ಒಟ್ಟಾವಾ: ಖಲಿಸ್ತಾನಿ ಉಗ್ರ ನಿಜ್ಜರ್ ಹತ್ಯೆ ಪ್ರಕರಣದಲ್ಲಿ ಭಾರತದ ಜತೆ ಜಟಾಪಟಿಗಿಳಿದಿರುವ ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೋ ಶೀಘ್ರದಲ್ಲೇ ರಾಜೀನಾಮೆ ನೀಡುವ ಸಾಧ್ಯತೆ ಇದೆ. ಟ್ರುಡೋ ಪ್ರತಿನಿಧಿಸುವ ಲಿಬರಲ್ ಪಕ್ಷದ ಸಂಸದರೇ ಪ್ರಧಾನಿ ವಿರುದ್ಧ ತಿರುಗಿಬಿದ್ದು ರಾಜೀನಾಮೆಗೆ ಆಗ್ರಹಿಸಿದ್ದಾರೆ ಎಂದು ವರದಿಯಾಗಿದೆ.
ಪಕ್ಷದ ಸಂಸದರ ಬುಧವಾರದ ಸಭೆಯಲ್ಲಿ ಜಸ್ಟಿನ್ ವಿರುದ್ಧ ಸದಸ್ಯರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇತ್ತೀಚಿನ ಚುನಾವಣೆಗಳಲ್ಲಿ ಪಕ್ಷದ ಕಳಪೆ ಸಾಧನೆಗೆ ಟ್ರುಡೋ ನಾಯಕತ್ವವೇ ಕಾರಣ ಎಂದು ಸದಸ್ಯರು ಆಕ್ರೋಶ ಹೊರಹಾಕಿದ್ದಾರೆ. ಮುಂದಿನ ಚುನಾ ವಣೆಗೆ ಮೊದಲು ಟ್ರುಡೊ ಪ್ರಧಾನಿ ಪಟ್ಟದಿಂದ ಕೆಳಗೆ ಇಳಿಯಬೇಕು ಎಂದು ಆಗ್ರಹಿಸಿದ್ದಾರೆ ಎಂದು ಕೆನಡಾ ಮಾಧ್ಯಮಗಳು ವರದಿ ಮಾಡಿವೆ.
3 ಗಂಟೆಗಳ ಕಾಲ ನಡೆದ ಸಭೆಯಲ್ಲಿ ಪಕ್ಷೆ ಎಲ್ಲಾ ಸಂಸದರಿಗೆ ಮಾತನಾಡಲು ಅವಕಾಶ ನೀಡಲಾಗಿತ್ತು. ಕ್ಯಾಬಿನೆಟ್ ಸಚಿವರಲ್ಲದ 20 ಸಂಸದರು ತೀವ್ರ ವಾಗ್ದಾಳಿ ನಡೆಸಿದರು. ಅ.28ಕ್ಕೆ ಮುನ್ನವೇ ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡುವಂತೆ ಆಗ್ರಹಿಸುವ ಪತ್ರಕ್ಕೆ 24 ಸಂಸದರು ಸಹಿ ಹಾಕಿದ್ದಾರೆ ಎಂದು ವರದಿಯಾಗಿದೆ.
ಖಲಿಸ್ತಾನ್ ಉಗ್ರ ಹರದೀಪ್ ಸಿಂಗ್ ನಿಜ್ಜರ್ ಕೊಲೆ ಪ್ರಕರಣದಲ್ಲಿ ಭಾರತದ ಅಧಿಕಾರಿಗಳ ಕೈವಾಡವಿದೆ ಎಂದು ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೊ ವರ್ಷದಿಂದಲೂ ಆರೋಪಿಸುತ್ತಾ ಬಂದಿದ್ದಾರೆ. ಆದರೆ ಇದೇ 16 ರಂದು ತಮ್ಮ ಆರೋಪ ಸಂಬಂಧ ಸಾಕ್ಷ್ಯ ನೀಡಬೇಕಾದ ಸಂದರ್ಭ ಎದುರಾದಾಗ, ‘ತಾವು ಯಾವುದೇ ಪುರಾವೆಯನ್ನು ಭಾರತ ಸರಕಾರಕ್ಕೆ ಸಲ್ಲಿಸಿಲ್ಲ’ ಎಂದು ಜಸ್ಟಿನ್ ಟ್ರುಡೋ ಒಪ್ಪಿಕೊಂಡಿದ್ದಾರೆ. ಇದರಿಂದ ಅಂತಾರಾಷ್ಟ್ರೀಯ ಮಟ್ಟದಲ್ಲಿ ಕೆನಡಾಗೆ ಮುಖಭಂಗ ಅನುಭವಿಸುವಂತಾಗಿದೆ. ಈ ವಿಚಾರವಾಗಿಯೂ ಪಕದ ಸಂಸದರು ಟೀಕಿಸಿದ್ದಾರೆ ಎನ್ನಲಾಗಿದೆ.