ಬೆಂಗಳೂರು: ರಾಜ್ಯದ ಮೂರು ವಿಧಾನ ಸಭಾ ಕ್ಷೇತ್ರಗಳಿಗೆ ಉಪ ಚುನಾವಣೆ ಘೋಷಣೆ ಯಾಗಿರುವ ಹಿನ್ನೆಲೆಯಲ್ಲಿ ಹಿಂದುಳಿದ ವರ್ಗಗಳ ಆಯೋಗದ ಸಮೀಕ್ಷಾ ವರದಿ ಹಾಗೂ ಒಳಮೀಸಲಾತಿ ವಿಷಯಗಳನ್ನು ಸದ್ಯಕ್ಕೆ ಮುಂದೂಡಲು ಸರಕಾರ ಚಿಂತನೆ ನಡೆಸಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ “ಕಾವೇರಿ’ ನಿವಾಸ ದಲ್ಲಿ ನಡೆದ ಸಚಿವರ ಸಭೆಯಲ್ಲಿ ಜಾತಿಗಣತಿ ಮತ್ತು ಒಳ ಮೀಸಲಾತಿ ವಿಚಾರವೂ ಚರ್ಚೆಗೆ ಬಂದಿದ್ದು, ಉಪಚುನಾವಣೆ ಪ್ರಸ್ತುತ ಘೋಷಣೆಯಾಗಿರುವುದರಿಂದ ನೀತಿಸಂಹಿತೆ ಬಾಧಕ ವಾಗುತ್ತದೆಯೇ ಇಲ್ಲವೇ ಎಂಬ ಗೊಂದಲ ಏರ್ಪಟ್ಟಿದೆ.
ಒಳ ಮೀಸ ಲಾತಿ ವಿಚಾರದಲ್ಲಿ ಸುಪ್ರೀಂ ಕೋರ್ಟ್ ಆದೇಶ ಕೊಟ್ಟಿರುವುದು ಉಪ ಚುನಾ ವಣೆ ಘೋಷಣೆಗೆ ಮುನ್ನ ಆಗಿರುವುದರಿಂದ ನೀತಿಸಂಹಿತೆ ಅಡ್ಡಿಯಾಗುವುದಿಲ್ಲ ಎಂದು ಕೆಲವು ಸಚಿವರು ಅಭಿಪ್ರಾಯ ಮಂಡಿಸಿದರೆ, ಮತದಾರರ ಮೇಲೆ ಪ್ರಭಾವ ಬೀರುತ್ತದೆ ಎನ್ನುವ ಅಂಶವನ್ನು ಚುನಾವಣಾ ಆಯೋಗ ಪರಿಗಣಿಸಬಹುದು. ಹೀಗಾಗಿ ಈ ಕುರಿತು ಚುನಾವಣಾ ಆಯೋಗದಿಂದ ಸ್ಪಷ್ಟನೆ ಕೇಳುವಂತೆ ಸಲಹೆಯನ್ನು ಇನ್ನು ಕೆಲವು ಸಚಿವರು ನೀಡಿದರು. ಈಗಾಗಲೇ ಚುನಾವಣಾ ಆಯೋಗಕ್ಕೆ ಸ್ಪಷ್ಟನೆ ಕೇಳುವಂತೆ ಮುಖ್ಯ ಕಾರ್ಯದರ್ಶಿಗೆ ಸೂಚಿಸಲಾಗಿದ್ದು, ಸ್ಪಷ್ಟನೆ ಬಂದ ಅನಂತರ ಈ ವಿಚಾರವನ್ನು ಸಚಿವ ಸಂಪುಟ ಸಭೆಯ ಮುಂದಿಟ್ಟು ಚರ್ಚಿಸೋಣ ಎಂಬ ನಿಲುವಿಗೆ ಬರಲಾಯಿತು.
ಅ. 28ಕ್ಕೆ ಸಚಿವ ಸಂಪುಟ ಸಭೆ ಈ ಹಿಂದೆ ಅ. 18ರ ಸಚಿವ ಸಂಪುಟ ಸಭೆಯಲ್ಲಿ ಜಾತಿಗಣತಿ ವರದಿ ಮಂಡಿಸುವುದಾಗಿ ಹೇಳಿದ್ದ ಸಿಎಂ, ಸಭೆಯನ್ನೇ ನಡೆಸಲಿಲ್ಲ. ಅ. 24ರಂದು ಸಚಿವ ಸಂಪುಟ ಸಭೆ ಕರೆದಿದ್ದು, ಅಲ್ಲಿ ವಿಷಯ ಬರಲಿದೆ ಎನ್ನಲಾಗಿತ್ತು. ಆದರೆ ಈಗ ಅ. 24ರ ಸಂಪುಟ ಸಭೆಯೂ ಮುಂದೂಡಿಕೆಯಾಗಿದ್ದು, ಅ. 28ರ ಸೋಮವಾರ ನಡೆಸಲು ಸಿಎಂ ತೀರ್ಮಾನಿಸಿದ್ದಾರೆ. ಒಂದು ವೇಳೆ ನೀತಿ ಸಂಹಿತೆ ಬಾಧಕವಾಗುತ್ತದೆ ಎನ್ನುವುದಾದರೆ, ಫಲಿತಾಂಶದ ಅನಂತರವಷ್ಟೇ ಒಳಮೀಸಲಾತಿ ಹಾಗೂ ಜಾತಿಗಣತಿ ವರದಿ ಚರ್ಚೆಗೆ ಬರಲಿದೆ. ಅಲ್ಲಿಯವರೆಗೆ ಸರಕಾರ ಬೀಸುವ ದೊಣ್ಣೆಯಿಂದ ತಪ್ಪಿಸಿಕೊಂಡಂತಾಗುತ್ತದೆ.