ದಾವಣಗೆರೆ: ಸದನದಲ್ಲಿ ನಡೆದ ಘಟನೆಗೆ ಸಂಬಂಧಿಸಿದಂತೆ ವಿಧಾನಪರಿಷತ್ ಸದಸ್ಯ ಸಿ.ಟಿ ರವಿ ಏಳು ಪುಟಗಳ ದೂರು ನೀಡಿದ್ದಾರೆ. ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಕೂಡ ದೂರು ನೀಡುವುದಾಗಿ ಖಚಿತಪಡಿಸಿದ್ದಾರೆ. ಇಬ್ಬರ ದೂರು ಪರಿಶೀಲಿಸಿ ಸದನದ ಪರಿಮಿತಿಯಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಸಭಾಪತಿ ಬಸವರಾಜ ಹೊರಟ್ಟಿ ತಿಳಿಸಿದರು.
ಸಿಟಿ ರವಿ ಮೇಲೆ ಹಲ್ಲೆಗೆ ಯತ್ನ
ಸಿಟಿ ರವಿ ಅಕ್ಷೇಪಾರ್ಹ ಪದಬಳಕೆ ಮಾಡಿದ್ದಾರೆ ಎಂದು ಆರೋಪಿಸಿದ ಬೆನ್ನಲ್ಲೆ ಸುವರ್ಣ ಸೌಧದ ಒಳಗೆ ಲಕ್ಷ್ಮೀ ಹೆಬ್ಬಾಳಕರ್ ಬೆಂಬಲಿಗರು ಎಂಟ್ರಿ ಕೊಟ್ಟು ಗದ್ದಲ ಉಂಟು ಮಾಡಿದ್ದರು. ಮಾತ್ರವಲ್ಲ ಸಿಟಿ ರವಿ ಮೇಲೆ ಹಲ್ಲೆಗೂ ಮುಂದಾಗಿದ್ದರು. ಇದಾದ ಬಳಿಕ ಹಲ್ಲೆಗೆ ಮುಂದಾಗಿರುವುದನ್ನು ಖಂಡಿಸಿ ಸಿಟಿ ರವಿ ಪ್ರತಿಭಟನೆ ನಡೆಸುತ್ತಿದ್ದಾಗ ಪೊಲೀಸರು ಅವರನ್ನು ಬಂಧಿಸಿದ್ದರು. ಸದ್ಯ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಭಾಪತಿ ಬಸವರಾಜ ಹೊರಟ್ಟಿ ಅವರು ದಾವಣಗೆರೆಯಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.
ಎಲ್ಲಾ ರೀತಿಯ ರೆಕಾರ್ಡ್ ಪರಿಶೀಲಿಸಿ ತೀರ್ಮಾನ ಕೊಟ್ಟಿದ್ದೇನೆ
ಮೆಲ್ಮನೆಯಲ್ಲಿ ಸಿಟಿ ರವಿ ಹಾಗೂ ಲಕ್ಷ್ಮೀ ಹೆಬ್ಬಾಳ್ಕರ್ ನಡುವಿನ ಗಲಾಟೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಪರಿಷತ್ ಸಭಾಪತಿ ಬಸವರಾಜ್ ಹೊರಟ್ಟಿ, ಸರ್ಕಾರ ಅದನ್ನು ಸಿಬಿಐ ಕೊಡುತ್ತೊ, ಎಲ್ಲಿಗೆ ಕೊಡುತ್ತೋ ಅದರ ಬಗ್ಗೆ ನಂಗೆ ಗೊತ್ತಿಲ್ಲ. ಡಿಸೆಂಬರ್ 19 ರಂದು ಎಲ್ಲಾ ರೀತಿಯ ರೆಕಾರ್ಡ್ ಪರಿಶೀಲಿಸಿ ತೀರ್ಮಾನ ಕೊಟ್ಟಿದ್ದೇನೆ. ಆದ್ರೆ, ಇವರೇನಂತಾರೆ ಅಣದ್ರೆ ಬೈದಿದ್ದು ಟಿವಿಯಲ್ಲಿ ಬಂದಿದೆ ಅಂತಾರೆ. ಕೌನ್ಸಿಲ್ ಟಿವಿ, ಆಡಿಯೋ ಅಥೆಂಟಿಕ್ ಆಗುತ್ತೆ ಎಂದರು.
ಟಿವಿಯಲ್ಲಿ ಬಂದಿದ್ದನ್ನು ಎಫ್ಎಸ್ಎಲ್ಗೆ ಕಳಿಸೋಣ, ಏನು ಬರುತ್ತೆ ನೋಡೋಣ ಅಂದೆ. ಇದನ್ನು ಮುಂದುವರೆಸೋದು ಬೇಡ ಅಂದೆ. ಆದರೆ, ಅದು ಅವರ ವೈಯಕ್ತಿಕ ಅದರ ಬಗ್ಗೆ ನಾನೇನು ಹೇಳಲ್ಲ ಎಂದರು.