ರಾಜ್ಯ ಕಾಂಗ್ರೆಸ್ ಸರ್ಕಾರದಲ್ಲಿಸಂಪುಟ ಸರ್ಜರಿ ಸಂಚಲನ ಶುರುವಾಗಿದ್ದು, ಸಚಿವ ಸ್ಥಾನದ ಆಕಾಂಕ್ಷಿಗಳು ದೆಹಲಿ ಮಟ್ಟದಲ್ಲಿ ಭರ್ಜರಿ ಲಾಬಿ ನಡೆಸುತ್ತಿದ್ದಾರೆ. ಸಿದ್ದರಾಮಯ್ಯ ನೇತೃತ್ವದ ಸರ್ಕಾರದಲ್ಲಿ ಮಂತ್ರಿ ಪಟ್ಟ ಅಲಂಕರಿಸಲು ಶಾಸಕರು ಮತ್ತು ಎಂಎಲ್ಸಿಗಳು ಈಗ ಹೈಕಮಾಂಡ್ ನಾಯಕರ ಮನೆ ಬಾಗಿಲು ತಟ್ಟುತ್ತಿದ್ದಾರೆ. ಸಚಿವ ಸ್ಥಾನಕ್ಕಾಗಿ ಒತ್ತಡ ತಂತ್ರ ತೀವ್ರಗೊಂಡಿದ್ದು, ಒಬ್ಬೊಬ್ಬರೇ ನಾಯಕರು ದೆಹಲಿಯತ್ತ ದೌಡಾಯಿಸಿ ತಮ್ಮ ಮನದಿಂಗಿತವನ್ನು ವರಿಷ್ಠರ ಮುಂದೆ ಬಿಚ್ಚಿಡುತ್ತಿದ್ದಾರೆ.
ಈಗಾಗಲೇ ಹಿರಿಯ ನಾಯಕ ಬಿ.ಕೆ. ಹರಿಪ್ರಸಾದ್ ಅವರು ಸೋನಿಯಾ ಗಾಂಧಿ, ಮಲ್ಲಿಕಾರ್ಜುನ ಖರ್ಗೆ ಮತ್ತು ರಾಹುಲ್ ಗಾಂಧಿಯವರನ್ನು ಭೇಟಿ ಮಾಡಿ ಸಚಿವ ಸ್ಥಾನಕ್ಕೆ ಬಲವಾದ ಬೇಡಿಕೆ ಇಟ್ಟಿದ್ದಾರೆ. ಇವರ ಬೆನ್ನಲ್ಲೇ ಎಂಎಲ್ಸಿ ಸಲೀಂ ಅಹ್ಮದ್ ಕೂಡ ಎಐಸಿಸಿ ಅಧ್ಯಕ್ಷ ಖರ್ಗೆ ಮತ್ತು ಕೆ.ಸಿ. ವೇಣುಗೋಪಾಲ್ ಅವರನ್ನು ಭೇಟಿ ಮಾಡಿ ತಮಗೂ ಅವಕಾಶ ನೀಡುವಂತೆ ಮನವಿ ಮಾಡಿದ್ದಾರೆ. ಮತ್ತೊಂದೆಡೆ ಅಜಯ್ ಸಿಂಗ್ ಅವರು ವರಿಷ್ಠರ ಮುಂದೆ ಹಾಜರಾಗಿ ಲಾಬಿ ನಡೆಸಿದ್ದರೆ, ಎಂಎಲ್ಸಿ ರಾಜೇಂದ್ರ ಅವರು “ತಂದೆಗೆ ಅವಕಾಶ ನೀಡಿ, ಇಲ್ಲವಾದರೆ ನನಗೆ ನೀಡಿ” ಎಂಬ ಹೊಸ ಡಿಮ್ಯಾಂಡ್ ಮುಂದಿಟ್ಟಿದ್ದಾರೆ.
ಒಟ್ಟಿನಲ್ಲಿ ದೆಹಲಿಯಲ್ಲಿ ಈಗ ಕಾಂಗ್ರೆಸ್ ಆಕಾಂಕ್ಷಿಗಳ ಪರೇಡ್ ನಡೆಯುತ್ತಿದ್ದು, ಸುರ್ಜೇವಾಲಾ ಮತ್ತು ವೇಣುಗೋಪಾಲ್ ಅವರ ಮೂಲಕ ಹೈಕಮಾಂಡ್ ಮೇಲೆ ಒತ್ತಡ ಹೇರಲಾಗುತ್ತಿದೆ. ಮುಂದಿನ ದಿನಗಳಲ್ಲಿ ಉಳಿದ ಶಾಸಕರು ಕೂಡ ದೆಹಲಿಯತ್ತ ತೆರಳುವ ಸಾಧ್ಯತೆ ದಟ್ಟವಾಗಿದ್ದು, ಸಂಪುಟ ಪುನಾರಚನೆ ಕಸರತ್ತು ರಾಜ್ಯ ರಾಜಕಾರಣದಲ್ಲಿ ತೀವ್ರ ಕುತೂಹಲ ಕೆರಳಿಸಿದೆ.


