ಗದಗ : ಮಾಜಿ ಶಾಸಕ ರಾಮಕೃಷ್ಣ ದೊಡ್ಡಮನಿ ಅವರು ಕಳೆದ ವಿಧಾನಸಭೆ ಚುನಾವಣೆಯಲ್ಲಿ ಕೈ ಟಿಕೆಟ್ ತಪ್ಪಿದಕ್ಕೆ ಅಸಮಾಧಾನಗೊಂಡು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ನೇರವಾಗಿ ಕೈ ಅಭ್ಯರ್ಥಿ ಸುಜಾತಾ ದೊಡ್ಡಮನಿ ಅವರ ಸೋಲಿಗೆ ಕಾರಣರಾಗಿದ್ದರು.
ನಂತರ ಪಕ್ಷ ಅವರನ್ನು 6ವರ್ಷ ಉಚ್ಚಾಟನೆ ಮಾಡಿತ್ತು. ಆದರೆ, ಬದಲಾದ ಸನ್ನಿವೇಶದಲ್ಲಿ ಮತ್ತೆ ಮರಳಿ ಗೂಡಿಗೆ ಮಾಜಿ ಶಾಸಕರು ಸೇರ್ಪಡೆಗೊಂಡಿದ್ದಾರೆ. ಒಂದು ಕಡೆ ಅವರನ್ನು ಪಕ್ಷಕ್ಕೆ ಸೇರಿಸಿಕೊಳ್ಳಬಾರದೆಂದು ಮಾದಿಗ ಸಮುದಾಯ ಪಟ್ಟು ಹಿಡಿದಿತ್ತು. ಇದರ ಹೊರತಾಗಿಯೂ ಅವರು ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ.
ಜೊತೆಗೆ ಗದಗ ಜಿಲ್ಲೆಯ ಶಿರಹಟ್ಟಿ ವಿಧಾನಸಭಾ ಕ್ಷೇತ್ರದ ಹಲವು ನಾಯಕರು ರಾಜ್ಯ ಕಾಂಗ್ರೆಸ್ ಸರ್ಕಾರದ ಅಭಿವೃದ್ಧಿಪರ ಆಡಳಿತವನ್ನು ಮೆಚ್ಚಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡರು. ಈ ವೇಳೆ ಮಾತನಾಡಿದ ಸಚಿವ ಹೆಚ್ ಕೆ ಪಾಟೀಲರು, ಲೋಕಸಭಾ ಚುನಾವಣೆ ಹೊತ್ತಲ್ಲಿ ಅವರ ಪಕ್ಷ ಸೇರ್ಪಡೆ ಈ ಭಾಗದಲ್ಲಿ ಇನ್ನಷ್ಟು ಬಲ ಬಂದಿದೆ.
ಹಳೆ ಮುನಿಸು ಮರೆತು ಅವರು ಮತ್ತೆ ಪಕ್ಷಕ್ಕೆ ಬಂದದ್ದು ಸ್ವಾಗತಾರ್ಹ ಎಂದರು. ಈ ವೇಳೆ ಮಾಜಿ ಶಾಸಕ ಡಿ. ಆರ್. ಪಾಟೀಲ, ರೋಣ ಕ್ಷೇತ್ರದ ಶಾಸಕ ಜಿ. ಎಸ್. ಪಾಟೀಲ ಸೇರಿದಂತೆ ಅನೇಕ ಸ್ಥಳೀಯ ಮುಖಂಡರು ಹಾಗೂ ಅಪಾರ ಸಂಖ್ಯೆಯ ಕಾರ್ಯಕರ್ತರು ಉಪಸ್ಥಿತರಿದ್ದರು.