
ಹುಬ್ಬಳ್ಳಿ ಪೊಲೀಸ್ ಠಾಣೆ ಮೇಲಿನ ದಾಳಿಕೋರರ ವಿರುದ್ಧ ಕೇಸುಗಳನ್ನು ಹಿಂಪಡೆಯಲು ರಾಜ್ಯ ಸರ್ಕಾರ ಕೈಗೊಂಡ ರಾಜಕೀಯ ಸಮರಕ್ಕೆ ನಾಂದಿ ಹಾಡಿದೆ. ಸರ್ಕಾರದ ನಿಲುವನ್ನು ಆಕ್ಷೇಪಿಸಿ ರಾಜ್ಯಾದ್ಯಂತ ಹೋರಾಟಕ್ಕೆ ಬಿಜೆಪಿ ಸಜ್ಜಾಗಿದೆ. ಸರ್ಕಾರ ಗಲಭೆಕೋರರಿಗೆ ರಕ್ಷಣೆ ಕೊಡುತ್ತಿದೆ ಎಂದು ಜೆಡಿಎಸ್ ಕಿಡಿಕಾರಿವೆ. ಇನ್ನೊಂದೆಡೆ, ಸಿಎಂ, ಡಿಸಿಎಂ ಸೇರಿದಂತೆ ಕಾಂಗ್ರೆಸ್ನ ಅನೇಕ ನಾಯಕರು ಈ ನಿರ್ಧಾರ ಸಮರ್ಥಿಸಿಕೊಂಡಿದ್ದಾರೆ. ಆರೆಸ್ಸೆಸ್, ಭಜರಂಗದಳದ ಮೇಲಿನ ಕೇಸನ್ನು ಬಿಜೆಪಿ ವಾಪಸ್ ಪಡೆದಿಲ್ಲವೇ ಎಂದು ಪ್ರಶ್ನಿಸಿದ್ದಾರೆ. ಒಟ್ಟಿನಲ್ಲಿ ಈ ನಿರ್ಧಾರ ರಾಜಕೀಯ ಗಲಭೆಯಾಗಿ ಮಾರ್ಪಟ್ಟಿದೆ.
ಕೋರ್ಟ್ ಒಪ್ಪಿದರೆ ಮಾತ್ರ ಕೇಸ್ ವಾಪಸ್

ಸುಳ್ಳು ಅಥವಾ ಉದ್ದೇಶ ಪೂರ್ವಕವಾಗಿ ಮೊಕದ್ದಮೆ ಹಾಕಿದ್ದರೆ, ಹೋರಾಟ ಮಾಡಿದಾಗ ಕೇಸ್ ಹಾಕಿದ್ದರೆ ಅಂತಹ ಕೇಸ್ಗಳನ್ನು ವಾಪಸ್ ಪಡೆಯಲು ಸಚಿವ ಸಂಪುಟದ ಉಪ ಸಮಿತಿಯಲ್ಲಿ ಅವಕಾಶ ಇದೆ. ಅದರಂತೆ ಕ್ಯಾಬಿನೆಟ್ ಮುಂದೆ ತಂದು ಒಪ್ಪಿಗೆ ಕೊಡಲಾಗಿದೆ. ಇದು ಕೋರ್ಟ್ಗೆ ಸಲ್ಲಿಕೆ ಆಗಬೇಕು. ಕೋರ್ಟ್ ಅನುಮತಿ ಕೊಟ್ಟರೆ ಮಾತ್ರ ಕೇಸ್ ಮರಳಿ ಪಡೆಯಲಾಗುವುದು.
ಬಿಜೆಪಿಯವರ ಪಟ್ಟಿ ನಾವು ಕೊಡುತ್ತೇವೆ

