ಹಾಸನ: ಏಪ್ರಿಲ್ 26 ರಂದು ನಡೆಯಲಿರುವ ಲೋಕಸಭಾ ಚುನಾವಣೆಯ ಮತದಾನಕ್ಕೆ ಮುಕ್ತ ಮತ್ತು ನ್ಯಾಯಯುತವಾಗಿ ನಡೆಯುವಂತೆ ಅಗತ್ಯ ಇರುವ ಎಲ್ಲಾ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಸಿ.ಸತ್ಯಭಾಮ ತಿಳಿಸಿದ್ದಾರೆ.
ನಗರದ ಜಿಲ್ಲಾ ಪಂಚಾಯತ್ ಹೇಮಾವತಿ ಸಭಾಂಗಣದಲ್ಲಿ ಮಾಧ್ಯಮಕ್ಕೆ ಮಾಹಿತಿ ನೀಡಿದ ಅವರು, ಹಾಸನ ಲೋಕಸಭಾ ಕ್ಷೇತ್ರದಾದ್ಯಂತ ಶುಕ್ರವಾರದಂದು ಬೆಳಿಗ್ಗೆ 7 ಗಂಟೆಯಿಂದ ಸಂಜೆ 6 ರ ವರೆಗೆ ಮತದಾನ ನಡೆಯಲಿದ್ದು, ಮತಗಟ್ಟೆಗಳಿಗೆ ಅಗತ್ಯ ಇರುವ ಎಲ್ಲಾ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲು ಸಿದ್ಧತೆ ಮಾಡಲಾಗಿದೆ.
ವಿಶೇಷ ಚೇತನರು, ಮತ್ತು ಹಿರಿಯ ನಾಗರಿಕರಿಗೆ ರ್ಯಾಂಪ್, ರೈಲಿಂಗ್ಸ್, ಮತ್ತು ಗಾಲಿಕುರ್ಚಿ, ಬ್ರೈಲ್ ಲಿಪಿಗಳನ್ನು ಒಳಗೊಂಡ ಇ.ವಿ.ಎಂ, ಸಂಕೇತ ಫಲಕ, ಶೌಚಾಲಯ ವ್ಯವಸ್ಥೆ, ಸಾರಿಗೆ ವ್ಯವಸ್ಥೆ, ಉಚಿತ ಸಾರಿಗೆ ವ್ಯವಸ್ಥೆ ಕಲ್ಪಿಸಲಾಗಿದ್ದು, ಚುನಾವಣಾ ಕರ್ತವ್ಯಕ್ಕೆ ಎನ್.ಎಸ್.ಎಸ್ ಹಾಗೂ ಸ್ಕೌಟ್ಸ್ ಮತ್ತು ಗೈಡ್ಸ್ ಸ್ವಯಂ ಸೇವಕರನ್ನು ಬಳಸಿಕೊಳ್ಳಲಾಗುವುದು ಎಂದರು.
ಇದೇ ರೀತಿ ಬೈಕ್ ರ್ಯಾಲಿ, ಸೈಕಲ್ ರ್ಯಾಲಿ, ಮಾನವ ಸರಪಳಿ, ಕಾಲುನಡಿಗೆ ಜಾಥಾ, ಪಂಜಿನ ಮೆರವಣಿಗೆ ಕರಪತ್ರಗಳ ವಿತರಣೆ, ಬ್ಯಾನರ್, ಪೋಸ್ಟರ್ ಮತ್ತು ಹೋರ್ಡಿಂಗ್ಸ್ ಗಳನ್ನು ಅಳವಡಿಸುವುದು, ಜಿಲ್ಲೆಯ ಎಲ್ಲಾ ಬಸ್ ನಿಲ್ದಾಣಗಳಲ್ಲಿ ಜಿಂಗಲ್ಸ್ ಗಳನ್ನು ಅಳವಡಿಸಲಾಗಿದ್ದು, ಸಾಮಾಜಿಕ ಮಾಧ್ಯಮಗಳ ಮೂಲಕ ಜಿಲ್ಲೆಯ ಮತದಾರರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ.
ಕೊನೆಯ ೭೨ ಗಂಟೆಗಳಲ್ಲಿ ಹೆಚ್ಚಿನ ಕಾರ್ಯ ನಿರ್ವಹಿಸಲು ೨೪x೭ ಪಾಳಿಯಲ್ಲಿ ಕರ್ತವ್ಯ ನಿರ್ವಹಿಸಲು ವಿಶೇಶ ಫ್ಲೈಯಿಂಗ್ ಸ್ಕ್ವಾಡ್ ತಂಡಗಳನ್ನು ರಚಿಸಲಾಗಿದೆ. ಲೋಕಸಭಾ ಕ್ಷೇತ್ರದ ಗಡಿ ಭಾಗಗಳಲ್ಲಿನ 31 ಚೆಕ್ ಪೋಸ್ಟ್ ಗಳಲ್ಲಿ ಕಣ್ಗಾವಲು ಪಡೆ ನೇಮಿಸಲಾಗಿದೆ.
