ಬೆಂಗಳೂರು: ಐತಿಹಾಸಿಕ ಕರಗ ಉತ್ಸವ ಮತ್ತು ಗ್ರೇಟರ್ ಬೆಂಗಳೂರು ಅಡ್ಮಿನಿಸ್ಟ್ರೇಷನ್ ಚುನಾವಣೆ ಕುರಿತು ಸಚಿವ ರಾಮಲಿಂಗಾರೆಡ್ಡಿ ಮಹತ್ವದ ಮಾಹಿತಿ ನೀಡಿದ್ದಾರೆ. ಏಪ್ರಿಲ್ 6ರಂದು ಜಿಬಿಎ ಚುನಾವಣೆಗೆ ಸಂಬಂಧಿಸಿದಂತೆ ಅಧಿಸೂಚನೆ ಹೊರಡಿಸಲಾಗುವುದು ಮತ್ತು ಅದಾದ ಒಂದು ತಿಂಗಳೊಳಗೆ ಅಂದರೆ ಮೇ ತಿಂಗಳಲ್ಲಿ ಚುನಾವಣೆ ನಡೆಯಲಿದೆ ಎಂದು ತಿಳಿಸಿದ್ದಾರೆ. ಮುಜರಾಯಿ ಇಲಾಖೆಯ ಆಸ್ತಿಗಳನ್ನು ರಕ್ಷಿಸಲು ಜಿಯೋ ಪೆನ್ಸಿಂಗ್ ಮತ್ತು ಗೆಜೆಟ್ ಮಾಡುವ ಪ್ರಕ್ರಿಯೆ ಚಾಲ್ತಿಯಲ್ಲಿದೆ ಎಂದು ವಿವರಿಸಿದ್ದಾರೆ.
ವಿಶ್ವವಿಖ್ಯಾತ ಬೆಂಗಳೂರು ಕರಗ ಶಕ್ತ್ಯೋತ್ಸವಕ್ಕೆ ದಿನಾಂಕ ನಿಗದಿಯಾಗಿದ್ದು, ಮಾರ್ಚ್ 24 ರಂದು ಧ್ವಜಾರೋಹಣದ ಮೂಲಕ 11 ದಿನಗಳ ಉತ್ಸವಕ್ಕೆ ಚಾಲನೆ ಸಿಗಲಿದೆ. ಏಪ್ರಿಲ್ 1ರ ಮಧ್ಯರಾತ್ರಿ ಕರಗ ಶಕ್ತ್ಯೋತ್ಸವ ನಡೆಯಲಿದ್ದು, ಸತತ 16ನೇ ಬಾರಿಗೆ ಎ. ಜ್ಞಾನೇಂದ್ರ ಸ್ವಾಮಿ ಅವರು ಕರಗ ಹೊರಲಿದ್ದಾರೆ. ಮಾರ್ಚ್ 30 ರಂದು ಹಸಿ ಕರಗ ಉತ್ಸವ ಜರುಗಲಿದೆ. ಯಾವುದೇ ಗೊಂದಲಗಳಿಗೆ ಆಸ್ಪದ ನೀಡದಂತೆ ಉತ್ಸವವನ್ನು ಅಚ್ಚುಕಟ್ಟಾಗಿ ನಡೆಸಲು ಸರ್ಕಾರ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ.
ಕರಗ ಉತ್ಸವವನ್ನು ಮೈಸೂರು ದಸರಾ ಮಾದರಿಯಲ್ಲಿಯೇ ವೈಭವದಿಂದ ಆಚರಿಸಲು ಉದ್ದೇಶಿಸಲಾಗಿದೆ. ಅವಿನ್ಯೂ ರೋಡ್, ಮೈಸೂರು ಬ್ಯಾಂಕ್ ಸರ್ಕಲ್ ಮತ್ತು ಕಾಟನ್ ಪೇಟೆ ಸೇರಿದಂತೆ ನಗರದ ಪ್ರಮುಖ ರಸ್ತೆಗಳಲ್ಲಿ ಅದ್ಧೂರಿ ವಿದ್ಯುತ್ ದೀಪಾಲಂಕಾರ ಮಾಡಲಾಗುವುದು. ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸುವ ಬಗ್ಗೆಯೂ ಚರ್ಚೆಗಳು ನಡೆಯುತ್ತಿವೆ. ಜಿಬಿಎ ಸಮಿತಿಗೆ ಉತ್ಸವದ ಸಂಪೂರ್ಣ ಹಣಕಾಸು ಮತ್ತು ನಿರ್ವಹಣಾ ಜವಾಬ್ದಾರಿಯನ್ನು ವಹಿಸಲಾಗಿದ್ದು, ಟೆಂಡರ್ ಪ್ರಕ್ರಿಯೆಯ ಬದಲಿಗೆ ಸಮಿತಿಯೇ ನೇರವಾಗಿ ಖರ್ಚು ವೆಚ್ಚಗಳನ್ನು ನಿರ್ವಹಿಸಲಿದೆ.
ಸಿ ಗ್ರೇಡ್ ದೇವಾಲಯಗಳ ಅಭಿವೃದ್ಧಿಗಾಗಿ ರಚಿಸಲಾಗಿರುವ ವಿಷನ್ ಗ್ರೂಪ್ ಸಭೆಯನ್ನು ಇಂದು ಕರೆಯಲಾಗಿದ್ದು, ಗ್ರಾಮೀಣ ಭಾಗದ ದೇವಸ್ಥಾನಗಳ ದತ್ತು ಪ್ರಕ್ರಿಯೆಯನ್ನು ಸರಳೀಕರಣಗೊಳಿಸಲು ನಿರ್ಧಾರ ತೆಗೆದುಕೊಳ್ಳಲಾಗಿದೆ. ಕರಗ ಹೊರುವವರ ಆಯ್ಕೆ ಮತ್ತು ಉತ್ಸವದ ಉಸ್ತುವಾರಿಯನ್ನು ನಾರಾಯಣಸ್ವಾಮಿ ನೇತೃತ್ವದ ಎಂಟು ಜನರ ಸಮಿತಿ ನೋಡಿಕೊಳ್ಳಲಿದೆ. ಸಾರ್ವಜನಿಕರಿಗೆ ಯಾವುದೇ ತೊಂದರೆಯಾಗದಂತೆ ಸುಗಮ ಸಂಚಾರಕ್ಕಾಗಿ ಮತ್ತು ಸೂಕ್ತ ಜಾಗದ ವ್ಯವಸ್ಥೆಗಾಗಿ ಪೊಲೀಸರಿಗೂ ಅಗತ್ಯ ಸೂಚನೆಗಳನ್ನು ನೀಡಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ.


