ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಯಾಂಡಲ್ವುಡ್ನ ಸ್ಟಾರ್ ನಟ ದರ್ಶನ್ ಸೇರಿದಂತೆ 13 ಜನ ಆರೋಪಿಗಳನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ. ನ್ಯಾಯಾಲಯ ಆರೋಪಿಗಳನ್ನು 6 ದಿನ ಕಸ್ಟಡಿಗೆ ನೀಡಿದೆ. ಈಗಾಗಲೇ, ಪೊಲೀಸರು ಕೂಡ ಸ್ಥಳ ಮಹಜರು ನಡೆಸಿದ್ದು, ಆರೋಪಿಗಳ ವಿಚಾರಣೆ ನಡೆಸಿದ್ದಾರೆ. ಈ ನಡುವೆ, ಕೊಲೆಯನ್ನೂ ಸಮರ್ಥನೆ ಮಾಡಿಕೊಂಡು ದರ್ಶನ್ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಮಾಡಿ ಹರಿಬಿಡುತ್ತಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್, ವಿಡಿಯೋ ಹಾಗೂ ಕಮೆಂಟ್ಗಳಲ್ಲಿ ‘ದರ್ಶನ್ ತಪ್ಪು ಮಾಡಿಲ್ಲ. ತಪ್ಪು ಮಾಡಿದವರಿಗೆ ಶಿಕ್ಷೆ ನೀಡಿದ್ದಾರೆ’ ಎಂದು ಕೊಲೆಯನ್ನು ಸಮರ್ಥನೆ ಮಾಡಿಕೊಳ್ಳುತ್ತಿದ್ದಾರೆ. ಇದಲ್ಲದೇ, ಇನ್ನು ನೂರಾರು ಅಭಿಮಾನಿಗಳು ಬೆಂಗಳೂರಿನ ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆ ಎದುರು ಜಮಾಯಿಸಿದ್ದಾರೆ.
ಪೊಲೀಸ್ ಠಾಣೆ ಎದುರೇ ಬಿಡು ಬಿಟ್ಟಿರುವ ದರ್ಶನ್ ಅಭಿಮಾನಿಗಳು ವರದಿ ಮಾಡುತ್ತಿರುವ ಮಾಧ್ಯಮದ ಸಿಬ್ಬಂದಿ ಜತೆಗೆ ಕ್ಯಾತೆ ತೆಗೆಯುತ್ತಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದನ್ನು ಹರಿಬಿಟ್ಟಿದ್ದಾರೆ.
ದರ್ಶನ್ ಅಭಿಮಾನಿಯಾಗಿರುವ ಯುವತಿಯೊಬ್ಬರು ವಿಡಿಯೋ ಮಾಡಿದ್ದು, “ಬಾಸ್, ನೀವು ಅಪರಾಧಿನೋ, ನಿರಪರಾಧಿನೋ ಗೊತ್ತಿಲ್ಲ. ಒಟ್ಟಿನಲ್ಲಿ ನಿಮಗೇನು ಆಗಬಾರದು ಬಾಸ್. ಆದರೆ, ನಿಮ್ಮಣ್ಣ ಈ ರೀತಿ ನೋಡತಾ ಇರೋದು ಮನಸ್ಸಿಗೆ ತುಂಬಾ ಕಷ್ಟ ಆಗತಾ ಇದೆ. ನಿಮಗೇನು ಆಗಬಾರದು ಬಾಸ್” ಎಂದು ಅಳುತ್ತಾ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ಮತ್ತೋರ್ವ ಮಹಿಳೆ, “ನೀವು ಮೀಡಿಯಾದವರು ಹೇಳುತ್ತಿದ್ದಿರಾ ಅವನನ್ನ (ರೇಣುಕಾಸ್ವಾಮಿ) ಕರೆದುಕೊಂಡು ಬಂದು ಕೊಲೆ ಮಾಡಿದ್ರು ಅಂತ. ಆದರೆ, ಅವನ ಸಾವು ಅಲ್ಲಿ ಇತ್ತು. ಅಷ್ಟೇ ಅಲ್ಲಿ ಸತ್ತ. ಅದರಲ್ಲೇನಿದೆ. ನಿಮಗೆ ಯಾಕೆ ಅರ್ಥ ಆಗತಾ ಇಲ್ಲ ಅಂತ ಗೊತ್ತಾಗತಾ ಇಲ್ಲ. ಈಗ ಗರ್ಭಿಣಿಗೆ ಮಗು ಯಾವಾಗ ಆಗುತ್ತೆ ಅಂತ ಹೇಳೋಕೆ ಆಗಲ್ಲ ಹಾಗೆನೇ, ಮನುಷ್ಯನ ಸಾವು ಯಾವಾಗ ಬರುತ್ತೋ ಹೇಳೋಕೆ ಆಗಲ್ಲ. ಅವನ ಸಾವು ಅಲ್ಲಿತ್ತು. ಬಸ್ನಲ್ಲಿ ಹೋಗೋವಾಗ ಮಿಸ್ ಆಗಿ ನಾವು ಸತ್ತರೇ, ಅದಿಕ್ಕೆ ಬಸ್ನವರೇ ಕಾರಣ ಆಗಲ್ಲ. ನಮ್ಮ ಸಾವು ಅಲ್ಲಿರುತ್ತೆ ಅಷ್ಟೇ” ಎಂದು ಹೇಳಿದ್ದಾರೆ.
ಇನ್ನು, ಈ ವಿಚಾರಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣದಲ್ಲಿ ಹಲವಾರು ಕಾಮಿಡಿ ಎನ್ನುವಂತೆಯೂ ವಿಡಿಯೋ ಮಾಡಿ ಹರಿಬಿಡುತ್ತಿದ್ದಾರೆ. ಸದ್ಯ ಡಿ ಬಾಸ್ನಂತೆ ಆರ್ ಬಾಸ್ ಎಂದು ಹೇಳಿಕೊಳ್ಳುವ ರಕ್ಷಕ್ ಬುಲೆಟ್ ಅವರ ಕುರಿತಂತೆ ಮಿಮ್ಸ್ಗಳು ಕೂಡ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.
ಜಾಹೀರಾತು ನೀಡಲು ಸಂಪರ್ಕಿಸಿ
Phone Number : +91-9164072277
Email id : salesatfreedomtv@gmail.com