ಧಾರವಾಡ : ಅಂಗಳದಲ್ಲಿ ಆಡಿ ಬೆಳೆಯಬೇಕಿದ್ದ ಕೂಸು. ಆಡಿಸಿ ಖುಷಿ ಪಡಬೇಕಾಗಿದ್ದ ತಂದೆಯೇ, ಈ ಮಗುವಿನ ಪಾಲಿಗೆ ಯಮನಾಗಿದ್ದ. ಜನ್ಮ ಕೊಟ್ಟ ತಂದೆಯ ಕೌರ್ಯಕ್ಕೆ ಆ ಕಂದಮ್ಮ ಮಸಣ ಸೇರಿದ ಹೃದಯವಿದ್ರಾವಕ ಸ್ಟೋರಿ ಇದು.
ವೈದ್ಯರು ಶತಪ್ರಯತ್ನ ಪಟ್ಟಿದ್ರು. ಒಂದು ದಿನದ ಕಾಲ ಆಸ್ಪತ್ರೆಯ ಮಂಚದ ಮೇಲೆ ಮಲಗಿದ ಒಂದು ವರ್ಷದ ಹೆಣ್ಣು ಚಿಕಿತ್ಸೆ ಫಲಕಾರಿಯಾಗದೆ ಇಹಲೋಕ ತ್ಯಜಿಸಿದೆ.
ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯ ಸಿಬ್ಬಂದಿಗಳ ಕಣ್ಣಂಚಲ್ಲೂ ನೀರು ತರಿಸಿದ ಮನಕಲಕುವ ಪ್ರಕರಣವಿದು. ಮಗುವಿನ ಹೆಸ್ರು ಶ್ರೇಯಾ. ಇನ್ನು ಪ್ರಪಂಚ ಅರಿಯದ ಕಂದಮ್ಮ. ಧಾರವಾಡ ತಾಲೂಕಿನ ಯಾದವಾಡ ಗ್ರಾಮದಲ್ಲಿ ನಡೆದುಹೋದ ದುರಂತ ಘಟನೆ ಇದು.ಶ್ರೇಯಾ ತಂದೆ ಶಂಭುಲಿಂಗಯ್ಯ, ಅವತ್ತು ಸಂಜೆ ಮನೆಗೆ ಬಂದಿದ್ದ. ಅದ್ಯಾಕೋ ಏನೋ, ಆ ಮಗು ಒಂದೇ ಸಮನೆ ಅಳುತ್ತಿತ್ತು..ಸಮಸ್ಯೆ ಹೇಳಿಕೊಳ್ಳೋಕೆ ಇನ್ನು ಮಾತು ಬರ್ತಿರಲಿಲ್ಲ. ಕಿಲಕಿಲ ನಗುತ್ತಿದ್ದ ಮಗುವಿನ ದೇಹದಲ್ಲಿ ಅದೇನು ಭಾದೆ ಇತ್ತೋ.ಒಂದೇ ಸಮನೆ ಅಳ್ತಾ ಇತ್ತು. ಮಗುವಿನ ಅಳು ಜೋರಾದಂತೆ, ಇತ್ತ ಅಪ್ಪನ ಕೋಪ ನೆತ್ತಿಗೇರಿತ್ತು. ಪಾಪಿ ತಂದೆ ಆ ಮಗುವಿನ ಕಾಲು ಹಿಡಿದು ಗೋಡೆಗೆ ಜಾಡಿಸಿದ್ದ..ಅಷ್ಟೆ ತಲೆ ಭಾಗಕ್ಕೆ ತೀವ್ರ ಪೆಟ್ಟು ಬಿದ್ದು ಆಸ್ಪತ್ರೆಗೆ ದಾಖಲಾಗಿತ್ತು.
ಇನ್ನು, ಮಗುವನ್ನ ಉಳಿಸಿಕೊಳ್ಳಬೇಕು ಅಂತ ಕುಟುಂಬದವರು ಪರದಾಡಿದ್ರು. ಹುಬ್ಬಳ್ಳಿ ಆಸ್ಪತ್ರೆಯ ವೈದ್ಯರು ಹಗಲಿರುಳು ಶ್ರಮಿಸಿದ್ರು. ಆದ್ರೆ ಚಿಕಿತ್ಸೆ ಫಲಕಾರಿಯಾಗದೆ ಉಸಿರು ನಿಂತು ಹೋಗಿತ್ತು. ಮಗುವನ್ನ ಕೊಂದ ಪಾಪಿ ತಂದೆ ಶಂಭುಲಿಂಗಯ್ಯ, ಕುಡುಕ. ಬೇಕರಿಯಲ್ಲಿ ಕೆಲಸ ಮಾಡ್ತಿದ್ದ. ಇನ್ನು ಮಗುವಿನ ತಾಯಿ ಸವಿತಾಳಿಗೆ ಸಮಾಧಾನ ಹೇಳೋಕೆ ಸಾಧ್ಯವಾಗ್ತ ಇರಲಿಲ್ಲ. ಅಪ್ಪನ ಕಾಟಕ್ಕೆ ಬೇಸತ್ತು ಅಜ್ಜಿ ಮನೆಯಲ್ಲಿ ಪಾಪು ಬೆಳೆಯುತ್ತಿತ್ತು. ಇದೀಗ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಪಾಪಿ ಶಂಭುಲಿಂಗಯ್ಯ, ಗರಗ ಪೊಲೀಸರ ವಶದಲ್ಲಿದ್ದಾನೆ. ಇವನ ಕೃತ್ಯಕ್ಕೆ ಇಡೀ ಊರಿಗೆ ಊರೇ ಹಿಡಿ ಶಾಪಹಾಕುತ್ತಿದೆ. ಪ್ರಪಂಚ ಅರಿಯುವ ಮುನ್ನವೇ ಪಾಪಿ ತಂದೆಯ ಕ್ರೌರ್ಯಕ್ಕೆ ಮಗು ಮುದುಡಿ ಮಲಗಿದ್ದು ನಿಜಕ್ಕೂ ದುರಂತ.