ಹಣ ವರ್ಗಾವಣೆಯ ಪ್ರಕರಣಗಳ ತನಿಖೆಯನ್ನು ಸಿಐಡಿಗೆ ಒಪ್ಪಿಸಲಾಗಿದೆ-ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಮರನಾಥ ರೆಡ್ಡಿ

ಬಾಗಲಕೋಟೆ: ಜಿಲ್ಲೆಯ ವಿವಿಧ ಸರಕಾರಿ ಇಲಾಖೆಗಳಲ್ಲಿ ನಡೆದ ಅಕ್ರಮ ಹಣ ವರ್ಗಾವಣೆಯ ಐದು ಪ್ರಕರಣಗಳ ತನಿಖೆಯನ್ನು ಸಿಐಡಿಗೆ ಒಪ್ಪಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಮರನಾಥ ರೆಡ್ಡಿ ಹೇಳಿದರು.
ಪ್ರವಾಸೋದ್ಯಮ, ಹಿಂದುಳಿದ ವರ್ಗ, ಜವಳಿ ಮತ್ತು ಕೈಮಗ್ಗ, ಅಲ್ಪಸಂಖ್ಯಾತ ಹಾಗೂ ಕಾರ್ಮಿಕ ಇಲಾಖೆಗಳಲ್ಲಿ ಕಳೆದ ತಿಂಗಳು 6.08 ಕೋಟಿ ರೂ.ಗಳ ಹಣ ಅಕ್ರಮ ವರ್ಗಾವಣೆ ಆಗಿರುವುದು ಪತ್ತೆಯಾಗಿತ್ತು.
ಬಾಗಲಕೋಟೆಯ ಐಡಿಬಿಐ ಬ್ಯಾಂಕಿನಲ್ಲಿರುವ ಈ ಇಲಾಖೆಗಳ ಖಾತೆಗಳಲ್ಲಿನ ಹಣವನ್ನು ಬ್ಯಾಂಕ್ ಸಿಬ್ಬಂದಿ ವಿವಿಧಒಟ್ಟು 33 ಜನರ ಖಾತೆಗಳಿಗೆ ಅಕ್ರಮವಾಗಿ ಹಣ ವರ್ಗಾವಣೆ ಮಾಡಲಾಗಿದೆ . ಈ ಐದು ಪ್ರಕರಣಗಳು ಸೆನ್ ಪೋಲಿಸ್ ಠಾಣೆಯಲ್ಲಿ ದಾಖಲಾಗಿದ್ದು, ಈಗಾಗಲೇ ಬ್ಯಾಂಕ್ ಸಿಬ್ಬಂದಿ ಸೇರಿ 19 ಜನರನ್ನು ಬಂಧಿಸಲಾಗಿದೆ.
ಪ್ರಕರಣಗಳಲ್ಲಿ ಒಂದೇ ಬ್ಯಾಂಕಿನಿಂದ 3 ಕೋಟಿ ರೂ.ಗಳಿಗಿಂತಲೂ ಹೆಚ್ಚು ಹಣ ಅಕ್ರಮವಾಗಿ ವರ್ಗಾವಣೆಯಾಗಿದ್ದನ್ನು ಗಮನಿಸಿ ತನಿಖೆಗೆ ಸಿಐಡಿಗೆ ಶಿಫಾರಸ್ಸು ಮಾಡಲಾಗಿತ್ತು. ಈ ಬಗ್ಗೆ ಪೋಲಿಸ್ ಪ್ರಧಾನ ಕಚೇರಿಯಿಂದ ಆದೇಶ ಬಂದಿದೆ. ಹಾಗಾಗಿ ಸೋಮವಾರ ಸಿಐಡಿ ತಂಡ ಬಾಗಲಕೋಟೆಗೆ ಆಗಮಿಸಲಿದೆ ಎಂದು ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಅಮರನಾಥ ರೆಡ್ಡಿ ಹೇಳಿದರು.




