ಚಿಕ್ಕಮಗಳೂರು: ಕಾಫಿನಾಡು ಚಿಕ್ಕಮಗಳೂರಿನ ಮಲೆನಾಡಿನಾದ್ಯಂತ ಮುಂಗಾರು ಪೂರ್ವ ಮಳೆ ಅರ್ಭಟಿಸುತ್ತಿದೆ. ಮತ್ತೊಂದೆಡೆ ಸಂಕ್ರಾಮಿಕ ರೋಗಗಳು ಉಲ್ಬಣಗೊಳ್ಳುತ್ತಿವೆ. ಡೆಂಗಿ / ಡೆಂಗ್ಯೂ ಹಾಗೂ ವಿಷಮ ಶೀತ ಜ್ವರ ರಣಕೇಕೆ ಹಾಕಲಾರಂಭಿಸಿದ್ದು ಜನ ಅನಾರೋಗ್ಯದಿಂದ ಆಸ್ಪತ್ರೆ ಸೇರುತ್ತಿದ್ದಾರೆ. ರೋಗಿಗಳಿಂದ ಆಸ್ಪತ್ರೆಗಳು ತುಂಬಿ ಹೋಗಿದ್ದು, ಅರೋಗ್ಯ ಇಲಾಖೆಯ ಚಿಕ್ಕಮಗಳೂರು ಘಟಕ ಹೈ ಅಲರ್ಟ್ ಘೋಷಣೆ ಮಾಡಿದೆ.
ಈಗಾಗಲೇ ಮಲೆನಾಡಲ್ಲಿ ವೈರಲ್ ಜ್ವರದಿಂದಾಗಿ ಆಸ್ಪತ್ರೆಗೆ ಹೋಗುವವರ ಸಂಖ್ಯೆ ಗಣನೀಯವಾಗಿ ಹೆಚ್ಚಿದೆ. ಮಲೆನಾಡು ಪ್ರದೇಶದಲ್ಲಿ ವಿಷಮ ಶೀತ ಜ್ವರ ಹಾಗೂ ಡೆಂಗ್ಯೂ ಜ್ವರದ ಪ್ರಮಾಣ ಕೂಡಾ ಅಷ್ಟೇ ಪ್ರಮಾಣದಲ್ಲಿ ಕ್ಷಿಪ್ರಗತಿಯಲ್ಲಿ ಹೆಚ್ಚಾಗತೊಡಗಿದೆ. ಜಿಲ್ಲೆಯಲ್ಲಿ ಈಗಗಲೇ ಡೆಂಗ್ಯೂ ಪ್ರಕರಣಗಳು ನೂರರ ಗಡಿ ದಾಟಿದೆ. ಜನವರಿಯಿಂದ ಇದುವರೆಗೆ 116 ಡೆಂಗ್ಯೂ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಅಷ್ಟೇ ಅಲ್ಲದೆ ಕಳೆದ ತಿಂಗಳಿಗೆ ಹೋಲಿಸಿದರೆ ಈ ತಿಂಗಳು ಆಸ್ಪತ್ರೆಗೆ ಬರ್ಯ್ವ ಹೊರ ರೋಗಿಗಳ ಸಂಖ್ಯೆ ಕೂಡಾ ಗಣನೀಯವಾಗಿ ಏರಿಕೆಯಾಗಿರೋದು ಜಿಲ್ಲೆಯ ಜನರನ್ನ ಆತಂಕಕ್ಕೆ ದೂಡಿದೆ.
ಜಿಲ್ಲೆಯಾದ್ಯಂತ ಡೆಂಗಿ ಹಾಗೂ ವಿಷಮ ಶೀತ ಜ್ವರ ಹೆಚ್ಚುತ್ತಿದ್ದು ಆರೋಗ್ಯ ಇಲಾಖೆ ಜಿಲ್ಲೆಯಾದ್ಯಂತ ಅರಿವು ಮೂಡಿಸಲು ಮುಂದಾಗಿದ್ದು, ಸಾರ್ವಜನಿಕರು ಮುಜಾಗ್ರತೆಯಿಂದ ಸುರಕ್ಷತಾ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದೆ. ಜಿಲ್ಲೆಯ ಎಲ್ಲ ತಾಲೂಕು ಆಸ್ಪತ್ರೆ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲೂ ಹೈ ಅಲರ್ಟ್ ಘೋಷಿಸಲಾಗಿದೆ. ಆಸ್ಪತ್ರೆಗೆ ಸಾಖಲಾಗುವ ಪ್ರಕರಣಗಳಲ್ಲಿ ಜ್ವರ ಪ್ರಕರಣಗಳೇ ಹೆಚ್ಚಾಗಿ ಕಂಡು ಬರುತ್ತಿವೆ.