Monday, June 23, 2025
26.6 C
Bengaluru
Google search engine
LIVE
ಮನೆ#Exclusive NewsTop News" ಮೌಲ್ಯಗಳು ಮರೆಯಾಗದಿರಲಿ" ಪುಸ್ತಕ ಬಿಡುಗಡೆ ಸಮಾರಂಭ : ಡಾ. ಗೋವಿಂದರಾಯ.ಎಂ

” ಮೌಲ್ಯಗಳು ಮರೆಯಾಗದಿರಲಿ” ಪುಸ್ತಕ ಬಿಡುಗಡೆ ಸಮಾರಂಭ : ಡಾ. ಗೋವಿಂದರಾಯ.ಎಂ

ಪಾವಗಡ: ಸಮಾಜದಲ್ಲಿ ನೈತಿಕ ಮೌಲ್ಯಗಳು ಕಣ್ಮರೆಯಾಗಿ ಹದಿಹರೆಯದ ಮಕ್ಕಳು ಹಾದಿ ತಪ್ಪುವಂತಾಗುತ್ತಿದೆ ಎಂದು ಮಧುಗಿರಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಕನ್ನಡ ಸಹಾಯಕ ಪ್ರಾಧ್ಯಾಪಕರು ಡಾ. ಗೋವಿಂದರಾಯ.ಎಂ ವಿಷಾಧಿಸಿದರು.

ತಾಲೂಕಿನ ಕಿಲಾರ್ಲಹಳ್ಳಿ ಗ್ರಾಮದಲ್ಲಿ ಭಾನುವಾರ ಪತ್ರಕರ್ತ, ರಾಜ್ಯಮಟ್ಟದ ಸಂಪನ್ಮೂಲ ವ್ಯಕ್ತಿ ನವೀನ್ ಕಿಲಾರ್ಲಹಳ್ಳಿ ಅವರು ಬರೆದಿರುವಂತಹ “ಮೌಲ್ಯಗಳು ಮರೆಯಾಗದಿರಲಿ” ಇದು ಹೆತ್ತವರ ಹೊಡಲಿನ ಕೂಗು” ಎನ್ನುವ ಪುಸ್ತಕವನ್ನು ಬಿಡುಗಡೆಗೊಳಿಸಿ ಮಾತನಾಡಿದ ಅವರು, ಇಂದಿನ ಸಮಾಜದಲ್ಲಿ ನೈತಿಕತೆಯನ್ನು ಅಳವಡಿಸಿಕೊಳ್ಳಬೇಕಾದಂತಹ ಸ್ಥಾನದಲ್ಲಿ ಅನೈತಿಕತೆ ಎದ್ದು ತಾಂಡವಡುತ್ತಿದೆ. ಪೋಷಕರು, ಗುರುಗಳು, ಪರಿಸರ ಮಕ್ಕಳ ಬೆಳವಣಿಗೆ ಮೇಲೆ ಪರಿಣಾಮ ಬೀರುತ್ತವೆ. ಈ ನಿಟ್ಟಿನಲ್ಲಿ ನವೀನ್ ಕಿಲಾರ್ಲಹಳ್ಳಿ ಉತ್ತಮ ಬರಹಗಾರರಾಗುವ ಕಡೆ ಹೆಜ್ಜೆ ಇಡುತ್ತಿದ್ದು, ಇಂದಿನ ಸಮಾಜಕ್ಕೆ ಅಗತ್ಯವಾದಂತಹ ಮೌಲ್ಯಗಳ ಕುರಿತು ಸಾರಿ ಹೇಳಿದಂತಹ ಪುಸ್ತಕದಲ್ಲಿ 25 ಅಂಶಗಳ ಬಗ್ಗೆ ಅತ್ಯಾದ್ಭುತವಾಗಿ ತಿಳಿಸಿದ್ದಾರೆ. ಅದರಲ್ಲೂ ಹೆತ್ತವರ ಕಷ್ಟ ನಿನಗೆಷ್ಟು ಗೊತ್ತು. ಬದ್ಧತೆ, ಏಕಾಗ್ರತೆ, ಪೋಕ್ಸೋ, ದುಶ್ಚಟ, ಮೊಬೈಲ್ ಗೀಳು ಮತ್ತೀತರ ವಿಚಾರಗಳ ಬಗ್ಗೆ ಮನಮುಟ್ಟುವಂತೆ ತಿಳಿಸಿದ್ದಾರೆ ಎಂದು ಹರ್ಷ ವ್ಯಕ್ತಪಡಿಸಿದರು.

