ನವದೆಹಲಿ: ದೆಹಲಿಯ ಚಾಣಕ್ಯಪುರಿಯಲ್ಲಿರುವ ನೂತನ ಕರ್ನಾಟಕ ಭವನವನ್ನು ಸಿಎಂ ಸಿದ್ದರಾಮಯ್ಯ ನಾಳೆ(ಏ.2) ರಂದು ಉದ್ಘಾಟಿಸಲಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
51 ವರ್ಷ ಹಳೆಯದಾದ ಮೂರು ಅಂತಸ್ತಿನ ಕಟ್ಟಡವನ್ನು ಕೆಡವಿ ಅದೇ ಜಾಗದಲ್ಲಿ ಅಂದಾಜು 82 ಕೋಟಿ ರೂ. ವೆಚ್ಚದಲ್ಲಿ ಐದು ಅಂತಸ್ತಿನ ನೂತನ ಕಟ್ಟಡ ಕಟ್ಟುವುದಕ್ಕೆ ಕರ್ನಾಟಕ ಸರ್ಕಾರ 2019ರಲ್ಲಿ ಅನುಮೋದನೆ ನೀಡಿತ್ತು. ಆಗ ಎಚ್ಡಿ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದರು. ನೂತನ ಕಟ್ಟಡಕ್ಕೆ ಕಾವೇರಿಯೆಂದು ಹೆಸರಿಡಲಾಗಿದೆ. ಇದೀಗ ಕಟ್ಟಡ ನಿರ್ಮಾಣದ ವೆಚ್ಚ 140 ಕೋಟಿ ರೂ.ಗೆ ಏರಿದೆ.
50 ವರ್ಷಕ್ಕೂ ಹಳೆಯದಾದ ಕರ್ನಾಟಕ ಭವನ ಕಟ್ಟಡವನ್ನು ನವದೆಹಲಿ ಮುನ್ಸಿಪಲ್ ಕೌನ್ಸಿಲ್ ಅಸುರಕ್ಷಿತ ಎಂದು ಘೋಷಿಸಿತ್ತು.
ಇನ್ನು ನೂತನ ಕರ್ನಾಟಕ ಭವನದ ಉದ್ಘಾಟನಾ ಸಮಾರಂಭದಲ್ಲಿ AICC ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್, ಪ್ರಲ್ಹಾದ್ ಜೋಶಿ, ಹೆಚ್.ಡಿ.ಕುಮಾರಸ್ವಾಮಿ, ವಿ. ಸೋಮಣ್ಣ, ಶೋಭಾ ಕರಂದ್ಲಾಜೆ ಸೇರಿದಂತೆ ಅನೇಕ ಗಣ್ಯರು ಭಾಗವಹಿಸಲಿದ್ದಾರೆ.
ಇನ್ನು ರಾಜ್ಯ ಸರ್ಕಾರದಿಂದ ಡಿಸಿಎಂ ಡಿಕೆ ಶಿವಕುಮಾರ್, ಸತೀಶ್ ಜಾರಕಿಹೊಳಿ, ಹೆಚ್.ಸಿ.ಮಹದೇವಪ್ಪ ಕೂಡ ಭಾಗವಹಿಸಲಿದ್ದಾರೆ.
‘ಕಾವೇರಿ’ ಕರ್ನಾಟಕ ಭವನ ಕಟ್ಟಡವು ರಾಜ್ಯದ ರಾಜ್ಯಪಾಲರು, ಮುಖ್ಯಮಂತ್ರಿಗಳು, ಕರ್ನಾಟಕ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳು ಮತ್ತು ಇತರ ವಿವಿಐಪಿಗಳಿಗೆ ವಿಶೇಷ ಸೂಟ್ಗಳನ್ನು ಒಳಗೊಂಡಿದೆ.