ಹಳೇ ಹುಬ್ಬಳ್ಳಿ ಘಟನೆಯಲ್ಲಿ ಪ್ರಕರಣ ದಾಖಲಾಗಿದ್ದವರು ಯಾವ ದುಷೃತ್ಯದಲ್ಲಿ ಭಾಗಿಯಾಗಿಲ್ಲವೆಂದು ಸಾಬೀತಾಗಿದೆ. ಹೀಗಾಗಿ ಆ ಕೇಸ್ ಹಿಂಪಡೆಯಲಾಗುತ್ತಿದೆ. ಬಿಜೆಪಿಯವರು ಎಷ್ಟು ಕೇಸ್ ವಾಪಸ್ ತೆಗೆದುಕೊಂಡಿದ್ದಾರೆ? ಬಿಜೆಪಿ ಕಾರ್ಯಕರ್ತರು, ಆರ್ಎಸ್ಎಸ್, ವಿಎಚ್ಪಿ, ಭಜರಂಗ ದಳದವರ ಮೇಲಿನ ಅಹಿತಕರ ಚಟುವಟಿಕೆಗಳ ಕೇಸ್ ವಾಪಸ್ ಪಡೆದಿಲ್ಲವೇ? ಅದರ ಪಟ್ಟಿ ನಾವು ಕೊಡುತ್ತೇವೆ.
ರಾಜ್ಯ ಸರ್ಕಾರದಿಂದ ದ್ವೇಷ ರಾಜಕಾರಣ

ಹಳೇ ಹುಬ್ಬಳ್ಳಿಯ ಗಲಭೆಯಲ್ಲಿ ಭಾಗಿಯಾದ ಆರೋಪಿಗಳ ವಿರುದ್ಧದ ಕೇಸ್ಗಳನ್ನು ರಾಜ್ಯ ಸರ್ಕಾರ ವಾಪಸ್ ಪಡೆಯಲು ನಿರ್ಧರಿಸಿರುವುದನ್ನು ಗಮನಿಸಿದರೆ ರಾಜ್ಯ ಸರ್ಕಾರ ಗಲಭೆಕೋರರಿಗೆ ರಕ್ಷಣೆ ಕೊಡುತ್ತಿದ್ದು, ದ್ವೇಷದ ರಾಜಕಾರಣ ಮಾಡುತ್ತಿದೆ. ರಾಜ್ಯ ಕಾಂಗ್ರೆಸ್ ಸರ್ಕಾರ ಕಾನೂನು ಬಾಹಿರ ಷಟುವಟಿಕೆ ನಡೆಸಿದವರಿಗೆ ರಿಲೀಫ್ ಕೊಟ್ಟಿದೆ.
ಎನ್ಐಎ ಕೈಯಲ್ಲಿದೆ, ಕೇಸ್ ವಾಪಸ್ ಅಸಾಧ್ಯ

ಈ ಗಲಭೆ ಸಂಬಂಧ ಎನ್ಐಎ ತನಿಖೆ ನಡೆಯುತ್ತಿದೆ. ಈ ಹಂತದಲ್ಲಿ ಪ್ರಕರಣ ಹಿಂಪಡೆಯುವ ಅಧಿಕಾರ ರಾಜ್ಯ ಸರ್ಕಾರಕ್ಕಿಲ್ಲ. ಆ ಸತ್ಯಗೊತ್ತಿದ್ದರೂ ಸರ್ಕಾರ ಒಂದು ಸಮುದಾಯದ ಓಲೈಕೆಗಾಗಿ ಆತುರದ ನಿರ್ಧಾರ ಕೈಗೊಂಡಿದೆ. ಸರ್ಕಾರದ ಈ ನಿರ್ಧಾರದಿಂದ ಇನ್ನು ಮುಂದೆ ಪೊಲೀಸ್ ಠಾಣೆ ಮೇಲೆ ದಾಳಿ ಮಾಡಿದರೂ ಪೊಲೀಸರು ಏನೂ ಮಾಡುವಂತಿಲ್ಲ ಎಂಬ ಸಂದೇಶ ನೀಡಿದಂತಾಗಿದೆ.
ಸಿಎಂ ಸಿದ್ದರಾಮಯ್ಯ ದುತಹಂಕಾರದ ವರ್ತನೆ

ಹಳೇ ಹುಬ್ಬಳಿ ಪೊಲೀಸ್ ಠಾಣೆ ಮೇಲೆ ದಾಳಿ ಪ್ರಕರಣವನ್ನು ರಾಷ್ಟ್ರೀಯ ತನಿಖಾ ಸಂಸ್ಥೆ ತನಿಖೆ ನಡೆಸುತ್ತಿದೆ. ಹೀಗಾಗಿ ಆರೋಪಿಗಳ ವಿರುದ್ಧದ ಕೇಸುಗಳನ್ನು ಹಿಂಪಡೆಯಬಾರದು ಎಂದು ಒತ್ತಾಯಿಸಿ ಬಿಜೆಪಿ ಶಾಸಕರು ಸಿಎಂಗೆ ಮನವಿ ಸಲ್ಲಿಸಲು ಮುಂದಾಗಿದ್ದುರು. ಆದರೆ ಅದಕ್ಕೆ ಅವಕಾಶ ನೀಡದೆ ಇರುವ ಮೂಲಕ ಸಿಎಂ ಸಿದ್ದರಾಮಯ್ಯ ಅವರು ದುರಹಂಕಾದಿಂದ ವರ್ತಿಸಿದ್ದಾರೆ.
ಮುಸ್ಲಿಮರ ಹೆಸರು ಬಂದಾಗ ಹೋರಾಟ

ಯಾವುದೇ ಪ್ರಕರಣದಲ್ಲಿ ಮುಸ್ಲಿಮರ ಹೆಸರು ಕೇಳಿಬಂದಾಗ ಮಾತ್ರ ಬಿಜೆಪಿಯವರು ಹೋರಾಟಕ್ಕೆ ಮುಂದಾಗುತ್ತಾರೆ. ಗುಜರಾತ್ ಸರ್ಕಾರ ಬಿಲ್ಕಿಸ್ ಬಾನೋ ಕೇಸ್ ಯಾವ ಆಧಾರದ ಮೇಲೆ ಹಿಂಪಡೆಯಿತು, ಹರ್ಯಾಣದಲ್ಲಿ ಅತ್ಯಾಚಾರ ಕೇಸ್ ಎದುರಿಸುತ್ತಿರುವ ಬಾಬಾ ರಾಮ ರಹೀಂ ಚುವಾವಣೆ ವೇಳೆ ಪೆರೋಲ್ ಮೇಲೆ 15 ಬಾರಿ ಹೇಗೆ ಹೊರಗೆ ಬಂದಿದ್ದರು. ಇದು ತುಷ್ಟೀಕರಣ ರಾಜಕಾರಣ ಅಲ್ಲವೇ?
ಸಿ.ಟಿ ರವಿ ಪ್ರಕರಣದ ಬಗ್ಗೆ ಯಾಕೆ ಹೇಳಲ್ಲ?

ಹಳೇ ಹುಬ್ಬಳ್ಳಿ ಗಲಭೆ ಸಂಬಂಧ ಪ್ರಕರಣಗಳನ್ನು ಹಿಂಪಡೆಯಲು ನಿರ್ಧರಿಸಿದ್ದರ ಬಗ್ಗೆ ಮಾತನಾಡುತ್ತಿರುವ ಬಿಜೆಪಿಯವರು, ಈ ಹಿಂದೆ ಪರಿಷತ್ ಸದಸ್ಯ ಸಿ.ಟಿ ರವಿ ವಿರುದ್ಧ ಪ್ರಕರಣ ಹಿಂಪಡೆದಿರುವ ಬಗ್ಗೆ ಏಕೆ ಹೇಳುತ್ತಿಲ್ಲ? ಗಲಭೆ ಪ್ರಕರಣಗಳನ್ನು ಕಾಲ ಕಾಲಕ್ಕೆ ಎಲ್ಲಾ ಸರ್ಕಾರಗಳನ್ನು ಕೂಡ ಹಿಂಪಡೆಯುತ್ತಾ ಬಂದಿವೆ. ಅದೇ ರೀತಿ ಹುಬ್ಬಳ್ಳಿ ಗಲಭೆ ಪ್ರಕರಣವನ್ನು ವಾಪಸ್ ಪಡೆದಿರಬಹುದು.




