ನವದೆಹಲಿ: ‘ಸಂವಿಧಾನವು ಆರ್ಎಸ್ ಎಸ್ನ ನಿಯಮಗಳ ಪುಸ್ತಕವಲ್ಲ ಎಂಬುದನ್ನು ಪ್ರಧಾನಿ ನರೇಂದ್ರ ಮೋದಿ ಅರ್ಥ ಮಾಡಿಕೊಂಡಿಲ್ಲ. ಲೋಕಸಭೆ ಚುನಾವಣೆ ಯಲ್ಲಿ ಬಿಜೆಪಿ ಭರ್ಜರಿ ಬಹುಮತ ಪಡೆದಿದ್ದರೆ ಈಗಾಗಲೇ ಸಂವಿಧಾನವನ್ನು ಬದಲಿಸುವ ಕೆಲಸದಲ್ಲಿ ತೊಡಗಿರುತ್ತಿತ್ತು ಎಂದು ಸಂಸದೆ ಪ್ರಿಯಾಂಕಾ ಗಾಂಧಿ ತಮ್ಮ ಮೊದಲ ಭಾಷಣದಲ್ಲೇ ಆಡಳಿತ ಪಕ್ಷದ ವಿರುದ್ಧ ಟೀಕಾಪ್ರಹಾರ ಮಾಡಿದ್ದಾರೆ.
ಲೋಕಸಭೆಯಲ್ಲಿ ನಡೆದ ಸಂವಿಧಾನದ ಕುರಿತ ಚರ್ಚೆಯ ವೇಳೆ ಮಾತನಾಡಿದ ವಯನಾಡು ಸಂಸದೆ ಪ್ರಿಯಾಂಕಾ, ‘ಸಂವಿಧಾನವು ನ್ಯಾಯ, ಒಗ್ಗಟ್ಟು ಹಾಗೂ ಸ್ವಾತಂತ್ರ್ಯವನ್ನು ರಕ್ಷಿಸುವ ಕವಚವಾಗಿದೆ. ಆದರೆ ಇದನ್ನು ಬದಲಿಸಲು ಬಿಜೆಪಿ ನೇತೃತ್ವದ ಸರ್ಕಾರ ಕಳೆದ 10 ವರ್ಷಗಳಿಂದ ಪ್ರಯತ್ನಿಸುತ್ತಿದೆ. ಪ್ರಧಾನಿಯವರು ಸಂವಿಧಾನವನ್ನು ಹಣೆಗೆ ಒತ್ತಿಕೊಳ್ಳುತ್ತಾರೆ. ಆದರೆ ಸಂಭಲ್ ಹಾಗೂ ಹಾಡ್ರಸ್ನಲ್ಲಿ ನ್ಯಾಯಕ್ಕಾಗಿ ಕೂಗು ಕೇಳಿ ಬಂದಾಗ ಅವರ ಹಣೆಯಲ್ಲಿ ಒಂದೇ ಒಂದು ನೆರಿಗೆ ಮೂಡಲಿಲ್ಲ’ ಎಂದರು. ಅಂತೆಯೇ, ‘ಭಾರತದ ಸಂವಿಧಾನವು ಸಂಘದ ವಿಧಾನ ಅಲ್ಲ ಎಂಬುದನ್ನು ಅವರು ಅರ್ಥ ಮಾಡಿಕೊಂಡಿಲ್ಲ. ಸಂವಿ ಧಾನ ಏಕತೆಯ ಸಂದೇಶ ಸಾರಿದರೆ, ಬಿಜೆಪಿ ಮಾತ್ರ ವಿಭಜಕ ರಾಜಕೀಯದಲ್ಲಿ ತೊಡಗಿದೆ’ ಎಂದು ಕಿಡಿಕಾರಿದರು. ಕಳೆದ ಲೋಕಸಭೆಯಲ್ಲಿ ಬಿಜೆಪಿಗೆ ಪೂರ್ಣ ಬಹುಮತ ಬಂದಿದ್ದರೆ ಈಗಾಗಲೇ ಸಂವಿಧಾನವನ್ನು ಬದಲಿಸುವ ಕೆಲಸಕ್ಕೆ ಕೈ ಹಾಕಿರುತ್ತಿದ್ದರು ಎಂದು ಆರೋಪಿಸಿದ ಅವರು, ‘ಸತ್ಯವೇನೆಂದರೆ, ದೇಶದ ಜನ ಸಂವಿಧಾನವನ್ನು ಕಾದಿಟ್ಟುಕೊಳ್ಳುತ್ತಾರೆ ಎಂಬುದನ್ನು ಮನಗಂಡಿರುವುದರಿಂದಲೇ ಬಿಜೆಪಿ ಸಂವಿಧಾನದ ಜಪ ಮಾಡುತ್ತಿದೆ’ ಎಂದರು.
ನನ್ನ ಮೊದಲ ಸಂಸತ್ ಭಾಷಣಕ್ಕಿಂತಲೂ ಉತ್ತಮ : ರಾಹುಲ್ ಗಾಂಧಿ
ನನ್ನ ಸಹೋದರಿ ಪ್ರಿಯಾಂಕಾರ ಭಾಷಣ ಅದ್ಭುತವಾಗಿತ್ತು. ಅದು ನಾನು ಸದನದಲ್ಲಿ ಮಾಡಿದ ಮೊದಲ ಭಾಷಣಕ್ಕಿಂತಲೂ ಅತಿ ಉತ್ತಮವಾಗಿತ್ತು. ಇದೇ ರೀತಿ ಎಲ್ಲರೂ ಮುಂದುವರಿಸೋಣ.