ನವದೆಹಲಿ: ಸಂಸತ್ತಿನಲ್ಲಿ ‘ಚಕ್ರವ್ಯೂಹ’ದ ಹೇಳಿಕೆ ನೀಡಿದ ನಂತರ ತಮ್ಮ ವಿರುದ್ಧ ಜಾರಿ ನಿರ್ದೇಶನಾಲಯ ದಾಳಿ ನಡೆಸಲು ಯೋಜನೆ ರೂಪಿಸಲಾಗಿದೆ ಎಂದು ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಶುಕ್ರವಾರ ಹೇಳಿದ್ದಾರೆ.
ನಾನು ಇಡಿ ಅಧಿಕಾರಿಗಳನ್ನು ಕೈಬೀಸಿ ಸ್ವಾಗತಿಸಲು ಸಿದ್ಧನಾಗಿದ್ದೇನೆ ಎಂದು ರಾಹುಲ್ ಗಾಂಧಿ ಅವರು ತಮ್ಮ ಎಕ್ಸ್ ಖಾತಯಲ್ಲಿ ಪೋಸ್ಟ್ ಮಾಡಿದ್ದಾರೆ. “ಸ್ಪಷ್ಟವಾಗಿ ಹೇಳುತ್ತೇನೆ, ಇಬ್ಬರಲ್ಲಿ ಒಬ್ಬರಿಗೆ ನನ್ನ ಚಕ್ರವ್ಯೂಹದ ಭಾಷಣ ಇಷ್ಟವಾಗಿಲ್ಲ. ನನ್ನ ವಿರುದ್ಧ ಇಡಿ ದಾಳಿ ನಡೆಸಲು ಯೋಜಿಸಲಾಗುತ್ತಿದೆ ಎಂದು ಇಡಿ ‘ಒಳಗಿನವರೇ’ ನನಗೆ ಹೇಳಿದ್ದಾರೆ” ಎಂದು ರಾಹುಲ್ ಗಾಂಧಿ ಎಕ್ಸ್ನಲ್ಲಿ ತಿಳಿಸಿದ್ದಾರೆ.
ನಾನು ಚಹಾ ಮತ್ತು ಬಿಸ್ಕತ್ ಇಟ್ಟುಕೊಂಡು ತೆರೆದ ತೋಳುಗಳೊಂದಿಗೆ ಇಡಿಯನ್ನು ಸ್ವಾಗತಿಸಲು ಕಾಯುತ್ತಿದ್ದೇನೆ” ಎಂದು ಮಾಜಿ ಕಾಂಗ್ರೆಸ್ ಅಧ್ಯಕ್ಷರು ಹೇಳಿದ್ದಾರೆ. ಕಳೆದ ಸೋಮವಾರ ಲೋಕಸಭೆಯಲ್ಲಿ ಬಜೆಟ್ ಬಗ್ಗೆ ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿದ್ದ ರಾಹುಲ್ ಗಾಂಧಿ, ಕುರುಕ್ಷೇತ್ರದಲ್ಲಿ ಅಭಿಮನ್ಯುವನ್ನು ಮಣಿಸಲು ಕೌರವರು ‘ಚಕ್ರವ್ಯೂಹ’ ನಿರ್ಮಿಸಿದ್ದಾರೆ. ರೈತರು, ಕಾರ್ಮಿಕರು ಮಾತ್ರವಲ್ಲದೆ ಬಿಜೆಪಿಯ ಸಂಸದರು ಸಹ ಈ ‘ಚಕ್ರವ್ಯೂಹ’ದಲ್ಲಿ ಸಿಲುಕಿದ್ದಾರೆ ಎಂದು ರಾಹುಲ್ ಗಾಂಧಿ ಆರೋಪಿಸಿದ್ದರು.