ಬೆಂಗಳೂರು ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕರು ಡಾ. ಚಿತ್ತಯ್ಯ ಪೂಜಾರ್ ಮಾತನಾಡಿ, ಸಮಾಜದಲ್ಲಿ ನೊಂದು ಬೆಂದವರು ಮಾತ್ರ ಇಂದು ಸಾಧನೆಯ ಇತಿಹಾಸವನ್ನು ಸೃಷ್ಟಿ ಮಾಡಿದ್ದಾರೆ. ಅಂತಹ ಹಸಿವಿನ ಕೂಗಿನಿಂದ ನವೀನ್ ಈ ಪುಸ್ತಕ ಹೊರತಂದಿದ್ದಾರೆ. ಅದಕ್ಕೆ ಹೆಮ್ಮೆಯಿದೆ. ಇತ್ತೀಚಿಗೆ ಗ್ರಾಮೀಣ ಭಾಗಗಳಲ್ಲಿ ಸೋಮಾರಿಗಳ ಸಂಖ್ಯೆ ಹೆಚ್ಚುತ್ತಿದೆ ಇಂತಹವರು ದುಶ್ಚಟಗಳಿಗೆ ಬಲಿಯಾಗುತ್ತಿರುವುದು ದುಃಖಕರ ಸಂಗತಿ, ಕಲಾವಿದ ನವೀನ್ ಕಿಲಾರ್ಲಹಳ್ಳಿ ಯುವ ಸಮೂಹಕ್ಕೆ ಸಂದೇಶವೊಂದನ್ನು ನೀಡಿದ್ದಾರೆ. ಗುರು ಹಿರಿಯರು ಹೆತ್ತವರು, ಗುರು ಹಿರಿಯರ ಮೌಲ್ಯ ಕುರಿತಾದ ಅಂಶಗಳನ್ನೊಳಗೊಂಡ ಪುಸ್ತಕ ಗಮನಸೆಳೆಯುತ್ತದೆ. ಪ್ರತಿಯೊಬ್ಬರೂ ಓದಲೇಬೇಕು ಎಂದು ಹಾರೈಸಿದರು.

ಪುಸ್ತಕದ ಲೇಖಕರು ನವೀನ್ ಕಿಲಾರ್ಲಹಳ್ಳಿ ಮಾತನಾಡಿ, ಮೌಲ್ಯಗಳು ಮರೆಯಾಗದಿರಲಿ ಎನ್ನುವ ಪುಸ್ತಕ ರಚಿಸಿದ್ದು ಇಂದಿನ ಆಧುನಿಕ ಜಗತ್ತಿನಲ್ಲಿ ಹದಿಹರೆಯದ ಮಕ್ಕಳು ಕ್ಷಣಿಕ ಮಾನಸಿಕ ದೈಹಿಕ ಆಕರ್ಷಣೆಗಳಿಗೆ ತುತ್ತಾಗಿ ಬಲಿಯಾಗುತ್ತಿದ್ದಾರೆ. ಗುರು ಹಿರಿಯರಿಗೆ ಮೌಲ್ಯ ಕೊಡದೆ ನಿರ್ಲಕ್ಷ್ಯ ಮಾಡುತ್ತಿರುವುದರಿಂದ ಮೌಲ್ಯಗಳು ಮರೆಯಾಗುತ್ತ ಅಪರಾಧ ಪ್ರಕರಣಗಳು ಹೆಚ್ವುತ್ತಿವೆ. ಮಕ್ಕಳಿಗೆ ಅರಿವು ಮೂಡಿಸುವ ಆ ಹಿನ್ನೆಲೆ ಹೆತ್ತವರಿಗೆ ಈ ಪುಸ್ತಕ ಅರ್ಪಿಸಲು ಪ್ರೇರಣೆಯಾಗಿದೆ ಎಂದು ಭಾವುಕರಾದರು.

ಹಿರಿಯ ಸಾಹಿತಿ ಸಣ್ಣನಾಗಪ್ಪ ಮಾತನಾಡಿ, ಕಿಲಾರ್ಲಹಳ್ಳಿಯಲ್ಲಿ ಅಂದು ರಾಸುಗಳಿಗೆ ಔಷಧಿಯನ್ನು ಕೊಟ್ಟ ಕಾರಣಕ್ಕೆ ಈ ಗ್ರಾಮಕ್ಕೆ ಕಿಲಾರನಹಳ್ಳಿ ಎಂದು ಹೆಸರು ಬಂದಿದೆ, ಅದೇ ರೀತಿ ಇಂದು ಯುವ ಜನಾಂಗಕ್ಕೆ ಜಾಗೃತಿಯ ಔಷಧಿಯನ್ನು ನೀಡುತ್ತಿರುವುದು ಹೆಮ್ಮೆಯಾಗಿದೆ ಎಂದು ಲೇಖಕ ನವೀನ್ ಕಾರ್ಯವನ್ನು ಮೆಚ್ಚಿ ಮಾತನಾಡಿದರು.