ಕೊನೆಯ 48 ಗಂಟೆ ಗಳ ಮಾದರಿ ನೀತಿ ಸಂಹಿತೆ ಅವಧಿಯಲ್ಲಿ ಬಹಿರಂಗ ಪ್ರಚಾರ ನಿಷೇಧ ಮಾಡಲಾಗುವುದು, ಧ್ವನಿವರ್ಧಕ ಬಳಕೆ ನಿಷೇಧ, ಮತಗಟ್ಟೆಯ ೧೦೦ ಮೀಟರ್ ಅಂತರದಲ್ಲಿ ಮತಯಾಚನೆ ನಿಷೇಧ ಮಾಡಲಾಗಿದೆ. ಮತದಾನದ ಪ್ರಕ್ರಿಯೆಯಲ್ಲಿ ಭಾಗವಹಿಸಲು ಅನುಕೂಲ ಆಗುವಂತೆ ರಾಜ್ಯ ಸರ್ಕಾರಿ ಹಾಗೂ ಅನುದಾನಿತ ಶಿಕ್ಷಣ ಸಂಸ್ಥೆಗಳು ಹಾಗೂ ಸರ್ಕಾರಿ ಸ್ವಾಮ್ಯದ ಸಂಸ್ಥೆಗಳಿಗೆ ಸರ್ಕಾರಿ ರಜೆ ಘೋಷಣೆ ಮಾಡಲಾಗಿದೆ,
ಕಾಡಾನೆ ಹಾವಳಿ ಹೆಚ್ಚಾಗಿರುವ ಹಾಸನ ಜಿಲ್ಲೆಯ ಮಲೆನಾಡು ಭಾಗದಲ್ಲಿ ಈಗಾಗಲೇ ಉಪಟಳ ನೀಡುತ್ತಿದ್ದ ಎರಡು ಕಾಡಾನೆಗಳನ್ನು ಸೆರೆ ಹಿಡಿಯಲಾಗಿದೆ ಜೊತೆಗೆ ಅರಣ್ಯ ಇಲಾಖೆ ಸಿಬ್ಬಂದಿಗಳ ಮೂಲಕ ಕಾಡಾನೆಗಳ ಚಲನ ವಲನದ ಬಗ್ಗೆ ಮಾಹಿತಿ ನೀಡಲಾಗುವುದು ಎಂದು ಹೇಳಿದರು.
ಏಪ್ರಿಲ್.೨೪ ರ ಸಂಜೆ ೬ ಗಂಟೆಯಿಂದ ೨೬ ರ ರಾತ್ರಿ ೧೨ ಗಂಟೆ ವರೆಗೆ ಪಾನ ನಿರೋಧ ದಿನ ಘೋಷಿಸಿದ್ದು, ಈ ಅವಧಿಯಲ್ಲಿ ಎಲ್ಲಾ ಬಗೆಯ ಸ್ಟಾರ್ ಹೋಟೆಲ್, ಡಾಬಾ, ರೆಸ್ಟೋರೆಂಟ್ ಗಳಲ್ಲಿ ಮದ್ಯ ಮಾರಾಟ ಹಾಗೂ ಸರಬರಾಜು ಮಾಡುವುದನ್ನು ನಿಷೇಧ ಮಾಡಲಾಗಿದೆ.
ಜೊತೆಗೆ ಮತದಾನದ ದಿನದಂದು ಜಾತ್ರೆ, ಸಂತೆಗಳನ್ನ ನಿಷೇಧ ಮಾಡುವ ಜೊತೆಗೆ ರೆಸಾರ್ಟ್ ಗಳಲ್ಲಿ ವಾಸ್ತವ್ಯಕ್ಕೆ ನಿಷೇಧ ಹಾಕಲಾಗಿದೆ. ಮತದಾನಕ್ಕೆ ಗುರುತಿನ ಚೀಟಿ ಖಡ್ಡಾಯವಾಗಿದ್ದು ಇಲ್ಲದಿದ್ದರೆ ಪರ್ಯಾಯವಾಗಿ ಚುನಾವಣಾ ಆಯೋಗ ನಿಗದಿ ಪಡಿಸಿದ ೧೮ ದಾಖಲೆಗಳಲ್ಲಿ ಒಂದನ್ನು ಸಲ್ಲಿಸಿ ಮತದಾನ ಮಾಡಬಹುದು ಎಂದರು.
ಮಾದರಿ ನೀತಿ ಸಂಹಿತೆ ಉಲ್ಲಂಘನೆ ನಡೆಯುತ್ತಿರುವ ಯಾವುದೇ ಘಟನೆಗಳು ಕಂಡು ಬಂದರೆ ಚುನಾವಣಾ ಆಯೋಗದ ಸಿ, ವಿಜಿಲ್ ಎಂಬ ಮೊಬೈಲ್ ಆಫ್ ಮೂಲಕ ದೂರು ನೀಡಬಹುದು. ಒಟ್ಟಾರೆ ಮತದಾನಕ್ಕೆ ಅನುಕೂಲ ಆಗುವ ಎಲ್ಲ ರೀತಿಯ ಸಿದ್ಧತೆ ಮಾಡಲಾಗಿದ್ದು, ಎಲ್ಲರೂ ತಪ್ಪದೆ ಮತದಾನ ಮಾಡಲು ಮನವಿ ಮಾಡಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಹಮ್ಮದ್ ಸುಜೀತಾ ಅವರು ಮಾತನಾಡಿ, ಯಾರು ರೌಡಿ ಶೀಟರ್ ಇದ್ದಾರೆ ಅವರಲ್ಲಿ ೫೫ ಜನರನ್ನು ಗಡಿಪಾರು ಮಾಡಿಸಲಾಗಿದೆ. ಸೆಪ್ಟಂಬರ್ ತಿಂಗಳಿನಿಂದ ಇಲ್ಲಿವರೆಗೂ ೫ ಜನರ ಮೇಲೆ ಗುಂಡ ಕಾಯಿದೆಯನ್ನು ಜಾರಿಗೊಳಿಸಲಾಗಿದೆ. ಯಾರು ಚುನಾವಣೆ ಬಹಿಷ್ಕಾರ ಹಾಕಿದ್ದಾರೆ ಅಂತಹ ಗ್ರಾಮಗಳಿಗೆ ವಿವಿಧ ಇಲಖೆಯ ಅಧಿಕಾರಿಗಳು ಹೋಗಿ ಅವರ ತೊಂದರೆ ಬಗ್ಗೆ ಚರ್ಚಿಸಿ ಮನವರಿಕೆ ಮಾಡಲಾಗಿದೆ ಎಂದರು. ಜಿಲ್ಲೆಯಲ್ಲಿ ಶಾಂತಿಯುತ ಮತದಾನ ನಡೆಯಲು ಎಲ್ಲಾ ರೀತಿಯ ಅಗತ್ಯ ಕ್ರಮಕೈಗೊಳ್ಳಲಾಗಿದೆ ಎಂದು ಹೇಳಿದರು.
ಜಿಲ್ಲಾ ಸ್ವೀಪ್ ಸಮಿತಿ ಹಾಗೂ ಜಿಲ್ಲಾ ಪಂಚಾಯತ್ ಸಿಇಓ ಪೂರ್ಣಿಮ ಮಾತನಾಡಿ, ಲೋಕಸಭಾ ಸಾರ್ವತ್ರಿಕ ಚುನಾವಣೆ ಏಪ್ರಿಲ್ ೨೬, ೨೦೨೪ ರಂದು ನಡೆಯಲಿದ್ದು, ಹಾಸನ ಲೋಕಸಭಾ ಕ್ಷೇತ್ರದಲ್ಲಿ ಒಟ್ಟು ೨೨೨೧ ಮತಗಟ್ಟೆಗಳಿರುತ್ತವೆ. ಈ ಪೈಕಿ ಹಾಸನ ಜಿಲ್ಲೆಯಲ್ಲಿ ೧೯೬೮ ಮತಗಟ್ಟೆಗಳಿದ್ದು, ೨೦೧೯ ಲೋಕಸಭಾ ಚುನಾವಣೆಯಲ್ಲಿ ಶೇ.೭೭.೧೬ ರಷ್ಟು ಮತದಾನವಾಗಿರುತ್ತದೆ. ೨೦೨೪ರ ಲೋಕಸಭಾ ಚುನಾವಣೆಯಲ್ಲಿ ಶೇಕಡ ೮೩ ಆಗಬೇಕು.
ಆದರೇ ಶೇಕಡ ನೂರರಷ್ಟು ಮತದಾನಕ್ಕೆ ಜಾಗೃತಿ ಮೂಡಿಸಲಾಗಿದೆ. ಜಿಲ್ಲೆಯ ಶೈಕ್ಷಣಿಕ ಸಂಸ್ಥೆಗಳಲ್ಲಿ ಒಟ್ಟು ೬೪೫ ಮತದಾರರ ಸಾಕ್ಷರತಾ ಕೇಂದ್ರಗಳಿದ್ದು, ಪ್ರತಿ ಶಾಲಾ ಕಾಲೇಜುಗಳ ಕ್ಯಾಂಪಸ್ ಇಬ್ಬರು ಅಂಬಾಸಿಡರ್ ಗಳಿಗೆ ತರಬೇತಿ ನೀಡಿ ಇವರುಗಳ ಮೂಲಕ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರಿಗೆ ಮತದಾನದ ಅರಿವನ್ನು ಮೂಡಿಸಲಾಗುತ್ತಿದೆ ಎಂದರು.