ಬೆಂಗಳೂರು : ಸಿಎಂ ಸಿದ್ದರಾಮಯ್ಯ ಅವರು ಗುರುವಾರ ನಡೆಸಿದ ಆಹಾರ ಇಲಾಖೆ ಪ್ರಗತಿ ಪರಿಶೀಲನಾ ಸಭೆಯಲ್ಲಿ ಎಡವಟ್ಟೊಂದು ನಡೆದು ಹೋಗಿದೆ. ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಸಭೆಯಲ್ಲಿ ಎಂದಿನಂತೆ ಸಂಬಂಧಪಟ್ಟ ಎಲ್ಲರೂ ಹಾಜರಿದ್ದರು. ಹಿರಿಯ ಅಧಿಕಾರಿಗಳು, ನೌಕರರು ಹಾಗು ಸಚಿವರ ಪಿ ಎಸ್ ಗಳು ಆಸೀನರಾಗಿದ್ದರು. ಈ ವೇಳೆ ನುಗ್ಗಿ ಬಂದ ಇಂಟೆಲಿಜೆನ್ಸ್ ವಿಭಾಗದ ಎಸ್.ಪಿ ಒಬ್ಬರು ಎಲ್ಲರನ್ನೂ ಹೊರ ಕಳಿಸಿ ಅಜಾಗರೂಕತೆ ಮೆರೆದಿದ್ದಾರೆ. ಇದಕ್ಕೆ ಆಹಾರ ಇಲಾಖೆಯ ನೌಕರರು ತೀವ್ರ ಅಸಮಾಧಾನ ಹೊರಹಾಕಿದ್ದಾರೆ.
ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆ ಏರ್ಪಟ್ಟಿತ್ತು. ಸಭೆಯಲ್ಲಿ ಸಚಿವಾಲಯದ ನೌಕರರು ಕುಳಿತಿದ್ದರು. ಈ ವೇಳೆ ಬಂದ ಇಂಟೆಲಿಜೆನ್ಸ್ ಎಸ್.ಪಿಯವರು, ಎಂಡಿ, ಕಮೀಷನರ್ ಮತ್ತು ACS ಹೊರತುಪಡಿಸಿ ಡೆಪ್ಯುಟಿ ಸೆಕ್ರೆಟರಿ, ಅಂಡರ್ ಸೆಕ್ರೆಟರಿ ಸೇರಿ ಎಲ್ಲರನ್ನ ಹೊರ ಕಳಿಸಿದ್ದಾರೆ.ಇದರಿಂದ ಸಚಿವ ಮುನಿಯಪ್ಪ ಕೂಡ ಮುಜುಗರಗೊಂಡಿದ್ದಾರೆ. ನೊಂದ ಅಧಿಕಾರಿಗಳು ಸಿಎಂ ಗೃಹ ಕಚೇರಿಯಿಂದ ಬೇಸರದಲ್ಲಿ ಹೊರ ಹೋದರು ಎಂದು ಹೆಸರು ಹೇಳಲು ಇಚ್ಛಿಸದ ನೌಕರರು ಫ್ರೀಡಂ ಟಿವಿಗೆ ತಿಳಿಸಿದ್ದಾರೆ.
ವಿಶೇಷವೆಂದರೆ ಇದೆ ವೇಳೆ ನಡೆದ ಸಮಾಜ ಕಲ್ಯಾಣ ಇಲಾಖೆ ಪ್ರಗತಿ ಪರಿಶೀಲನಾ ಸಭೆಯಲ್ಲಿ ಕೂರಲು ಆ ಸಚಿವಾಲಯದ ಎಲ್ಲರಿಗೆ ಅವಕಾಶ ನೀಡಲಾಗಿತ್ತು ಎಂದು ಅವರು ಅಸಮಾಧಾನ ಹೊರ ಹಾಕಿದ್ದಾರೆ. ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಈ ತಾರತಮ್ಯ ನಡೆದಿದ್ದು ಬೇಸರ ತಂದಿದೆ.ನಿನ್ನೆ ಸಿಎಂ ನಕ್ಸಲರೊಂದಿಗೆ ಬೆರೆತು ನಕ್ಕಿದ್ದ ನಮ್ಮ ಸಿಎಂ ನಮ್ಮನ್ನು ಹೊರಕಳಿಸುವ ಮನಸ್ಥಿತಿಯವರಲ್ಲ. ಆದರೆ ಆ ಸೂಕ್ಷ್ಮ ಪೊಲೀಸ್ ಅಧಿಕಾರಿಗಳಿಂದ ಈ ಎಡವಟ್ಟು ನಡೆದಿದೆ. ಮುಂದೆ ಹೀಗೆ ಆಗಬಾರದು ಎಂಬುದೇ ನಮ್ಮ ಆಶಯ ಎಂದು ನೊಂದ ಅಧಿಕಾರಿಯೊಬ್ಬರು ಫ್ರೀಡಂ ಟಿವಿ ಜೊತೆ ನೋವು ತೋಡಿಕೊಂಡರು.