ರೈತ ಕವಿ ಡಾ. ಶಂಕರಪ್ಪ ಬಳ್ಳೆಕಟ್ಟೆ ಮಾತನಾಡಿ ರಾಜ್ಯಾದ್ಯಂತ ಸಂಚರಿಸಿ ಸುಮಾರು 5 ಲಕ್ಷಕ್ಕೂ ಅಧಿಕ ಜನ ವಿದ್ಯಾರ್ಥಿಗಳಿಗೆ ಮಾನವೀಯ ಮೌಲ್ಯಗಳು ಮತ್ತು ನೈತಿಕ ಗುಣಗಳ ಬಗ್ಗೆ ಜಾಗೃತಿ ಮೂಡಿ ಸುತ್ತ ಇಂದು ಒಂದು ಪುಸ್ತಕವನ್ನೇ ಬಿಡುಗಡೆ ಮಾಡಿರುವಂಥದ್ದು ನಿಜಕ್ಕೂ ಅಭಿನಂದನೀಯ ಎಂದು ಶ್ಲಾಘಿಸಿದರು.

ಕಾರ್ಯಕ್ರಮದಲ್ಲಿ ನಿವೃತ್ತ ಮುಖ್ಯ ಶಿಕ್ಷಕರು ಡಿ.ಎನ್ ಸತ್ಯನಾರಾಯಣ್, ಕ.ಸಾ.ಪ ಅಧ್ಯಕ್ಷರು ಕಟ್ಟಾ ನರಸಿಂಹಮೂರ್ತಿ, ಲಂಡನ್ ಡಾ. ಪ್ರಭಾಕರ್ ರೆಡ್ಡಿ, ಸಿಪಿಐ ಸುರೇಶ್, ಸಾಹಿತಿ ಡಾ. ಕರಿಯಣ್ಣ ( ಕರಿಯ ನಿಷಾಧ) ಮಾತನಾಡಿದರು.

ಕಾರ್ಯಕ್ರಮಕ್ಕೂ ಮುನ್ನ ಗ್ರಾಮದಲ್ಲಿ ಮೌಲ್ಯಗಳು ಮರೆಯಾಗದಿರಲಿ ಪುಸ್ತಕವನ್ನಿಟ್ಟಿದ್ದ ಅಲಂಕರಿಸಿದ ಬುಟ್ಟಿಯನ್ನು ಹೊತ್ತ ಹೆಣ್ಣು ಮಕ್ಕಳು ಅನೇಕ ಕನ್ನಡ ಕಲಾಭಿಮಾನಿಗಳೊಂದಿಗೆ ವಿವಿಧ ವಾದ್ಯಗಳೊಂದಿಗೆ ಮೆರವಣಿಗೆ ಸಾಗಿದ್ದು ದಾಖಲೆ ಸೃಷ್ಟಿ ಮಾಡಿತು. ರಾಜ್ಯದಲ್ಲಿ ಪುಸ್ತಕ ಮೆರವಣಿಗೆ ಜಾಥ ನಡೆಸಿ ಸಾಹಿತ್ಯ ಕ್ಷೇತ್ರದ ಒಲವು ಹೆಚ್ಚಿಸಿದ ಹಿರಿಮೆಯಿದು ಎಂದು ಹಿರಿಯ ಸಾಹಿತಿಗಳು ಕವಿಗಳು ಅಭಿಪ್ರಾಯಪಟ್ಟಿದ್ದಾರೆ.

ನವೀನ್ ಕಿಲಾರ್ಲಹಳ್ಳಿ ಅವರನ್ನು ವಿವಿಧ ಸಂಘ ಸಂಸ್ಥೆ ಹಾಗೂ ಕವಿಗಳಿಂದ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಪಬ್ಲಿಕ್ ಟಿವಿಯ ಹಿರಿಯ ಪತ್ರಕರ್ತ ಶ್ರೀನಿವಾಸ್ ಪೊನ್ನಸಮುದ್ರ, ಮಧುಗಿರಿ ಬಿಇಓ ಹನುಮಂತರಾಯಪ್ಪ, ಕಾರ್ಮಿಕ ನಿರೀಕ್ಷಕ ಹರೀಶ್ ಕುಮಾರ್ ಎಸ್, ಲೇಖಕರ ತಂದೆ ಬಸಪ್ಪ, ತಾಯಿ ಜಯಮ್ಮ, ಸೇರಿದಂತೆ ಹಲವರು ಹಾಜರಿದ್ದರು.

Website |  + posts
RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments