯ ಜನತಾ ಪಾರ್ಟಿ ನಾಯಕರ ಪಕ್ಷವಲ್ಲ, ಇದು ಕಾರ್ಯಕರ್ತರ ಪಕ್ಷ. ಆದ್ದರಿಂದಲೇ ಬಿಜೆಪಿಯಲ್ಲಿ ಅತಿ ಹೆಚ್ಚು ಕಾರ್ಯಕರ್ತರಿದ್ದಾರೆ. 20 ಕೋಟಿಗೂ ಅಧಿಕ ಕಾರ್ಯಕರ್ತರನ್ನು ಬಿಜೆಪಿ ಹೊಂದಿದ್ದು, ಇದು ಜಗತ್ತಿನ ಯಾವ ಭಾಗದಲ್ಲೂ ಇಲ್ಲ. ಜೆಡಿಎಸ್‌ ಸಹೋದರರೊಂದಿಗೆ ಬಿಜೆಪಿ ಕಾರ್ಯಕರ್ತರು ಒಂದಾಗಿ ಕೆಲಸ ಮಾಡಬೇಕು ಎಂದರು.

ಕಾರ್ಯಕ್ರಮದಲ್ಲಿ ನಮ್ಮ ರಾಜ್ಯ ಚುನಾವಣಾ ಉಸ್ತುವಾರಿಗಳಾದ ಶ್ರೀ ರಾಧಾ ಮೋಹನ್ ದಾಸ್ ಅಗರ್ವಾಲ್, ರಾಜ್ಯ ಪ್ರಧಾನ ಕಾರ್ಯದರ್ಶಿ ಶ್ರೀ ನಂದೀಶ್ ರೆಡ್ಡಿ, ಜಿಲ್ಲಾಧ್ಯಕ್ಷರಾದ ಶ್ರೀ ರಾಮಲಿಂಗಪ್ಪ, ಮುಖಂಡರುಗಳಾದ ಶ್ರೀ ರವಿನಾರಾಯಣ ರೆಡ್ಡಿ, ಶ್ರೀ ಮೋಹನ್, ಡಾ.ಶಶಿಧರ್, ಇನ್ನಿತರ ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು.

Website |  + posts
RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments