ಇಂದು ಭಾರತದ ಸಂವಿಧಾನ ದಿನವಾಗಿದ್ದು, ದೇಶದ ಯುವಜನರಿಗೆ ಸಂವಿಧಾನದ ಮೌಲ್ಯಗಳನ್ನು ತಿಳಿಸುವ ಉದ್ದೇಶದಿಂದ ಈ ದಿನವನ್ನು ಆಚರಿಸಲಾಗುತ್ತದೆ. ಸಂವಿಧಾನ ಶಿಲ್ಪಿ ಡಾ. ಭೀಮರಾವ್ ಅಂಬೇಡ್ಕರ್ ಅವರು ಭಾರತೀಯ ನಾಗರಿಕರಿಗೆ ಸಂಬಂಧಿಸಿದ ಹಕ್ಕುಗಳು ಹಾಗೂ ಕಾನೂನುಗಳನ್ನು ವಿವರಿಸುವ ಕಾನೂನು ದಾಖಲೆಯ ತಯಾರಿಸುವಲ್ಲಿ ಬಹುದೊಡ್ಡ ಪಾತ್ರವನ್ನು ವಹಿಸಿದ್ದಾರೆ. ಅಂಬೇಡ್ಕರ್ ಸೇರಿದಂತೆ ಅಂತಹ ಮಹಾನ್ ವ್ಯಕ್ತಿಗಳ ಶ್ರಮವನ್ನು ಈ ದಿನದಂದು ನೆನಪಿಸಲಾಗುತ್ತದೆ.ಜಗತ್ತಿನ ಅತಿ ದೂಡ್ಡ ಲಿಖಿತ ಸಂವಿಧಾನವೆಂದರೆ ಅದುವೇ ಭಾರತೀಯ ಸಂವಿಧಾನ. 2015 ರಿಂದ ನವೆಂಬರ್ 26ರಂದು ಸಂವಿಧಾನ ದಿನವನ್ನು ಆಚರಿಸಲಾಗುತ್ತಿದೆ.ಈ ವಿಶೇಷ ದಿನದಂದು ದೇಶದ ಎಲ್ಲ ಸರ್ಕಾರಿ ಕಚೇರಿ,ಶಾಲಾ-ಕಾಲೇಜುಗಳಲ್ಲಿ ಮತ್ತು ಕೆಲವು ಕಡೆ ಸಾರ್ವಜನಿಕ ಸ್ಥಳಗಳಲ್ಲಿ ಸಂವಿಧಾನ ದಿನವನ್ನು ಆಚರಿಸುತ್ತಾರೆ.ಭಾರತೀಯ ಸಂವಿಧಾನದ ಬಗ್ಗೆ ವಿದ್ಯಾರ್ಥಿಗಳಿಗೆ ಮತ್ತು ಜನರಿಗೆ ಅರಿವು ಮೂಡಿಸಲಾಗುತ್ತದೆ.
ಬ್ರಿಟಿಷರ ಆಳ್ವಿಕೆಯಿಂದ ಸ್ವಾತಂತ್ರ್ಯ ಪಡೆದ ನಂತರ, ಸಂವಿಧಾನ ಸಭೆಯು ಭಾರತದ ಸಂವಿಧಾನವನ್ನು ರಚಿಸುವ ಜವಾಬ್ದಾರಿಯನ್ನು ಸಮಿತಿಗೆ ವಹಿಸಿತು. ಹೌದು, 1946 ರಲ್ಲಿ ಕ್ಯಾಬಿನೆಟ್ ಮಿಷನ್ ಭಾರತಕ್ಕೆ ಬಂದಾಗ ಸಂವಿಧಾನ ಸಭೆಯನ್ನು ರಚಿಸಲು ಒಪ್ಪಿಗೆ ದೊರೆಯಿತು. ಅದರಂತೆ ಪ್ರಾದೇಶಿಕ ವಿಧಾನಸಭೆಗಳಿಗೆ ಚುನಾವಣೆ ನಡೆದು 389 ಸದಸ್ಯರು ಚುನಾಯಿತರಾದರು. ಇದರಲ್ಲಿ ರಾಜ-ಮಹಾರಾಜರ ಆಳ್ವಿಕೆಯ 93 ಸದಸ್ಯರೂ ಸೇರಿದ್ದರು. ಇದರ ಮೊದಲ ಸಭೆ 1946 ರ ಡಿ. 9 ರಂದು ನವದೆಹಲಿಯಲ್ಲಿ ನಡೆಯಿತು. ಈ ಸಭೆಗೆ ಡಾ. ಬಾಬು ರಾಜೇಂದ್ರ ಪ್ರಸಾದರು ಸಂವಿಧಾನ ಸಭೆಯ ಅಧ್ಯಕ್ಷರಾಗಿದ್ದರು. ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರು ಸಂವಿಧಾನ ರಚನಾ ಸಮಿತಿಯ ಅಧ್ಯಕ್ಷರಾದರು. ಆ ಬಳಿಕ 1949 ಜನವರಿ 26ರಂದು ಭಾರತದ ಸಂವಿಧಾನವನ್ನು ಅಂಗೀಕರಿಸಲಾಯಿತು.
1950ರ ಜನವರಿ 26ರಂದು ಅಸ್ತಿತ್ವಕ್ಕೆ ಬಂತು. ಭಾರತದ ಸಂವಿಧಾನವು 448 ವಿಧಿಗಳು, 25 ಭಾಗಗಳು, 12 ಶೆಡ್ಯೂಲ್, 5 ಅನುಬಂಧಗಳು, 98 ತಿದ್ದುಪಡಿಗಳನ್ನು ಹೊಂದಿದೆ. ಸಂವಿಧಾನ ರಚನಾ ಸಮಿತಿಯಲ್ಲಿ 284 ಮಂದಿ ಸದಸ್ಯರಿದ್ದರು. ಅವರಲ್ಲಿ 15 ಮಂದಿ ಮಹಿಳೆಯರಿದ್ದರು. 2015ರಿಂದ ಸಂವಿಧಾನ ದಿನ ಎಂದು ಆಚರಿಸಲು ಪ್ರಾರಂಭಿಸಲಾಯಿತು. ಈ ದಿನದ ಆಚರಣೆಗೂ ಮೊದಲು ಈ ದಿನವನ್ನು ಕಾನೂನು ದಿನವನ್ನಾಗಿ ಆಚರಿಸಲಾಗುತ್ತಿತ್ತು. ದೇಶದ ಜನತೆಗೆ ಸಂವಿಧಾನದ ಬಗ್ಗೆ ಅರಿವು ಮೂಡಿಸಲು ಸಲುವಾಗಿ ಈ ದಿನದ ಆಚರಣೆಯೂ ಅಸ್ತಿತ್ವಕ್ಕೆ ಬಂದಿತು. ಈ ಸಂವಿಧಾನ ದಿನವನ್ನು ಸಂವಿಧಾನ್ ದಿವಸ್ ಎಂದೂ ಕೂಡ ಕರೆಯಲಾಗುತ್ತದೆ.