
ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಯುದ್ಧ ಸಂಘರ್ಷದಿಂದಾಗಿ ಭಾರತದಲ್ಲಿ ಎದುರಾಗಿದ್ದ ಅಡುಗೆ ಅನಿಲದ ಅಭಾವಕ್ಕೆ ಕೊನೆಗೂ ಮುಕ್ತಿ ಸಿಕ್ಕಿದೆ. ಭಾರತದ ರಾಜತಾಂತ್ರಿಕ ಪ್ರಯತ್ನಗಳ ಫಲವಾಗಿ, ಲಕ್ಷಾಂತರ ಟನ್ ಎಲ್ಪಿಜಿ ಹೊತ್ತ ಬೃಹತ್ ನೌಕೆಗಳು ಹಾರ್ಮುಜ್ ಜಲಸಂಧಿಯನ್ನು ದಾಟಿ ಭಾರತದತ್ತ ಮುಖ ಮಾಡಿವೆ. ಭಾರತೀಯ ನೌಕಾಪಡೆಯ ಕಟ್ಟುನಿಟ್ಟಿನ ಬೆಂಗಾವಲಿನೊಂದಿಗೆ ‘ಶಿವಾಲಿಕ್’ ಮತ್ತು ‘ನಂದಾದೇವಿ’ ಎಂಬ ಎರಡು ಪ್ರಮುಖ ಹಡಗುಗಳು ಸುರಕ್ಷಿತವಾಗಿ ಮುಕ್ತ ಸಮುದ್ರವನ್ನು ಪ್ರವೇಶಿಸಿವೆ.
ಶಿಪ್ಪಿಂಗ್ ಕಾರ್ಪೊರೇಷನ್ ಆಫ್ ಇಂಡಿಯಾಗೆ ಸೇರಿದ ‘ಶಿವಾಲಿಕ್’ ಹಡಗು ಸುಮಾರು 40,000 ಮೆಟ್ರಿಕ್ ಟನ್ ಅನಿಲವನ್ನು ಹೊತ್ತಿದ್ದರೆ, ‘ನಂದಾದೇವಿ’ ಹಡಗು 46,000 ಮೆಟ್ರಿಕ್ ಟನ್ ಎಲ್ಪಿಜಿಯೊಂದಿಗೆ ಬರುತ್ತಿದೆ. ಹಾರ್ಮುಜ್ ಜಲಸಂಧಿಯಂತಹ ಅತ್ಯಂತ ಸಂಘರ್ಷದ ವಲಯವನ್ನು ಈ ಹಡಗುಗಳು ಯಶಸ್ವಿಯಾಗಿ ದಾಟಿರುವುದು ಭಾರತದ ಪಾಲಿಗೆ ದೊಡ್ಡ ಜಯವಾಗಿದೆ. ಇನ್ನು ಎರಡು ದಿನಗಳ ಒಳಗಾಗಿ ಈ ನೌಕೆಗಳು ಮುಂಬೈ ಅಥವಾ ಕಾಂಡ್ಲಾ ಬಂದರನ್ನು ತಲುಪುವ ನಿರೀಕ್ಷೆಯಿದ್ದು, ಇದರಿಂದ ದೇಶದಲ್ಲಿ ಉಂಟಾಗಿದ್ದ ಅನಿಲ ಕೊರತೆ ಸಂಪೂರ್ಣವಾಗಿ ನೀಗಲಿದೆ.
ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರು ಕಳೆದ ಹಲವು ದಿನಗಳಿಂದ ಇರಾನ್ ಸರ್ಕಾರದೊಂದಿಗೆ ನಿರಂತರ ಸಂಪರ್ಕದಲ್ಲಿದ್ದರು. ಅಂತಿಮವಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಇರಾನ್ ಅಧ್ಯಕ್ಷ ಮಸೌದ್ ಪೆಜೆಶ್ಕಿಯಾನ್ ಅವರೊಂದಿಗೆ ನಡೆಸಿದ ಮಾತುಕತೆಯು ಫಲ ನೀಡಿದೆ. ಅಮೆರಿಕ ಮತ್ತು ಇಸ್ರೇಲ್ ಬೆಂಬಲಿತ ಹಡಗುಗಳಿಗೆ ಕಟ್ಟುನಿಟ್ಟಿನ ನಿರ್ಬಂಧ ಹೇರಿರುವ ಇರಾನ್, ಭಾರತದ ಸ್ನೇಹ ಹಸ್ತಕ್ಕೆ ಸ್ಪಂದಿಸಿ ನಮ್ಮ ದೇಶದ ಧ್ವಜವಿರುವ ಹಡಗುಗಳ ಸಂಚಾರಕ್ಕೆ ವಿಶೇಷ ಅನುಮತಿ ನೀಡಿದೆ




