ಬೆಂಗಳೂರು: ಜೆಡಿಎಸ್ ಸರ್ಕಾರ ಇದ್ದಾಗ ಬಾಲಗಂಗಾಧರ ಸ್ವಾಮೀಜಿಗಳ ಮೇಲೆ ಕೇಸ್ ಹಾಕಿದ್ರಲ್ಲಾ, ಆಗ ಸಮಯದಲ್ಲಿ ಬಿಜೆಪಿಯವರು ಎಲ್ಲೋಗಿದ್ರು? ನಿರ್ಮಲಾನಂದನಾಥ ಸ್ವಾಮೀಜಿಗಳ ಫೋನ್ ಟ್ಯಾಪ್ ಮಾಡಿದಾಗ ಯಾಕೆ ಮಾತಾಡ್ತಿಲ್ಲ? ಆಗ ಅಶೋಕ್ ಎಲ್ಲಿದ್ರು? ಶ್ರೀಗಳು ಕ್ರಿಮಿನಲ್ ತರಹ ಅವರ ನಂಬರ್ ಕೊಟ್ಟಿದ್ರು. ಅದರ ರಿಪೋರ್ಟ್ ಬಗ್ಗೆ ಗೊತ್ತಿದ್ಯಾ? ಎಂದು ಡಿಸಿಎಂ ಡಿಕೆ ಶಿವಕುಮಾರ್ ಪ್ರಶ್ನೆಗಳ ಸುರಿಮಳೆಯನ್ನೆ ಹಾಕಿದರು.
ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಅವರು ಮಾತನಾಡಿ, ಮುಸ್ಲಿಮರಿಗೆ ಮತದಾನ ಇಲ್ಲದಂತೆ ಮಾಡಬೇಕು ಎಂಬ ಚಂದ್ರಶೇಖರ ಸ್ವಾಮೀಜಿ ಹೇಳಿಕೆ ಕುರಿತು ಪ್ರತಿಕ್ರಿಯೆ ನೀಡಿದರು. ವಿಧಾನಸೌಧದಲ್ಲಿ ಸಿಎಂ ಉತ್ತರ ಕೊಟ್ಟಿದ್ದಾರೆ. ನಾನು ನಮ್ಮ ಸ್ವಾಮೀಜಿಗಳಿಗೆ ಹಾಗೂ ಎಲ್ಲ ಧರ್ಮದ ಸ್ವಾಮೀಜಿಗಳಿಗೆ ಮನವಿ ಮಾಡುತ್ತೇನೆ. ಸಂವಿಧಾನ, ಯಾರ ಹಕ್ಕುಗಳ ಬಗ್ಗೆ ಮಾತನಾಡುವುದು ಬೇಡ, ಜಾತಿಗಳ ಬಗ್ಗೆ ಮಾತನಾಡುವುದು ಬೇಡ. ನಮ್ಮದು ಮಾನವ ಧರ್ಮ, ನಮ್ಮದು ಸಂವಿಧಾನ, ಎರಡಕ್ಕೂ ನಾವು ಹೆಚ್ಚಿಗೆ ಒತ್ತು ಕೊಟ್ಟು ಹೋಗಬೇಕು. ನಾನು ಸ್ವಾಮೀಜಿಗಳು ಹಾಗೂ ಪೊಲೀಸರಿಗೆ ಹೇಳುತ್ತೇನೆ, ಯಾರು ಕೂಡ ಕಾನೂನಿಗಿಂತ ದೊಡ್ಡವರಲ್ಲ. ನಾನು ಮಾತಾಡಿದ್ರೂ ಕೇಸ್ ಹಾಕ್ತಾರೆ ಎಂದು ಹೇಳಿದರು.
ನಮ್ಮ ಕಾಂಗ್ರೆಸ್ ಆಫೀಸ್ ಹುಡುಗರ ಮೇಲೆ ಕೇಸ್ ಬಿಜೆಪಿ ಸರ್ಕಾರ ಇದ್ದಾಗ ಹಾಕಿದ್ದಾರೆ. ಸ್ವಾಮೀಜಿಗಳ ವಿಚಾರಕ್ಕೆ ಉಗ್ರ ಹೋರಾಟ ಮಾಡ್ತಿನಿ ಅಂತ ಅಶೋಕ್ ಹೇಳ್ತಾರೆ. ಜೆಡಿಎಸ್ ಸರ್ಕಾರ ಇದ್ದಾಗ ಬಾಲಗಂಗಾಧರ ಸ್ವಾಮೀಜಿಗಳ ಮೇಲೆ ಕೇಸ್ ಹಾಕಿದ್ರಲ್ಲಾ, ಆಗ ಎಲ್ಲೋಗಿದ್ರು? ಎಲ್ಲಿ ಹೋಗಿದ್ದರು ಬಿಜೆಪಿಯವರು? ನಿರ್ಮಲಾನಂದ ಸ್ವಾಮೀಜಿಗಳ ಫೋನ್ ಟ್ಯಾಪ್ ಮಾಡಿದಾಗ ಯಾಕೆ ಮಾತಾಡಲಿಲ್ಲ, ಆಗ ಅಶೋಕ್ ಎಲ್ಲೋಗಿದ್ರು? ಶ್ರೀಗಳು ಕ್ರಿಮಿನಲ್ ತರಹ ಅವರ ನಂಬರ್ ಕೊಟ್ಟಿದ್ದರು. ಅದರ ರಿಪೋರ್ಟ್ ಬಗ್ಗೆ ಗೊತ್ತಿದ್ಯಾ? ಸುಮ್ಮನೆ ಒಣ ರಾಜಕಾರಣ ಬಿಟ್ಟು ಬಿಡಿ, ಬೆಂಕಿ ಹಚ್ಚಿ ಅದರಲ್ಲಿ ಬಿಡಿ ಸೇದ್ಕೊಂಡು ಕೂತಿದ್ದಾನೆ ಅಶೋಕ್ ಎಂದು ಲೇವಡಿ ಮಾಡಿದರು.