ಪಂಜಾಬ್: ತರಣ್ ಜಿಲ್ಲೆಯ ಉಸ್ಮಾನ್ ಕಾನೂನು ಕಾಲೇಜಿನಲ್ಲಿ ಅತ್ಯಂತ ಆಘಾತಕಾರಿ ಘಟನೆಯೊಂದು ನಡೆದಿದೆ. ಕಾನೂನು ಶಿಕ್ಷಣ ಪಡೆಯುತ್ತಿದ್ದ ಮೊದಲ ವರ್ಷದ ವಿದ್ಯಾರ್ಥಿ ಪ್ರಿನ್ಸ್ ರಾಜ್ ಎಂಬಾತ, ತನ್ನ ಸಹಪಾಠಿ ಸಂದೀಪ್ ಕೌರ್ ಎಂಬ ಯುವತಿಯ ಮೇಲೆ ಗುಂಡು ಹಾರಿಸಿ ಹತ್ಯೆ ಮಾಡಿದ್ದಾನೆ. ಆಕೆ ಸ್ಥಳದಲ್ಲೇ ಸಾವನ್ನಪ್ಪಿದ ಬೆನ್ನಲ್ಲೇ, ವಿದ್ಯಾರ್ಥಿಯು ಅದೇ ಪಿಸ್ತೂಲಿನಿಂದ ತನಗೂ ಶೂಟ್ ಮಾಡಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ಭಯಾನಕ ದೃಶ್ಯವು ಕಾಲೇಜಿನ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ಸಂದೀಪ್ ಕೌರ್ ತನ್ನ ಗೆಳತಿಯೊಂದಿಗೆ ಬೆಂಚ್ ಮೇಲೆ ಕುಳಿತಿದ್ದಾಗ ಅಲ್ಲಿಗೆ ಬಂದ ಆರೋಪಿ ಹಠಾತ್ತನೆ ಗುಂಡು ಹಾರಿಸಿದ್ದಾನೆ. ಇದರಿಂದ ಗಾಬರಿಗೊಂಡ ಆಕೆ ಕಿರುಚುತ್ತಾ ಕೆಳಕ್ಕೆ ಬಿದ್ದಿದ್ದಾಳೆ. ಘಟನೆಯ ತೀವ್ರತೆಗೆ ಇಡೀ ಕಾಲೇಜು ಆವರಣವೇ ಬೆಚ್ಚಿಬಿದ್ದಿದೆ. ಈ ಕೃತ್ಯದ ಬಳಿಕ ಆರೋಪಿಯು ಯಾವುದೇ ಹಿಂಜರಿಕೆಯಿಲ್ಲದೆ ತನಗೆ ತಾನು ಗುಂಡಿಟ್ಟುಕೊಂಡು ಪ್ರಾಣ ಕಳೆದುಕೊಂಡಿದ್ದಾನೆ. ಸದ್ಯ ಪೊಲೀಸರು ಕಾಲೇಜನ್ನು ಸೀಲ್ ಮಾಡಿದ್ದು, ಸಿಸಿಟಿವಿ ದೃಶ್ಯಾವಳಿಗಳನ್ನು ವಶಕ್ಕೆ ಪಡೆದು ತನಿಖೆ ಆರಂಭಿಸಿದ್ದಾರೆ.
ಮೃತ ಯುವತಿಯ ಪೋಷಕರು ಪ್ರಿನ್ಸ್ ರಾಜ್ ಕಳೆದ ಕೆಲವು ದಿನಗಳಿಂದ ತಮ್ಮ ಮಗಳಿಗೆ ನಿರಂತರವಾಗಿ ಕಿರುಕುಳ ನೀಡುತ್ತಿದ್ದ ಎಂದು ಆರೋಪಿಸಿದ್ದಾರೆ. ಅಷ್ಟೇ ಅಲ್ಲದೆ, ಒಂದೆರಡು ಬಾರಿ ಅವರ ಮನೆಗೆ ಬಂದಿದ್ದ ಮಗಳಿಗೆ ಜೀವ ಬೆದರಿಕೆ ಕೂಡ ಹಾಕಿದ್ದ ಎಂದು ಪೋಷಕರು ಹೇಳಿದ್ದಾರೆ. ಶಿಕ್ಷಣ ಸಂಸ್ಥೆಯೊಳಗೆ ವಿದ್ಯಾರ್ಥಿಯೊಬ್ಬ ಮಾರಕಾಸ್ತ್ರವನ್ನು ಹೊತ್ತು ತಂದರೂ ಕಾಲೇಜು ಆಡಳಿತ ಮಂಡಳಿ ಅದನ್ನು ಗಮನಿಸದಿರುವುದು ಪೋಷಕರ ಆಕ್ರೋಶಕ್ಕೆ ಕಾರಣವಾಗಿದೆ.
ಈ ಬಗ್ಗೆ ಮಾಹಿತಿ ನೀಡಿರುವ ಡಿಎಸ್ಪಿ ಜಗ್ಬೀರ್ ಸಿಂಗ್ , ಇಬ್ಬರೂ ಒಂದೇ ತರಗತಿಯ ವಿದ್ಯಾರ್ಥಿಗಳಾಗಿದ್ದರು ಎಂದು ಖಚಿತಪಡಿಸಿದ್ದಾರೆ. ತರಗತಿ ಆರಂಭವಾಗುವ ಸಮಯದಲ್ಲಿ ಈ ಘಟನೆ ಸಂಭವಿಸಿದೆ. ಆರೋಪಿಯು ಪಿಸ್ತೂಲನ್ನು ಎಲ್ಲಿಂದ ಪಡೆದ ಮತ್ತು ಈ ಕೃತ್ಯದ ಹಿಂದೆ ನಿಖರವಾದ ಕಾರಣವೇನು ಎಂಬ ಬಗ್ಗೆ ತನಿಖೆ ನಡೆಯುತ್ತಿದೆ.


