ಬೆಂಗಳೂರು: ತಮ್ಮ ಬೆಂಬಲಿಗ ಶಾಸಕರು ನಡೆಸಿದ ಡಿನ್ನರ್ ಮೀಟಿಂಗ್ ವಿಚಾರವನ್ನು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಪರೋಕ್ಷವಾಗಿ ಸಮರ್ಥಿಸಿಕೊಂಡಿದ್ದಾರೆ. ಈ ಭೇಟಿಯನ್ನು ಯಾವುದೇ ರೀತಿಯ ‘ಶಕ್ತಿ ಪ್ರದರ್ಶನ’ ಎಂದು ಕರೆಯಲು ಅವರು ನಿರಾಕರಿಸಿದ್ದಾರೆ. ಶಾಸಕರು ವೈಯಕ್ತಿಕವಾಗಿ ಪ್ರವಾಸ ಹೋಗುವುದು, ಊಟಕ್ಕೆ ಸೇರುವುದು ಅಥವಾ ದೆಹಲಿಗೆ ಹೋಗುವುದು ಅವರ ವೈಯಕ್ತಿಕ ವಿಷಯಗಳಾಗಿದ್ದು, ಇದಕ್ಕೂ ಪಕ್ಷಕ್ಕೂ ಸಂಬಂಧವಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಡಿ.ಕೆ. ಶಿವಕುಮಾರ್ ಮುಖ್ಯಮಂತ್ರಿಯಾಗಬೇಕು ಎಂದು ಶಾಸಕರು ಆಶಯ ವ್ಯಕ್ತಪಡಿಸಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ರಾಜಕೀಯದಲ್ಲಿ ಆಸೆ ಇರುವುದು ಸಹಜ , ಶಾಸಕರಲ್ಲಿ ಅನೇಕರು ಹೊಸಬರಿದ್ದು, ಅವರಿಗೂ ಮಂತ್ರಿಗಳಾಗಬೇಕು ಎಂಬ ಆಸೆ ಇರುತ್ತದೆ. ನಾವು, ಪರಮೇಶ್ವರ್, ಎಚ್.ಕೆ. ಪಾಟೀಲ್, ಸಿದ್ದರಾಮಯ್ಯ ಮತ್ತು ಮಹದೇವಪ್ಪ ಅವರಂತಹ ಹಿರಿಯರು ಬಹಳ ಚಿಕ್ಕ ವಯಸ್ಸಿನಲ್ಲೇ ಮಂತ್ರಿಗಳಾದವರು. ಈಗಿನ ಹೊಸಬರು ತಮ್ಮನ್ನೂ ಮಂತ್ರಿಗಳನ್ನಾಗಿ ಮಾಡಿ ಎಂದು ಕೇಳುವುದು ತಪ್ಪಲ್ಲ, ಈ ಎಲ್ಲಾ ಬೆಳವಣಿಗೆಗಳು ದೆಹಲಿ ಹೈಕಮಾಂಡ್ ಗಮನದಲ್ಲಿ ಇರುತ್ತವೆ ಎಂದು ಹೇಳಿದ್ದಾರೆ.
ತಮ್ಮ ಬೆಂಬಲಿಗ ಶಾಸಕರು ತಮ್ಮನ್ನು ಮುಖ್ಯಮಂತ್ರಿಯನ್ನಾಗಿ ಮಾಡಲು ಒತ್ತಾಯಿಸುತ್ತಿರುವ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಡಿ.ಕೆ. ಶಿವಕುಮಾರ್, ಈ ವಿಷಯದ ಬಗ್ಗೆ ತಮಗೆ ಯಾವುದೇ ಅಧಿಕೃತ ಮಾಹಿತಿ ಇಲ್ಲ , ಯಾವುದೇ ಶಾಸಕರು ಈ ಬಗ್ಗೆ ನೇರವಾಗಿ ತಮ್ಮ ಬಳಿ ಬಂದು ಮಾತನಾಡಿಲ್ಲ. ಅವರು ಮೊದಲು ಬಂದು ನನ್ನನ್ನು ಭೇಟಿಯಾಗಲಿ, ಆಮೇಲೆ ಈ ಬಗ್ಗೆ ಪ್ರತಿಕ್ರಿಯಿಸುತ್ತೇನೆ ಎಂದು ಕುತೂಹಲ ಉಳಿಸಿಕೊಂಡಿದ್ದಾರೆ.


