ಬೆಂಗಳೂರು: ನ. 3ರಂದು ಸ್ಯಾಂಡಲ್ವುಡ್ಗೆ ಬೆಳ್ಳಂಬೆಳಗ್ಗೆಯೇ ಬರಸಿಡಿಲೊಂದು ಬಡಿದಿದೆ. ಖ್ಯಾತ ನಿರ್ದೇಶಕ ಗುರುಪ್ರಸಾದ್ ಅವರ ಮೃತದೇಹ ಬೆಂಗಳೂರು ಉತ್ತರ ತಾಲೂಕಿನ ಮಾದನಾಯಕನ ಹಳ್ಳಿಯ ಅಪಾರ್ಟ್ಮೆಂಟ್ನಲ್ಲಿ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದೆ. ಅವರ ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ಸ್ಯಾಂಡಲ್ವುಡ್ನಲ್ಲಿ ಹೊಸದೊಂದು ಟ್ರೆಂಡ್ ಸೆಟ್ ಮಾಡಿದ್ದ ನಿರ್ದೇಶಕರ ಈ ದುರಂತ ಅಂತ್ಯದ ಸುದ್ದಿಯನ್ನು ಅಭಿಮಾನಿಗಳಿಗೆ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ.
ಗುರುಪ್ರಸಾದ್ ಎಂದಾಗ ಥಟ್ಟನೆ ನೆನಪಿಗೆ ಬರುವುದು ಜಗ್ಗೇಶ್ ಅಭಿನಯದ ʼಮಠʼ ಮತ್ತು ʼಎದ್ದೇಳು ಮಂಜುನಾಥʼ ಸಿನಿಮಾಗಳು. ಈ ಎರಡು ಚಿತ್ರಗಳ ಮೂಲಕ ಸಿನಿಪ್ರೇಮಿಗಳ ಗಮನ ಸೆಳೆದ ಗುರುಪ್ರಸಾದ್ ಮತ್ತು ಜಗ್ಗೇಶ್ ಸ್ಯಾಂಡಲ್ವುಡ್ನ ಹಿಟ್ ಜೋಡಿ ಎನಿಸಿಕೊಂಡಿತ್ತು. ಕನ್ನಡ ಚಿತ್ರರಂಗದಲ್ಲಿ ಟ್ರೆಂಡ್ ಸೆಟ್ಟರ್ ಎನಿಸಿಕೊಂಡಿದ್ದ ಈ ಸಿನಿಮಾಗಳು ಬಾಕ್ಸ್ ಆಫೀಸ್ನಲ್ಲಿ ಮ್ಯಾಜಿಕ್ ಸೃಷ್ಟಿಸಿದ್ದು ಮಾತ್ರವಲ್ಲ ವಿಮರ್ಶಕರ, ಪ್ರೇಕ್ಷಕರ ಗಮನ ಸೆಳೆದಿವೆ.


