ಎಸಿಪಿ ಚಂದನ್ ವಿರುದ್ಧ ತೊಡೆತಟ್ಟಿ ಬೆಂಗಳೂರಿಗೆ ಬಂದು ಪ್ರತಿಭಟನೆಗೆ ಮುಂದಾದ ಮಾಜಿ ಸಂಸದ ಪ್ರತಾಪ್ ಸಿಂಹಗೆ ಆಮ್ ಆದ್ಮಿ ಪಾರ್ಟಿ ಠಕ್ಕರ್ ಕೊಟ್ಟಿದೆ. ಪೊಲೀಸರಿಗೆ ಸವಾಲ್ ಹಾಕಿ ಪ್ರತಾಪ್ ಸಿಂಹ ವಿರುದ್ಧ ಆಪ್ ದೂರು ದಾಖಲಿಸಿದೆ. ಪ್ರತಾಪ್ ಸಿಂಹ ಸಾಮಾಜಿಕ ಜಾಲತಾಣದಲ್ಲಿ ಪ್ರಚೋದನೆ ನೀಡಿದ್ದಾರೆ. ಇವರ ವಿರುದ್ಧ ಕೂಡಲೇ ಕ್ರಮ ಕೈಗೊಳ್ಳಿ ಎಂದು ಆಪ್ ಆಗ್ರಹಿಸಿದೆ. ಆಪ್ ಯುವ ಘಟಕದ ಅಧ್ಯಕ್ಷ ಜಿ.ಹೆಚ್.ಲೋಹಿತ್ ಕುಮಾರ್ ಬಸವೇಶ್ವರ ನಗರ ಠಾಣೆಗೆ ದೂರು ನೀಡಿದ್ದಾರೆ. ಎಸಿಪಿ ಚಂದನ್ ಪುನೀತ್ ಕೆರೆಹಳ್ಳಿಗೆ ಬಟ್ಟೆ ಬಿಚ್ಚಿಸಿ ಹೊಡೆದಿದ್ದಾರೆಂದು ಪ್ರತಾಪ್ ಸಿಂಹ ಆರೋಪಿಸಿದ್ದರು. ಇದನ್ನು ಖಂಡಿಸಿ ನಾಳೆ ಎಸಿಪಿ ಕಚೇರಿಗೆ ಬರುತ್ತೇವೆ. ನೀವೂ ಬನ್ನಿ ಎಂದು ಜನರನ್ನು ಪ್ರಚೋದಿಸಿದ್ದರು. ಜೊತೆಗೆ ನೀನೂ ಇರು ಎಂದು ಎಸಿಪಿ ಚಂದನ್ ಕುಮಾರ್ಗೆ ಪ್ರತಾಪ್ ಸಿಂಹ ಸವಾಲ್ ಹಾಕಿದ್ರು. ಇದನ್ನು ಖಂಡಿಸಿ ಆಪ್ ದೂರು ನೀಡಿದೆ. ತಮ್ಮ ವಿರುದ್ಧ ಸವಾಲು ಹಾಕಿದ ಮಾಜಿ ಸಂಸದನ ವಿರುದ್ಧ ಪೊಲೀಸರು ಈ ದೂರು ಆಧರಿಸಿ ಕ್ರಮ ಕೈಗೊಳ್ಳೋ ಸಾಧ್ಯತೆ ದಟ್ಟವಾಗಿದೆ.