ಚಾಮರಾಜನಗರ: ಹಿಮವದ್ ಗೋಪಾಲಸ್ವಾಮಿ ಬೆಟ್ಟದಲ್ಲಿ ಸಿನಿಮಾ ಶೂಟಿಂಗ್ ನಡೆಯುತ್ತಿದ್ದು, ಪರಿಸರ ಪ್ರೇಮಿಗಳು, ರೈತರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಮಲಯಾಳಂ ಚಿತ್ರವೊಂದರ ಚಿತ್ರೀಕರಣ ದೇಗುಲದ ಆವರಣ ಮತ್ತು ಸುತ್ತಮುತ್ತ ನಡೆಯುತ್ತಿದೆ. 2016ರಿಂದಲೂ ಬೆಟ್ಟಕ್ಕೆ ಖಾಸಗಿ ವಾಹನಗಳ ಪ್ರವೇಶ ನಿರ್ಬಂಧ ಮತ್ತು ಪ್ಲಾಸ್ಟಿಕ್ ವಸ್ತುಗಳನ್ನು ಕೊಂಡೊಯ್ಯುವುದನ್ನು ನಿಷೇಧಿಸಲಾಗಿದೆ. ಇಂತಹದ್ದರಲ್ಲಿ, ಸಿನಿಮಾ ಚಿತ್ರೀಕರಣಕ್ಕೆ ಅವಕಾಶ ಕೊಟ್ಟಿರುವುದು ಎಷ್ಟು ಸರಿ ಎಂಬುದು ಪರಿಸರವಾದಿಗಳ ಪ್ರಶ್ನೆ ಮಾಡಿದ್ದಾರೆ.
ಬಂಡೀಪುರ ಹುಲಿ ರಕ್ಷಿತಾರಣ್ಯದ ಹಿಮವದ್ ಗೋಪಾಲಸ್ವಾಮಿ ಬೆಟ್ಟದಲ್ಲಿ ಚಿತ್ರತಂಡ ಶೂಟಿಂಗ್ ಮಾಡುತ್ತಿದ್ದು, ಶೂಟಿಂಗ್ನಿಂದ ಬಂದ ಹಣದಿಂದ ಬಂಡೀಪುರಕ್ಕೆ ಆಗಬೇಕಾಗಿರುವುದೇನು ಎಂದು ಅವರು ಪ್ರಶ್ನಿಸಿದರು.
ಸಿನಿಮಾ ಶೂಟಿಂಗ್ ಬಗ್ಗೆ ಬಂಡೀಪುರ ಎಸಿಎಫ್ ನವೀನ್ ಕುಮಾರ್ ಮಾತನಾಡಿ, “ಚಿತ್ರೀಕರಣಕ್ಕೆ ಸರ್ಕಾರ ಅನುಮತಿ ನೀಡಿದೆ, ಒಂದು ದಿನದ ಮಟ್ಟಿಗೆ ಮಾತ್ರ ಅವಕಾಶ ಕೊಡಲಾಗಿದ್ದು ದೇವಾಸ್ಥಾನದಲ್ಲಿ ಮಾತ್ರ ಚಿತ್ರೀಕರಣಕ್ಕೆ ಅವಕಾಶ ಇದೆ, ಎರಡು ಬಸ್ಗಳಿಗೆ ಅನುಮತಿ ಕೊಡಲಾಗಿದೆ” ಎಂದರು.
ಮಲಯಾಳಂ ಚಿತ್ರದ ಶೂಟಿಂಗ್ ಇದಾಗಿದ್ದು, ಸಂಚಾರ ಯೂನಿಟ್, ಪರದೆಗಳು, ದೊಡ್ಡ ಕ್ಯಾಮರಗಳನ್ನು ಬಳಸಿ ಚಿತ್ರತಂಡ ಚಿತ್ರೀಕರಣ ನಡೆಸಿದೆ. ದೇವಾಲಯದ ಮೆಟ್ಟಿಲ ಬಳಿ ಜೋಡಿಯೊಂದು ನಿಂತಿರುವುದು, ಸಹ ಕಲಾವಿದರು ಜೋರು ಶಬ್ದದೊಂದಿಗೆ ಪ್ರವೇಶದ್ವಾರದ ಬಳಿಗೆ ಓಡಿಬರುವುದು ಸೇರಿದಂತೆ ಇನ್ನೂ ಕೆಲವು ಸನ್ನಿವೇಶಗಳನ್ನು ಚಿತ್ರೀಕರಿಸಲಾಗಿದೆ.