ರಾಮನಗರ: ಚನ್ನಪಟ್ಟಣ ಉಪಚುನಾವಣೆಯಲ್ಲಿ ಟಿಕೆಟ್ ಕುರಿತಾಗಿ ಬಿಜೆಪಿ ಮತ್ತು ಜೆಡಿಎಸ್ ನಾಯಕರ ಹೇಳಿಕೆಗಳು ತೀವ್ರವಾಗುತ್ತಿದೆ. ಸುದ್ದಿಗಾರರೊಂದಿಗೆ ಮಾತಾನಾಡಿದ ಬಿಜೆಪಿ ರಾಜ್ಯ ಪ್ರಧಾನ ವಕ್ತಾರ ಅಶ್ವತ್ಥನಾರಾಯಣ ಗೌಡ ಅವರು, ಚನ್ನಪಟ್ಟಣ ಉಪ ಚುನಾವಣೆಯಲ್ಲಿ ಎನ್ಡಿಎ ಟಿಕೆಟ್ ಯೋಗೇಶ್ವರ್ಗೆ ಸಿಗುತ್ತದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು. ಚನ್ನಪಟ್ಟಣದಲ್ಲಿ ಕುಮಾರ ಸ್ವಾಮಿ ಮತ್ತು ಯೋಗೇಶ್ವರ್ ನಿಂತರೆ ಮಾತ್ರ ಗೆಲ್ಲಲು ಸಾಧ್ಯ. ಯೋಗೇಶ್ವರ್ ನಿಂತರೆ ನೂರಕ್ಕೆ ನೂರರಷ್ಟು ಗೆಲ್ಲುತ್ತಾರೆ. ಯೋಗೇಶ್ವರ್ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಗೆಲುವಿಗೆ ಶ್ರಮಿಸಿದ್ದಾರೆ. ಪಕ್ಷದ ಸಂಘಟನೆಗೆ ಅವರ ಕೊಡುಗೆ ಸಾಕಷ್ಟು ಇದೆ. ಅನುಭವಿ ರಾಜಕಾರಣಿಯಾಗಿರುವ ಅವರು ಸ್ವತಂತ್ರವಾಗಿ ನಿಂತರೂ 60 ಸಾವಿರಕ್ಕೂ ಹೆಚ್ಚು ಮತ ಪಡೆಯುತ್ತಾರೆ ಎಂದ ಅಶ್ವತ್ಥನಾರಾಯಣ ಗೌಡ ಹೇಳಿದರು. ಜೆಡಿಎಸ್ ಕ್ಷೇತ್ರದಲ್ಲಿ ಗೆಲುವು ಸಾಧಿಸಿದೆಯಾದರೂ ಕುಮಾರಸ್ವಾಮಿ ಯೋಗೇಶ್ವರ್ ಅವರಿಗೆ ಬಿಟ್ಟು ಕೊಡುತ್ತಾರೆ ಎಂಬ ವಿಶ್ವಾಸವಿದೆ. ನಾವು ಲೋಕಸಭೆಯಲ್ಲಿ ಕೋಲಾರ ಬಿಟ್ಟು ಕೊಟ್ಟಿದ್ದೇವೆ. ಚನ್ನಪಟ್ಟಣ ಬಿಟ್ಟು ಕೊಡುತ್ತಾರೆ ಎಂದರು.