ಬೆಂಗಳೂರು: ಕರ್ನಾಟಕದ ಹಿರಿಯ ರಾಜಕಾರಣಿ, ಮಾಜಿ ಮುಖ್ಯಮಂತ್ರಿ, ಮಾಜಿ ವಿದೇಶಾಂಗ ಸಚಿವ ಎಸ್ಎಂ ಕೃಷ್ಣ ಮಂಗಳವಾರ ಮುಂಜಾನೆ ಕೊನೆಯುಸಿರೆಳೆದಿದ್ದಾರೆ. ಕಳೆದ ಕೆಲವು ತಿಂಗಳುಗಳಿಂದ ವಯೋಸಹಜ ಕಾಯಿಲೆಗಳಿಂದ ಬಳಲುತ್ತಿದ್ದ ಕೃಷ್ಣ ಅವರು ತಮ್ಮ 92ನೇ ವಯಸ್ಸಿಗೆ ನಿಧನರಾಗಿದ್ದಾರೆ. ಈ ಮಧ್ಯೆ ಎಸ್ ಎಂ ಕೃಷ್ಣ ಅವರ ಲಗ್ನ ಪತ್ರಿಕೆ ವೈರಲ್ ಆಗುತ್ತಿದೆ.
ಇನ್ನು ಮೈಸೂರು ಸರ್ಕಲ್, ಬಿಡದಿ, ರಾಮನಗರ, ಚನ್ನಪಟ್ಟಣ ಮುಖಾಂತರ ಬೆಳಗ್ಗೆ 10.30ಕ್ಕೆ ಮದ್ದೂರು ತಾಲೂಕಿನ ಅವರ ಸ್ವಗ್ರಾಮ ಸೋಮನಹಳ್ಳಿಯಲ್ಲಿ ಸಾರ್ವಜನಿಕರಿಗೆ ಅಂತಿಮ ದರ್ಶನ ಏರ್ಪಡಿಸಲಾಗಿದೆ. ಬಳಿಕ ಮಧ್ಯಾಹ್ನ ಮೂರು ಗಂಟೆಯ ನಂತರ ಅಂತಿಮ ಸಂಸ್ಕಾರದ ವಿಧಿವಿಧಾನ ಆರಂಭವಾಗಲಿದೆ.
ಒಕ್ಕಲಿಗ ಸಂಪ್ರದಾಯದಂತೆ ಅವರ ಅಂತಿಮಕ್ರಿಯೆ ಪುರೋಹಿತರಾದ ಭಾನುಪ್ರಕಾಶ್ ಅವರ ನೇತೃತ್ವದಲ್ಲಿ ನಡೆಯಲಿದೆ. ಬೆಂಗಳೂರು – ಮೈಸೂರು ಹೆದ್ದಾರಿ ಪಕ್ಕದಲ್ಲಿರುವ ಕಾಫಿಡೇ ಸಮೀಪದ ಖಾಲಿ ಜಾಗದಲ್ಲಿ ಅಂತ್ಯ ಸಂಸ್ಕಾರಕ್ಕೆ ಈಗಾಗಲೇ ಸಿದ್ದತೆಯನ್ನು ಮಾಡಿಕೊಳ್ಳಲಾಗಿದೆ.
ಕಾಫಿಡೇ ಮಾಲೀಕ ಸಿದ್ದಾರ್ಥ ಪುತ್ರ ಮತ್ತು ಎಸ್.ಎಂ.ಕೃಷ್ಣ ಅವರ ಮೊಮ್ಮಗ ಅಮರ್ಥ್ಯ ಹೆಗಡೆ ಚಿತೆಗೆ ಅಗ್ನಿಸ್ಪರ್ಶ ಮಾಡಲಿದ್ದಾರೆ. ಬಿಜೆಪಿ ನಾಯಕ ಮತ್ತು ಮಲ್ಲೇಶ್ವರಂ ಕ್ಷೇತ್ರದ ಶಾಸಕರೂ ಆಗಿರುವ ಎಸ್. ಸುರೇಶ್ ಕುಮಾರ್ ಅವರು, ಸುಮಾರು 6 ದಶಕಗಳ ಹಿಂದಿನ ಎಸ್.ಎಂ.ಕೃಷ್ಣ ಅವರ ವಿವಾಹ ಆಹ್ವಾನ ಪತ್ರಿಕೆಯನ್ನು ತಮ್ಮ ಫೇಸ್ ಬುಕ್ ನಲ್ಲಿ ಹಾಕಿಕೊಂಡಿದ್ದಾರೆ.
ಏಪ್ರಿಲ್ 29, 1966ರಂದು ಪ್ರೇಮ ಅವರ ಜೊತೆಗೆ ನಡೆದ ವಿವಾಹ ಆಮಂತ್ರಣ ಪತ್ರಿಕೆಯು, ಅತ್ಯಂತ ಸರಳವಾಗಿದೆ. 1964ರ ಸಮಯದಲ್ಲಿ ಕೃಷ್ಣ ಪ್ರಜಾ ಸೋಷಿಯಲಿಸ್ಟ್ ಪಕ್ಷದಲ್ಲಿ ಸಕ್ರಿಯರಾಗಿ ತಮ್ಮನ್ನು ಗುರುತಿಸಿಕೊಂಡಿದ್ದರು. ತೀರ್ಥಹಳ್ಳಿಯ ಪ್ರೇಮ (ಕೃಷ್ಣ ಅವರ ಪತ್ನಿ) ಅವರ ಸೋದರ ಸಂಬಂಧಿಯೊಬ್ಬರು ಕೃಷ್ಣ ಅವರನ್ನು ಮದುವೆಯಾಗುವಂತೆ ಪ್ರಸ್ತಾವಿಸಿದರಂತೆ.
ಮಂಡ್ಯ ಜಿಲ್ಲೆ ಮದ್ದೂರಿನ ಪ್ರತಿಷ್ಠಿತ ಕುಟುಂಬದಿಂದ ಬಂದ ಸೋಮನಹಳ್ಳಿ ಮಲ್ಲಯ್ಯ ಕೃಷ್ಣ ತಾತ ಚಿಕ್ಕೇಗೌಡ್ರಿಗೆ ಹತ್ತು ಮಂದಿ ಮಕ್ಕಳು. ಕೃಷ್ಣ ಅವರ ತಂದೆ ಎಸ್. ಸಿ.ಮಲ್ಲಯ್ಯ ಅವರಿಗೆ 8 ಹೆಣ್ಣು, ಇಬ್ಬರು ಗಂಡು ಮಕ್ಕಳು. ಕೃಷ್ಣ ಅವರು 8ನೇ ಮಗು. ಶಿವಮೊಗ್ಗದ ಟೌನ್ ನ್ಯಾಷನಲ್ ಹೈಸ್ಕೂಲಿನಲ್ಲಿ ಕೃಷ್ಣ ಅವರ ಮದುವೆಯಾಗಿತ್ತು.
ಸುರೇಶ್ ಕುಮಾರ್ ಅವರು ತಮ್ಮ ಫೇಸ್ ಬುಕ್ ವಾಲ್ ನಲ್ಲಿ ಬರೆದುಕೊಂಡಿದ್ದು ಹೀಗೆ , ” ನಿನ್ನೆ ಅಸ್ತಂಗತರಾದ ರಾಜ್ಯದ ಮಾಜಿ ಮುಖ್ಯಮಂತ್ರಿ, ಕೇಂದ್ರದ ಮಾಜಿ ಸಚಿವ, ಮಾಜಿ ರಾಜ್ಯಪಾಲ, ಎಲ್ಲಕ್ಕಿಂತ ಹೆಚ್ಚಾಗಿ ಸುಸಂಸ್ಕೃತ ನಡವಳಿಕೆಯ ರಾಜಕೀಯ ಮುತ್ಸದ್ದಿ ಶ್ರೀ ಎಸ್ ಎಂ ಕೃಷ್ಣ ರವರ ವಿವಾಹದ ಆಹ್ವಾನ ಪತ್ರಿಕೆ ಇಂದು ಅಚಾನಕ್ಕಾಗಿ ಸಾಮಾಜಿಕ ಜಾಲತಾಣದಲ್ಲಿ ದೊರಕಿತು.
ಆಹ್ವಾನ ಪತ್ರಿಕೆಯ ಸರಳತೆಯನ್ನು ಕಂಡಾಗ, ಅಂದಿನ ಆ ವಿವಾಹ ಮಹೋತ್ಸವ ಅಂದರೆ ಸುಮಾರು 60 ವರ್ಷಗಳ ಹಿಂದೆ ಎಂತಹ ವಾತಾವರಣದಲ್ಲಿ ನಡೆದಿರಬಹುದು, ವಿವಾಹದ ಸರಳತೆ ಎಷ್ಟಿದ್ದಿರಬಹುದು… ಹೀಗೆಲ್ಲಾ ಮನಸ್ಸು ಯೋಚಿಸತೊಡಗಿತು” ಎಂದು ಸುರೇಶ್ ಕುಮಾರ್ ಬರೆದುಕೊಂಡಿದ್ದಾರೆ.