ಹುಬ್ಬಳ್ಳಿ: ಮನೆಯಲ್ಲಿನ ಕೌಟುಂಬಿಕ ಸಮಸ್ಯೆ ಜಗಳದವರೆಗೆ ಹೋಗಿ, ಕೊನೆಗೆ ಕೋಪಗೊಂಡ ಮೈದುನ ಅತ್ತಿಗೆಯ ಕುತ್ತಿಗೆಗೆ ಚಾಕುವಿನಿಂದ ಇರಿದು ಕೊಲೆ ಮಾಡಿರುವ ಘಟನೆ ಹುಬ್ಬಳ್ಳಿಯ ಎಸ್.ಎಂ ಕೃಷ್ಣನಗರದಲ್ಲಿ ಭಾನುವಾರ ತಡ ರಾತ್ರಿ ನಡೆದಿದೆ.
ಸಾಜೀದಾ ನಾಲಬಂದ (38) ಕೊಲೆಯಾದ ಮಹಿಳೆ. ಆಕೆಯ ಪತಿ ಮಹ್ಮದ್ ಹನೀಫ್ ಗಾಯಗೊಂಡಿದ್ದು, ಕಿಮ್ಸ ಆಸ್ಪತ್ರೆಗೆ ದಾಖಲಿಸಲಾಗಿದೆ. ಮೈದುನ ನಾಸೀರ್ ನಾಲಬಂದ ಕೊಲೆ ಮಾಡಿದ ಆರೋಪಿ.
ನಾಸೀರ್ ಮನೆಯಲ್ಲಿ ಅಣ್ಣ, ತಮ್ಮ ಅತ್ತಿಗೆ ಮೂವರು ವಾಸವಾಗಿದ್ದು, ಆಗಾಗ ಅವರ ನಡುವೆ ಜಗಳಗಳು ನಡೆಯುತ್ತಿತ್ತು. ಭಾನುವಾರ ಸಹ ಜಗಳ ನಡೆದಿದ್ದು, ಅದು ವಿಕೋಪಕ್ಕೆ ಹೋದ ಪರಿಣಾಮ ಮೈದುನ ನಾಸಿರ್ ಅತ್ತಿಗೆಯ ಕುತ್ತಿಗೆಗೆ ಚಾಕು ಇರಿದಿದ್ದಾನೆ. ತೀವ್ರ ಗಾಯಗೊಂಡಿದ್ದ ಸಾಜೀದಾಳನ್ನು ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿರುವುದಾಗಿ ತಿಳಿದು ಬಂದಿದೆ.
ಸ್ಥಳಕ್ಕೆ ಕಮಿಷನರ್ ಎನ್ ಶಶಿಕುಮಾರ್, ಡಿಸಿಪಿ ಮಹಾನಿಂಗ ನಂದಗಾವಿ ಅವರು ಆಸ್ಪತ್ರೆಗೆ ಭೇಟಿ ನೀಡಿ ಮಾಹಿತಿ ಪಡೆದರು. ಈ ಕುರಿತು ಕಸಬಾಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.